ಮುಂದಿನ 24 ಗಂಟೆಗಳಲ್ಲಿ ಈ ರಾಜ್ಯಗಳಲ್ಲಿ ಅಧಿಕ ಮಳೆ ಮುನ್ಸೂಚನೆ
ನವದೆಹಲಿ, ಅಕ್ಟೋಬರ್ 03: ಶಾಹೀನ್ ಚಂಡಮಾರುತ ಭಾರತದ ಕರಾವಳಿ ತೀರಗಳಿಂದ ದೂರ ಸರಿದಿದ್ದು, ಒಮಾನ್ನಲ್ಲಿ ಪ್ರಭಾವ ಮುಂದುವರೆಸಿದೆ. ಆದರೆ ಚಂಡಮಾರುತದ ಪ್ರಭಾವದಿಂದಾಗಿ ಮುಂದಿನ 24 ಗಂಟೆಗಳಲ್ಲಿ ಕೆಲವು ರಾಜ್ಯಗಳಲ್ಲಿ ಅಧಿಕ ಮಳೆಯಾಗುವುದಾಗಿ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಪಶ್ಚಿಮ ಬಂಗಾಳ, ಸಿಕ್ಕಿಂ, ಪಶ್ಚಿಮ ಅಸ್ಸಾಂ ಹಾಗೂ ಮೇಘಾಲಯದಲ್ಲಿ ಅಕ್ಟೋಬರ್ 4ರವರೆಗೂ ವ್ಯಾಪಕ ಮಳೆಯಾಗುವುದಾಗಿ ತಿಳಿಸಿದೆ. ಬಿಹಾರ ಹಾಗೂ ಹೊಂದಿಕೊಂಡ ಪ್ರದೇಶಗಳಲ್ಲಿ ವಾಯುಭಾರ ಕುಸಿತದ ಪರಿಣಾಮದಿಂದಾಗಿ ಭಾರೀ ಮಳೆಯ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.
ಚಂಡಮಾರುತ ಪರಿಚಲನೆಯು ಸಮುದ್ರ ಮಟ್ಟಕ್ಕಿಂತ 4.5 ಕಿ.ಮೀವರೆಗೂ ವಿಸ್ತರಿಸಿದೆ. ಇದು ಪೂರ್ವ-ಈಶಾನ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ ಹಾಗೂ ಇದರಿಂದಾಗಿ ಮುಂದಿನ 24 ಗಂಟೆಗಳಲ್ಲಿ ಮಳೆಯಾಗಲಿದ್ದು, ಆನಂತರ ಪ್ರಭಾವ ತಗ್ಗಲಿದೆ ಎಂದು ಮಾಹಿತಿ ನೀಡಿದೆ.

ಈ ಪ್ರಭಾವದಿಂದಾಗಿ ಪಶ್ಚಿಮ ಬಂಗಾಳ, ಸಿಕ್ಕಿಂ, ಪಶ್ಚಿಮ ಅಸ್ಸಾಂ ಹಾಗೂ ಮೇಘಾಲಯದಲ್ಲಿ ಅಧಿಕ ಮಟ್ಟದ ಮಳೆಯಾಗಲಿದೆ. ಜಮ್ಮು, ಕಾಶ್ಮೀರ, ಲಡಾಖ್, ಬಲೂಚಿಸ್ತಾನ, ಮುಜಾಫರಾಬಾದ್, ಉತ್ತರಾಖಂಡ, ಪಂಜಾಬ್, ಪೂರ್ವ ಉತ್ತರ ಪ್ರದೇಶ, ಪೂರ್ವ ಮಧ್ಯ ಪ್ರದೇಶ, ಪೂರ್ವ ರಾಜಸ್ಥಾನ ಮತ್ತು ಛತ್ತೀಸ್ಗಡದಲ್ಲಿ ಗುಡುಗು ಮಿಂಚುಸಹಿತ ಮಳಯಾಗುವುದಾಗಿ ತಿಳಿಸಿದೆ.
ಅಕ್ಟೋಬರ್ 4ರವರೆಗೂ ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯಾಗುವ ಸೂಚನೆ ನೀಡಿದ್ದು, ಡಾರ್ಜಿಲಿಂಗ್, ಕಲಿಂಪಾಂಗ್, ಜಲ್ಪೈಗುರಿಯಲ್ಲಿ ಭಾರೀ ಮಳೆಯಾಗುವುದಾಗಿ ತಿಳಿಸಿದೆ. ಇದಲ್ಲದೇ ನೈಋತ್ಯ ಬಂಗಾಳ ಕೊಲ್ಲಿ ಹಾಗೂ ತಮಿಳುನಾಡಿನಲ್ಲಿ ಚಂಡಮಾರುತದ ಪರಿಚಲನೆಯು ಸಮುದ್ರ ಮಟ್ಟಕ್ಕಿಂತ 3.1 ಕಿ.ಮೀವರೆಗೆ ವಿಸ್ತರಿಸಿದೆ ಎಂದು ತಿಳಿಸಿದೆ.

