ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಹಾಜರಾತಿ, ರಜೆ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ
ಬೆಂಗಳೂರು, ಆಗಸ್ಟ್ 8: ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಶಿಕ್ಷಣೆ ಇಲಾಖೆ ಆಗಾಗ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲಿರುತ್ತದೆ. ಹಾಗೆಯೇ ಇದೀಗ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅನ್ವಯ ಆಗುವಂತೆ ಹಾಜರಾತಿ, ರಜೆ ಕುರಿತು ಮಹತ್ವದ ಆದೇಶವೊಂದನ್ನು ನೀಡಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
2025-26ನೇ ಶೈಕ್ಷಣಿಕ ವರ್ಷದ 10 ಮತ್ತು 12ನೇ ತರಗತಿಗಳ ವಿದ್ಯಾರ್ಥಿಗಳಿಗೆ ಕಡ್ಡಾಯ ಹಾಜರಾತಿಯ ಬಗ್ಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ)ಯು ಅಧಿಸೂಚನ ಹೊರಡಿಸಿದೆ. ಈ ಅಧಿಸೂಚನೆ ಪ್ರಕಾರ, 2026ರ ಬೋರ್ಡ್ ಪರೀಕ್ಷೆಗಳಿಗೆ ಅರ್ಹತೆ ಪಡೆಯಲು ವಿದ್ಯಾರ್ಥಿಗಳು ಕನಿಷ್ಠ ಶೇಕಡ 75ರಷ್ಟು ಹಾಜರಾತಿಯನ್ನ ಹೊಂದಿರಬೇಕಾಗುತ್ತದೆ.

ಒಂದು ವೇಳೆ ಶೇಕಡ 75ಕ್ಕಿಂತ ಕಡಿಮೆ ಹಾಜರಾತಿ ಹೊಂದಿರುವ ವಿದ್ಯಾರ್ಥಿಗಳು ನಿರ್ದಿಷ್ಟ ವಿನಾಯಿತಿಗಳಿಗೆ ಅರ್ಹತೆ ಪಡೆಯದಿದ್ದರೆ, ಅಂತಹವರು ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವುದಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಎಂದು ಸಿಬಿಎಸ್ಇ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ವೈದ್ಯಕೀಯ ತುರ್ತು ಪರಿಸ್ಥಿತಿ, ಕುಟುಂಬದಲ್ಲಿ ನಿಧನ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಸಲ್ಲಿಕೆ ಮಾಡುವ ವಿದ್ಯಾರ್ಥಿಗಳಿಗೆ ವಿನಾಯತಿ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆದರೆ, ಇದನ್ನು ಹರತುಪಡಿಸಿ ಹಾಜರಾತಿ ದಾಖಲೆಗಳಲ್ಲಿ ಯಾವುದೇ ವ್ಯತ್ಯಾಸ ಆದರೂ ಮತ್ತು ಹಾಜರಾತಿ ದತ್ತಾಂಶಗಳ ದುರುಪಯೋಗದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಿಬಿಎಸ್ಇ ತಿಳಿಸಿದೆ. ಲಿಖಿತ ವಿನಂತಿಗಳು ಇಲ್ಲದ ರಜೆಗಳನ್ನ ಶಾಲೆಗೆ ಅನಧಿಕೃತ ಗೈರು ಹಾಜರಿ ಎಂದು ಪರಿಗಣನೆ ಮಾಡುವುದಾಗಿಯೂ ಎಚ್ಚರಿಕೆ ನೀಡಿದೆ.
ಶೈಕ್ಷಣಿಕ ವರ್ಷದ ಆರಂಭದಲ್ಲಿ ಹಾಜರಾತಿ ಮಾನದಂಡಗಳು ಮತ್ತು ಅವುಗಳನ್ನು ಪಾಲನೆ ಮಾಡದಿದ್ದರೆ, ಗಂಭೀರ ಪರಿಣಾಮಗಳ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ತಿಳಿಸುವಂತೆ ಶಾಲೆಗಳಿಗೂ ಸೂಚನೆ ನೀಡಲಾಗಿದೆ. ವೈದ್ಯಕೀಯ ರಜೆ ಅರ್ಜಿಗಳೊಂದಿಗೆ ಸರ್ಕಾರದಿಂದ ಮಾನ್ಯತೆ ಪಡೆದ ವೈದ್ಯರ ಪ್ರಮಾಣ ಪತ್ರಗಳನ್ನು ಸಲ್ಲಿಕೆ ಮಾಡುವುದು ಅಗತ್ಯ. ಇತರ ಗಂಭೀರ ಕಾರಣ ಪ್ರಕರಣಗಳಲ್ಲಿ ಮರಣ ಪ್ರಮಾಣ ಪತ್ರಗಳು ಅಥವಾ ಅಧಿಕೃತ ಸೂಚನೆಗಳ ದಾಖಲೆಗಳನ್ನು ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ.
ಜನವರಿ 1ರಿಂದ ಇದ್ದಂತೆ ಹಾಜರಾತಿಯನ್ನ ಪರಿಗಣೆಗೆ ತೆಗೆದುಕೊಳ್ಳಲಾಗುತ್ತದೆ ಮತ್ತು ಶಾಲೆಗಳು ವಿನಾಯಿತಿಗೆ ಅರ್ಹ ಪ್ರಕರಣಗಳನ್ನು ಜನವರಿ 7ರೊಳಗೆ ಸಿಬಿಎಸ್ಇಗೆ ವರದಿ ಸಲ್ಲಿಕೆ ಮಾಡಬೇಕು. ಸಿಬಿಎಸ್ಇ ಸಂಯೋಜಿತ ಶಾಲೆಗಳಲ್ಲಿ ದಿಢೀರ್ ತಪಾಸಣೆಗಳಿಗೂ ಅಧಿಕಾರವನ್ನು ನೀಡಿದೆ. ಹಾಜರಾತಿ ದಾಖಲೆಗಳು ಅಪೂರ್ಣ ಆಗಿರುವುದು ಕಂಡು ಬಂದಲ್ಲಿ, ಶಾಲೆಗಳ ಸಂಯೋಜನೆ ರದ್ದು ಅಥವಾ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದಕ್ಕೆ ಅನರ್ಹತೆ ಸೇರಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಹುದು ಅಂತಲೂ ಸೂಚಿಸಿದೆ.












Click it and Unblock the Notifications