10 ತಿಂಗಳಲ್ಲಿ 921 ಎನ್ಕೌಂಟರ್: ರೌಡಿಗಳ ಪಾಲಿಗೆ ಯೋಗಿ ಆದಿತ್ಯನಾಥ್ ಟೆರರ್
ಲಕ್ನೋ, ಜ 11: ರೌಡಿ ಶೀಟರುಗಳು ಶರಣಾಗತಿಯಾಗಲು ಒಪ್ಪದಿದ್ದರೆ ಮುಲಾಜಿಲ್ಲದೇ ಎನ್ಕೌಂಟರ್ ಮಾಡಲು ಆದೇಶ ನೀಡಿದ್ದೇನೆಂದು ಬಹಿರಂಗವಾಗಿಯೇ ಹೇಳಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪೊಲೀಸರಿಗೆ ಫುಲ್ ಪವರ್ ನೀಡಿದ್ದಾರೆ.
ಮಂಗಳವಾರ (ಜ 10) ಆಜಾಂಘರ್ ನಲ್ಲಿ ಚನ್ನು ಸರ್ಕಾರ್ ಎನ್ನುವ ರೌಡಿ ಉತ್ತರಪ್ರದೇಶ ಪೊಲೀಸರ ಎನ್ಕೌಂಟರಿಗೆ ಬಲಿಯಾಗಿದ್ದಾನೆ. ಕಳೆದ ಹತ್ತು ತಿಂಗಳಲ್ಲಿ ಎನ್ಕೌಂಟರಿಗೆ ಬಲಿಯಾದ ಮೂವತ್ತನೇ ರೌಡಿ ಶೀಟರ್ ಈತ.
ಕಳೆದ ಹತ್ತು ತಿಂಗಳ ಅವಧಿಯಲ್ಲಿ ಉತ್ತರ ಪ್ರದೇಶ ಪೊಲೀಸರು 921 ಎನ್ಕೌಂಟರ್ ನಡೆಸಿದ್ದು ಮೂವತ್ತು ರೌಡಿಗಳು ಬಲಿಯಾಗಿದ್ದಾರೆ. ರೌಡಿಗಳ ಜೊತೆಗಿನ ಹೋರಾಟದಲ್ಲಿ ಮೂವರು ಪೊಲೀಸರು ಹತರಾಗಿದ್ದಾರೆ. ದಿನದಿಂದ ದಿನಕ್ಕೆ ರೌಡಿಗಳ ಪಾಲಿಗೆ, ಮುಖ್ಯಮಂತ್ರಿ ಯೋಗಿ 'ಸಿಂಹಸ್ವಪ್ನ'ರಾಗುತ್ತಿದ್ದಾರೆ ಎನ್ನುತ್ತವೆ ಕೆಲವೊಂದು ವರದಿಗಳು.

22.11.2017ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಉತ್ತರಪ್ರದೇಶ ಸರಕಾರಕ್ಕೆ ನೊಟೀಸ್ ಜಾರಿ ಮಾಡಿದ್ದು, ಆರು ತಿಂಗಳಿನಿಂದ ಈಚೆಗೆ ನಡೆದ 19 ಎನ್ಕೌಂಟರುಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿತ್ತು.
ನೊಟೀಸ್ ಜಾರಿಯಾದ ಮೇಲೂ, ರೌಡಿಗಳ ಮೇಲೆ ಪೊಲೀಸರ ದಾಳಿ ಮುಂದುವರಿದಿದ್ದು, ಎಂಟು ಎನ್ಕೌಂಟರುಗಳನ್ನು ಮಾಡಿ, ರೌಡಿಗಳ ಹೆಡೆಮುರಿ ಕಟ್ಟುವ ಕೆಲಸವನ್ನು ಮುಂದುವರಿಸಿದ್ದಾರೆ.
ಆದರೆ, ಮಾನವ ಹಕ್ಕುಗಳ ಆಯೋಗದ ನೊಟೀಸ್ ಇನ್ನೂ ನಮಗೆ ತಲುಪಲಿಲ್ಲ. ಅದು ತಲುಪಿದ ಮೇಲೆ ಅದಕ್ಕೆ ಉತ್ತರಿಸಲು ನಮಗೆ ಆರು ವಾರಗಳ ಕಾಲಾವಕಾಶವಿದೆ ಎಂದು ಉತ್ತರಪ್ರದೇಶ ಸರಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಮಾರ್ ಹೇಳಿದ್ದಾರೆ.












Click it and Unblock the Notifications