ಕಂಕಣ ಸೂರ್ಯ ಗ್ರಹಣ: ಕರ್ನಾಟಕದಾದ್ಯಂತ ಮಳೆಯ ವಾತಾವರಣ
ಬೆಂಗಳೂರು, ಡಿಸೆಂಬರ್ 26: ಒಂದೆಡೆ ಕಂಕಣ ಸೂರ್ಯ ಗ್ರಹಣ, ಇನ್ನೊಂದೆಡೆ ಮೋಡಕವಿದ ವಾತಾವರಣ. ಕಳೆದ ಎರಡು ದಿನಗಳಿಂದಲೂ ಕರ್ನಾಟಕದಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ.
ಬೆಂಗಳೂರಿನಲ್ಲಿ ಬೆಳಗ್ಗೆ 9 ಗಂಟೆ ಕಳೆದರೂ ಇನ್ನೂ ಬೆಳಗಿನ ಜಾವದ ರೀತಿ ವಾತಾವರಣವಿದೆ. ಕರ್ನಾಟಕದ ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಗುಡುಗಿನಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ತಮಿಳುನಾಡಲ್ಲಿ ಭಾರಿ ಮಳೆ: ಯಾವ್ಯಾವ ರಾಜ್ಯಗಳಿಗೆ ಕಾದಿದೆ ಆಪತ್ತು?
ಇನ್ನುಳಿದಂತೆ ಇತರೆ ಕಡೆಗಳಲ್ಲಿ ಒಣಹವೆ ಮುಂದುವರೆಯಲಿದೆ. ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಹಲವೆಡೆ ಡಿಸೆಂಬರ್ 29ರಂದು ಮಳೆಯಾಗಲಿದೆ. ಈಗಾಗಲೇ ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಮಳೆ ಆರಂಭವಾಗಿದೆ.
ಜಮ್ಮು ಮತ್ತು ಕಾಶ್ಮೀರ ಉತ್ತರಾಖಂಡ, ಲಡಾಖ್, ಹಿಮಾಚಲಪ್ರದೇಶದಲ್ಲಿ ಮಳೆಯಾಗುತ್ತಿದೆ. ಪಂಜಾಬ್, ಉತ್ತರ ಪ್ರದೇಶ, ಹರಿಯಾಣ, ದೆಹಲಿ, ಬಿಹಾರ್, ರಾಜಸ್ಥಾನ, ಅಸ್ಸಾಂ, ಸಿಕ್ಕಿಂ, ಮೇಘಾಲಯ. ಮಿಜೋರಾಂ, ತ್ರಿಪುರಾದಲ್ಲಿ ಚಳಿ ಮುಂದುವರೆದಿದೆ.
ಕರ್ನಾಟಕದಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿರುವುದರಿಂದ ಚಳಿ ಕೊಂಚ ಕಡಿಮೆಯಾಗಿದೆ. ಬೀದರ್ನಲ್ಲಿ ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರು ಕೇಂದ್ರ ಭಾಗದಲ್ಲಿ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್, ಗರಿಷ್ಠ 25.2 ಡಿಗ್ರಿ ಸೆಲ್ಸಿಯಸ್, ಕೆಐಎಎಲ್ನಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18.8 ಡಿಗ್ರಿ ಸೆಲ್ಸಿಯಸ್, ಎಚ್ಎಎಲ್ನಲ್ಲಿ ಗರಿಷ್ಠ 25.3 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.