ಕರ್ನಾಟಕದಲ್ಲಿ ಮಳೆ ಮುಂದುವರಿಕೆ:
ಪೂರ್ವ-ಮಧ್ಯ ಅರಬ್ಬೀ ಸಮುದ್ರದಿಂದ ಚಂಡಮಾರುತ ಹಾದುಹೋಗಲಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ಮಳೆ ಮುಂದುವರೆಯಲಿದೆ. ತಮಿಳುನಾಡು, ಕೇರಳ, ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ.
ಅಕ್ಟೋಬರ್ 4ರಿಂದ 6ರವರೆಗೆ ದಕ್ಷಿಣ ಕೊಂಕಣ, ಗೋವಾ, ದಕ್ಷಿಣ ಮಧ್ಯ ಮಹಾರಾಷ್ಟ್ತದಲ್ಲಿ ಅಧಿಕ ಮಳೆಯಾಗುವುದಾಗಿ ತಿಳಿಸಿದೆ.
ಸೆಪ್ಟೆಂಬರ್ 26ರಂದು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ 'ಗುಲಾಬ್' ದಂಡಮಾರುತ ಆಂಧ್ರ ಪ್ರದೇಶ, ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ಅತ್ಯಧಿಕ ಮಳೆಗೆ ಕಾರಣವಾಗಿತ್ತು. ಕಳೆದ ಬುಧವಾರದಿಂದ ಗುಲಾಬ್ ಚಂಡಮಾರುತ ದುರ್ಬಲಗೊಂಡು ಅರಬ್ಬೀ ಸಮುದ್ರದಲ್ಲಿ 'ಶಾಹೀನ್' ಚಂಡಮಾರುತದ ಮೂಲಕ ಮರುಹುಟ್ಟು ಪಡೆದು ಬಿಹಾರ್, ಪಶ್ಚಿಮ ಬಂಗಾಳ, ಸಿಕ್ಕಿಂ ರಾಜ್ಯಗಳಲ್ಲಿ ಆರ್ಭಟಿಸಿತ್ತು. ಇದೀಗ ಒಮಾನ್ನಲ್ಲಿ ಭಾರೀ ಮಳೆಗೆ ಕಾರಣವಾಗಿದೆ.
ಮುಂಗಾರಿನಲ್ಲಿ ಸಾಮಾನ್ಯ ಮಳೆ:
ಜೂನ್ ತಿಂಗಳಿನಿಂದ ಸೆಪ್ಟೆಂಬರ್ವರೆಗಿನ ನಾಲ್ಕು ತಿಂಗಳ ಅವಧಿಯಲ್ಲಿ ದೇಶದಲ್ಲಿ ಸಾಮಾನ್ಯ ಮಟ್ಟದ ಮಳೆಯಾಗಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಗುರುವಾರ ಮಾಹಿತಿ ನೀಡಿದೆ. ಈ ಮುಂಗಾರು ಋತುವಿನಲ್ಲಿ, ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ಒಟ್ಟಾರೆಯಾಗಿ 87 ಸೆ.ಮೀ.ನಷ್ಟು ದೀರ್ಘಾವಧಿಯ ಸರಾಸರಿ ಮಳೆ ದಾಖಲಾಗಿದೆ. ನೈಋತ್ಯ ಮುಂಗಾರು ಅವಧಿಯಲ್ಲಿ ಸಾಮಾನ್ಯ ಮಟ್ಟದಲ್ಲಿ ಮಳೆ ದಾಖಲಾಗಿದೆ ಎಂದು ತಿಳಿಸಿದೆ.
ಇದರೊಂದಿಗೆ, ಅಕ್ಟೋಬರ್ 6ರ ವೇಳೆಗೆ ದೇಶದ ವಾಯವ್ಯ ಭಾಗದಲ್ಲಿ ನೈಋತ್ಯ ಮುಂಗಾರು ಅಂತ್ಯವಾಗಲು ಹವಾಮಾನ ಪರಿಸ್ಥಿತಿ ಅನುಕೂಲಕರವಾಗಿದೆ ಎಂದು ಇಲಾಖೆ ತಿಳಿಸಿದೆ.
ತಮಿಳುನಾಡು, ಕೇರಳ, ಕರ್ನಾಟಕದ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಅಕ್ಟೋಬರ್ 1ರಿಂದ 4ರವರೆಗೂ ವ್ಯಾಪಕ ಮಳೆಯಾಗಲಿದೆ. ತಮಿಳುನಾಡಿನಲ್ಲಿ ಅಕ್ಟೋಬರ್ 2ರಿಂದ 4ರವರೆಗೂ ಅಧಿಕ ಮಳೆ ದಾಖಲಾಗಲಿದೆ ಎಂದು ಸೂಚನೆ ನೀಡಿದೆ. ಅಕ್ಟೋಬರ್ 6ರ ವೇಳೆಗೆ ವಾಯವ್ಯ ರಾಜ್ಯಗಳಲ್ಲಿ ಮುಂಗಾರು ಅಂತ್ಯವಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ತಿಳಿಸಿದೆ.












Click it and Unblock the Notifications