India Weather: ಹವಾಮಾನದಲ್ಲಿ ಬದಲಾವಣೆ: ಇಲ್ಲೆಲ್ಲಾ 'ಆಲಿಕಲ್ಲು' ಮಳೆ ಸಂಭವ
ನವದೆಹಲಿ, ಮಾರ್ಚ್ 16: ಬಿರು ಬೇಸಿಗೆಯಲ್ಲೂ ಕರ್ನಾಟಕ ಸೇರಿದಂತೆ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಅಲ್ಲಲ್ಲಿ ಮಳೆ ಸುರಿಯುತ್ತಿದೆ. ಈ ಮಳೆ ಇನ್ನೂ ಕೆಲವು ದಿವಸಗಳ ಕಾಲ ಮುಂದುವರಿಯಲಿದೆ ಎಂಬ ಮುನ್ಸೂಚನೆ ಇದೆ.
ದೇಶದ ವಿವಿಧ ರಾಜ್ಯಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಸಮುದ್ರಮಟ್ಟದಲ್ಲಿ ಚಂಡಮಾರುತ ಪೂರ್ವ ವೈಪರಿತ್ಯಗಳು ಏರ್ಪಟ್ಟ ಕಾರಣ, ಗುಡುಗು ಸಹಿತ ಲಘು ಮಳೆಯಾಗುವ ನಿರೀಕ್ಷೆಗಳು ಇವೆ ಎಂದು ಭಾರತೀಯ ಹಾವಾಮಾನ ಇಲಾಖೆ ತಿಳಿಸಿದೆ.

ಇಂದಿನಿಂದ (ಮಾರ್ಚ್ 16) ಮುಂದಿನ ನಾಲ್ಕು ದಿನ (ಮಾರ್ಚ್ 19) ರವರೆಗೆ ಪೂರ್ವ ಮತ್ತು ಮಧ್ಯ ಭಾರತದಲ್ಲಿ ಗುಡುಗು ಸಹಿತ ಲಘುವಾಗಿ ಮಧ್ಯಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಇತ್ತೀಚಿನ ಹವಾಮಾನ ಬುಲೆಟಿನ್ನಲ್ಲಿ ಉಲ್ಲೇಖಿಸಿದೆ.
ಚಂಡಮಾರುತದ ಪರಿಚಲನೆ
ದೇಶದ ಒಂದು ಭಾಗದಲ್ಲಿ ಚಂಡಮಾರುತದ ಪರಿಚಲನೆ ಉಂಟಾಗಿದೆ. ಇದರಿಂದಾಗಿ ಗಂಗಾನದಿ ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ವಿದರ್ಭ, ಛತ್ತೀಸ್ಗಢ ಮತ್ತು ಪೂರ್ವ ಮಧ್ಯಪ್ರದೇಶದಲ್ಲಿ ಮಾರ್ಚ್ 20 ರವರೆಗೆ ಸಾಕಷ್ಟು ವ್ಯಾಪಕ ಮಳೆಯಾಗುವ ನಿರೀಕ್ಷೆಗಳು ಇವೆ ಎಂದು ತಿಳಿಸಲಾಗಿದೆ.

