ಲೋಕಸಭೆಯಲ್ಲಿ ಇಂದು; ಚಳಿಗಾಲದ ಅಧಿವೇಶನ ಇಂದು ಅಂತ್ಯ
ನವದೆಹಲಿ, ಡಿಸೆಂಬರ್ 22; ಸಂಸತ್ ಚಳಿಗಾಲದ ಅಧಿವೇಶ ನವೆಂಬರ್ 29ರಂದು ಆರಂಭವಾಗಿದೆ. ನಿಗದಿಯಂತೆ ಡಿಸೆಂಬರ್ 23ರ ತನಕ ಅಧಿವೇಶನ ನಡೆಯಬೇಕಿತ್ತು. ಆದರೆ ಒಂದು ದಿನ ಮುಂಚಿತವಾಗಿ ಡಿಸೆಂಬರ್ 22ರ ಬುಧವಾರವೇ ಅಧಿವೇಶನ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.
ರಾಜ್ಯಸಭೆಯಲ್ಲಿ ಅಶಿಸ್ತಿನ ವರ್ತನೆ ತೋರಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಸದಸ್ಯ ಡೆರೆಕ್ ಒಬ್ರಿಯನ್ರನ್ನು ಈ ಚಳಿಗಾಲದ ಅಧಿವೇಶನದ ಉಳಿದ ರಾಜ್ಯ ಸಭೆ ಕಲಾಪದಲ್ಲಿ ಭಾಗವಹಿಸದಂತೆ ಅಮಾನತು ಮಾಡಲಾಗಿದೆ.
12 ರಾಜ್ಯಸಭಾ ಸದಸ್ಯರನ್ನು ಅಮಾನತು ಮಾಡಿದ ವಿರುದ್ಧ ರಾಜ್ಯಸಭೆಯಲ್ಲಿ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದವು. ಆಗ ಡೆರೆಕ್ ಒಬ್ರಿಯನ್ ನಿಯಮಗಳ ಪುಸ್ತಕವನ್ನು ಸಭಾಪತಿಗಳ ಆಸದತ್ತ ಎಸೆದರು ಮತ್ತು ಕಲಾಪದಿಂದ ಹೊರ ನಡೆದರು.

ಲೋಕಸಭೆಯಲ್ಲಿ ಇಂದು ಹವಾಮಾನ ಬದಲಾವಣೆ ಬಗ್ಗೆ ಚರ್ಚೆಗಳು ಮುಂದುವರೆಯಲಿವೆ. ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ವಿಪಕ್ಷಗಳ ಸದಸ್ಯರು ಈ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.
ರಾಜ್ಯಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾತಾಮನ್ ಲೋಕಸಭೆಯಲ್ಲಿ ಅಂಗೀಕಾರಗೊಂಡ 2021-2022ರ ಹಣಕಾಸು ವರ್ಷದಲ್ಲಿ ಕೆಲವು ಹೆಚ್ಚಿನ ಮೊತ್ತಗಳ ಪಾವತಿ ಮತ್ತು ವಿನಿಯೋಗವನ್ನು ಅಧಿಕೃತಗೊಳಿಸುವ ಮಸೂದೆಯನ್ನು ಮಂಡಿಸಲಿದ್ದಾರೆ.
ನವೆಂಬರ್ 29ರಿಂದ ಡಿಸೆಂಬರ್ 23ರ ತನಕ ಸಂಸತ್ನ ಉಭಯ ಸದನಗಳ ಕಲಾಪವನ್ನು ನಡೆಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಈ ಕುರಿತು ಅಧಿಸೂಚನೆ ಸಹ ಪ್ರಕಟವಾಗಿತ್ತು. ಆದರೆ ರಾಜ್ಯಸಭೆಯಲ್ಲಿ 12 ಸದಸ್ಯರ ಅಮಾನತು ವಿಚಾರದಲ್ಲಿ ಗದ್ದಲ ನಡೆಯುತ್ತಿದೆ. ಆದ್ದರಿಂದ ಒಂದು ದಿನ ಮುಂಚಿತವಾಗಿಯೇ ಕಲಾಪ ಅಂತ್ಯಗೊಳ್ಳುವ ನಿರೀಕ್ಷೆ ಇದೆ.












Click it and Unblock the Notifications