ಆಸ್ಪತ್ರೆಯಲ್ಲಿ ಚಿಕಿತ್ಸೆ ನಡುವೆಯೇ ಸೋನಿಯಾಜೀ ಮಮತಾಗೆ ಕರೆ ಮಾಡಿದ್ಯಾಕೆ?
ಸೋನಿಯಾಜೀ ಅವರ ಆರೋಗ್ಯ ವಿಚಾರಿಸಲು ಮಮತಾ ಬ್ಯಾನರ್ಜಿ ಅವರು, ಇದೇ ತಿಂಗಳ 16ರಂದು ನವದೆಹಲಿಗೆ ಆಗಮಿಸಲಿದ್ದಾರೆಂದು ಮೂಲಗಳು ಹೇಳಿವೆ.
ನವದೆಹಲಿ, ಮೇ 10: ವಿಷಾಹಾರ ಸಮಸ್ಯೆಯಿಂದಾಗಿ ಭಾನುವಾರ ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
ಬುಧವಾರ (ಮೇ 10) ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆಂದು ಗಂಗಾರಾಮ್ ಆಸ್ಪತ್ರೆಯ ಮುಖ್ಯಸ್ಥ ಡಾ. ರಾಣಾ ತಿಳಿಸಿದ್ದಾರೆ.
ಆದರೆ, ಕುತೂಹಲದ ವಿಚಾರವೆಂದರೆ, ಈ ಚಿಕಿತ್ಸೆಯ ನಡುವೆಯೇ ಸೋನಿಯಾ ಗಾಂಧಿಯವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಕರೆ ಮಾಡಿದ್ದಾರೆ.
ಸೋನಿಯಾಜೀ ಅವರ ಆರೋಗ್ಯ ವಿಚಾರಿಸಲು ಮಮತಾ ಬ್ಯಾನರ್ಜಿ ಅವರು, ಇದೇ ತಿಂಗಳ 16ರಂದು ನವದೆಹಲಿಗೆ ಆಗಮಿಸಲಿದ್ದಾರೆಂದು ಮೂಲಗಳು ಹೇಳಿವೆ.
ಆದರೆ, ಈ ಭೇಟಿಯ ಹಿಂದಿನ ರಹಸ್ಯವೇನು ಎಂಬುದು ಯಾರಿಗೂ ತಿಳಿದಿಲ್ಲ. ಇತ್ತ, ಕಾಂಗ್ರೆಸ್ ಪಕ್ಷದಲ್ಲಾಗಲೀ ಅಥವಾ ಅತ್ತ ತೃಣಮೂಲಕ ಕಾಂಗ್ರೆಸ್ ನಾಯಕರಲ್ಲಾಗಲೀ ಇದಕ್ಕೆ ಉತ್ತರವಿಲ್ಲ.
ಆದರೂ, ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ನಡುವಿನ ಒಪ್ಪಂದ ಮಾಡಿಕೊಳ್ಳುವ ಉದ್ದೇಶದಿಂದಲೇ ಈ ಭೇಟಿ ನಡೆಯುತ್ತಿದೆ ಎಂಬ ಮಾತು ಚಾಲ್ತಿಯಲ್ಲಿದೆ.
ಇತ್ತೀಚೆಗೆ, ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿರುವ ಸೋನಿಯಾ ಗಾಂಧಿ ಇತ್ತೀಚೆಗೆ ಯಾವುದೇ ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇತ್ತೀಚೆಗೆ, ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲೂ ತಮ್ಮ ಕುಟುಂಬದ ಭದ್ರಕೋಟೆಯಾದ ಅಮೇಥಿ ಹಾಗೂ ರಾಯ್ ಬರೇಲಿ ಕ್ಷೇತ್ರಗಳಲ್ಲಿ ನಡೆದ ಬಹಿರಂಗ ಪ್ರಚಾರ ಸಭೆಗಳಿಗೆ ಅವರು ಆಗಮಿಸಿರಲಿಲ್ಲ.