ಮೂರು ದಿನ ಆಲಿಕಲ್ಲು ಮಳೆ ನಿರೀಕ್ಷೆ
ನಾಳೆ ಭಾನುವಾರ ಮಾರ್ಚ್ 17 ಮತ್ತು ಸೋಮವಾರ ಮಾರ್ಚ್ 18 ರಂದು ವಿದರ್ಭದಲ್ಲಿ ಮತ್ತು 18 ಮತ್ತು 19 ರಂದು ಪೂರ್ವ ಮಧ್ಯ ಪ್ರದೇಶದಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಜೋರು ಆಲಿಕಲ್ಲು ಮಳೆ ಸಹ ಬರಲಿದೆ ಎಂದು ತಿಳಿಸಲಾಗಿದೆ. ಯಾಗುವ ಸಾಧ್ಯತೆಯಿದೆ. ಇಂದು ಉಪ-ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಪ್ರತ್ಯೇಕವಾದ ಲಘು ಮಳೆ/ಹಿಮಪಾತದ ಸಾಧ್ಯತೆಯಿದೆ.
ರಾಷ್ಟ್ರ ರಾಜಧಾನಿಯಾದ ನವದೆಹಲಿಯಲ್ಲಿ ಶನಿವಾರ ಬೆಳಂಬೆಳಗ್ಗೆ ಭಾಗಶಃ ಮೋಡ ಕವಿದ ವಾತಾವರಣ ಉಂಟಾಗಲಿದೆ. ಮಧ್ಯಾಹ್ನದ ವೇಳೆ ಶುಭ್ರ ಆಕಾಶ ಇರಲಿದೆ. ಈ ವೇಳೆ ಅಧಿಕ ತಾಪಮಾನ ಕಂಡು ಬರಬಹುದು ಎಂದು ಹವಾಮಾನ ಇಲಾಖೆಯ ಮುನ್ಸೂಚನಾ ವರದಿ ತಿಳಿಸಿದೆ.
ರಾಜಧಾನಿಯ ತಾಪಮಾನ ಹೇಗಿದೆ?
ದೆಹಲಿಯಲ್ಲಿ ಕನಿಷ್ಠ ತಾಪಮಾನ 12 ಮತ್ತು ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ನಲ್ಲಿ ದಾಖಲಾಗಲಿದೆ. ಐಎಂಡಿ ವರದಿ ಪ್ರಕಾರ, ಮಾರ್ಚ್ 9 ರಿಂದ 15 ರವರೆಗಿನ ಒಂದು ವಾರದಲ್ಲಿ ದೆಹಲಿಯಲ್ಲಿ ಸ್ಪಷ್ಟ ಹವಾಮಾನದ ಸ್ಥಿತಿ ಗಮನಿಸಲಾಗಿದೆ. ಈಗ ಅಲ್ಪ ಮಳೆಯ ವಾತಾವರಣ ಕಂಡು ಬರುತ್ತಿದೆ.
ಇನ್ನೂ ದೆಹಲಿಯಲ್ಲಿ ಶುಕ್ರವಾರ ಗರಿಷ್ಠ ತಾಪಮಾನವು 28.7 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆ ಆಗಿದೆ. ಇದು ಬೇಸಿಗೆಯಲ್ಲಿನ ಸಾಮಾನ್ಯ ತಾಪಮಾನದ ಸ್ಥಿತಿಯಾಗಿದೆ. ಕನಿಷ್ಠ 13.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಸಾಮಾನ್ಯಕ್ಕಿಂತ ಕಡಿಮೆಯಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಬೇಸಿಗೆ ಮುಂದುವರಿಯಲಿದ್ದು, ಮುಂದಿನ ಕೆಲವು ದಿನಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಎರಡೂ ಹೆಚ್ಚಾಗುವ ಸಾಧ್ಯತೆ ಇದೆ. ಇಂದು ಶನಿವಾರ ಗರಿಷ್ಠ ತಾಪಮಾನವು ಮೂರರಿಂದ ನಾಲ್ಕು ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಬಹುದು. ಕನಿಷ್ಠ ತಾಪಮಾನದಲ್ಲಿ ಇಳಿಕೆ ಕಂಡು ಬರಲಿದೆ ಎಂದು ದೆಹಲಿ ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಮುನ್ಸೂಚನೆ ತಿಳಿಸಿದರು.
ಗುಡ್ಡಗಾಡು ಪ್ರದೇಶಗಳಲ್ಲಿ ಮಳೆ-ಹಿಮಪಾತ
ದೇಶದ ಗುಡ್ಡಗಾಡು ಪ್ರದೇಶಗಳ ಪೈಕಿ ಪಶ್ಚಿಮ ಹಿಮಾಲಯ ಪ್ರದೇಶಗಳಲ್ಲಿ ಮಾರ್ಚ್ 20ರ ರಾತ್ರಿಯಿಂದ ಮಳೆಯ ಸಂಭವವಿದೆ. ಇದರೊಂದಿಗೆ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್, ಮುಜಫರಾಬಾದ್ ಮತ್ತು ಹಿಮಾಚಲ ಪ್ರದೇಶದಂತಹ ಪ್ರದೇಶಗಳಲ್ಲಿ ಮಾರ್ಚ್ 21ರಂದು ಹಿಮ ಮತ್ತು ಮಳೆ ಎರಡನ್ನೂ ನಿರೀಕ್ಷೆ ಮಾಡಲಾಗಿದೆ.
ದೇಶದ ವಿವಿಧ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳು ಮಾರ್ಚ್ 21ರವರೆಗೆ ಚದುರಿದ ಮಳೆ ಮತ್ತು ಹಿಮಪಾತಕ್ಕೆ ಸಾಕ್ಷಿಯಾಗಬಹುದು ಎಂದು ಅಂದಾಜಿಸಲಾಗಿದೆ.












Click it and Unblock the Notifications