India Weather: ಚಂಡಮಾರುತ ತೀವ್ರತೆಯಿಂದ ಮೇ 26ರವರೆಗೆ ಈ ರಾಜ್ಯಗಳಿಗೆ ಭಾರೀ ಮಳೆ: ಕೆಲವೆಡೆ ಶಾಖದ ಅಲೆ ಎಚ್ಚರಿಕೆ
ನವದೆಹಲಿ, ಮೇ 22: ದೇಶದಲ್ಲಿ ಮಳೆ ನಡುವೆ ತಾಪಮಾನ ಹಿಡಿತ ಸಾಧಿಸುತ್ತಲೇ ಇದೆ. ಈ ಮಧ್ಯೆ ದೇಶದ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆ ಆಗಲಿದೆ. ಇದಕ್ಕೆ ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾದ ಚಂಡಮಾರುತದ ವೈಪರಿತ್ಯದ ಪ್ರಭಾವವೇ ಕಾರಣವಾಗಿದೆ. ಮಳೆ ಜೊತೆಗೆ ಕೆಲವು ರಾಜ್ಯಗಳಲ್ಲಿ ಶಾಖದ ಅಲೆ ಮುಂದುವರಿಯಲಿದೆ.
ಭಾರತದ ಹವಾಮಾನ ಇಲಾಖೆ (IMD) ಮುನ್ಸೂಚನೆ ಪ್ರಕಾರ, ಮುಂಗಾರು ಉತ್ತಮ ಆರಂಭಕ್ಕೆ ಪೂರಕವಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎನ್ನಬಹುದು. ಭಾರತದ ದಕ್ಷಿಣ ಭಾಗದಲ್ಲಿ ಈ ವಾರಾಂತ್ಯಕ್ಕೆ ಅತ್ಯಧಿಕ ಮಳೆಯ ಸಂಭವವಿದೆ. ಮತ್ತೊಂದೆಡೆ ಉತ್ತರ ಭಾರತದ ರಾಜ್ಯಗಳಲ್ಲಿ ಅಧಿಕ ತಾಪಮಾನದ ವಾತಾವರಣ ಮುಂದುವರಿಯಲಿದೆ ಎಂದು ತಿಳಿಸಿದೆ.

ಭಾರತದಲ್ಲಿ ಮುಂದಿನ 05 ದಿನಗಳ ಕಾಲ ಪುದುಚೇರಿ, ಕೇರಳ, ತಮಿಳುನಾಡು ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ವ್ಯಾಪ್ತಿಯಲ್ಲಿ ಗುಡುಗು ಸಹಿತ ವ್ಯಾಪಕ ಮಳೆ ಎಚ್ಚರಿಕೆ ನೀಡಲಾಗಿದೆ. ಇಷ್ಟು ರಾಜ್ಯಗಳಲ್ಲಿ ತಮಿಳುನಾಡು, ಪುದುಚೇರಿ, ಕೇರಳ, ಕಾರೈಕಲ್, ಲಕ್ಷದ್ವೀಪ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಪ್ರದೇಶಗಳು ಶುಕ್ರವಾರದವರೆಗೆ ಹಗುರದಿಂದ ಸಾಧಾರಣ ಮಳೆ ಆಗಲಿದೆ.
ಮುಂದಿನ 24ಗಂಟೆಗಳಲ್ಲಿ ಎಲ್ಲೆಲ್ಲಿ ಮಳೆ?
ಚಂಡಮಾರುತದ ಪರಿಚಲನೆಯ ಕಾರಣದಿಂದ ಭಾರೀ ಮಳೆಯು ಕೇರಳದ ಉತ್ತರ ಭಾಗ, ಕರ್ನಾಟಕದ ಒಂದಷ್ಟು ಭಾಗಗಳಲ್ಲಿ ಸುರಿಯುವ ನಿರೀಕ್ಷೆಗಳಿವೆ. ಮುಂದಿನ 24 ಗಂಟೆಯಲ್ಲಿ ಕೇರಳದಲ್ಲಿ ಹೆಚ್ಚು ಮಳೆ ಆಗಲಿದೆ. ಇಂದು ಬುಧವಾರ (ಮೇ 22) ಗೋವಾರ, ಕೊಂಕಣ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ಮಧ್ಯಪ್ರದೇಶ, ವಿದರ್ಭ ಛತ್ತೀಸ್ಗಢದಲ್ಲಿ ಗುಡುಗು, ಮಿಂಚು ಸಹಿತ ಮಳೆ ಅಬ್ಬರಿಸಲಿದೆ. ಈ ವೇಳೆ ಗಾಳಿಯ ವೇಗ ಪ್ರತಿ ಗಂಟೆಗೆ 30-40 ಕಿಮೀ ಇರಲಿದೆ.
ಮೇ 26 ರವರೆಗೆ ಚಂಡಮಾರುತ ಪ್ರಭಾವ: ಭಾರೀ ಮಳೆ
ಬಾಂಗ್ಲಾದೇಶದ ಪೂರ್ವ ಭಾಗಗಳಲ್ಲಿ ಚಂಡಮಾರುತ ಪರಿಚಲನೆಯ ಪ್ರಭಾವ ಮೇ 26 ರವರೆಗೆ ಕಂಡು ಬರಲಿದೆ. ಈ ವೇಳೆ ಹಲವಡೆ ಸಾಧಾರಣವಾಗಿ ಗುಡುಗು, ಮಿಂಚು ಸಹಿತ ಮಳೆ ಆಗಲಿದೆ. ಈ ಮೂಲಕ ಒಂದು ವಾರ ಬಾಂಗ್ಲಾ ವ್ಯಾಪ್ತಿಯಲ್ಲಿ ಮಳೆಯ ವಾತಾವರಣ ಕಂಡು ಬರಲಿದೆ.

ಇನ್ನುಳಿದಂತೆ ದೇಶದ ನಾಗಾಲ್ಯಾಂಡ್, ಮಣಿಪುರ, ಅಸ್ಸಾಂ, ಮೇಘಾಲಯ, ಮಿಜೋರಾಂ ಹಾಗೂ ತ್ರಿಪುರಾಗಳಿಗೆ ಧಾರಾಕಾರ ಮಳೆ ಸುರಿಯಲಿದೆ. ಇನ್ನೂ ಮುಂದಿನ ನಾಲ್ಕರಿಂದ ಐದು ದಿನ ಅರುಣಾಚಲ ಪ್ರದೇಶದಲ್ಲೂ ಪೂರ್ವ ಮುಂಗಾರು ಮಳೆ ಸಕ್ರಿಯವಾಗಿರಲಿದೆ.
ಇದರೊಂದಿಗೆ ಮೇ 25 ರಂದು, ಮಿಜೋರಾಂ, ತ್ರಿಪುರಾ ಮತ್ತು ದಕ್ಷಿಣ ಮಣಿಪುರದಾದ್ಯಂತ ಅನೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಇದರೊಂದಿಗೆ ಅನೇಕ ಕಡೆಗಳಲ್ಲಿ ಏಪ್ರೀಲ್ ತಿಂಗಳಿನಂತೆ ಬಿಸಿಲಿನ ಅಲೆ, ಹೆಚ್ಚಿದ ತಾಪಮಾನದ ವಾತಾವರಣ ಕಂಡು ಬರಲಿದೆ.
ಎಲ್ಲೆಲ್ಲಿ ಹೀಟ್ ವೇವ್? ತಿಳಿಯಿರಿ
ಮಂಗಳವಾರ ರಾಜಸ್ಥಾನ ರಾಜ್ಯ ಅನೇಕ ಕಡೆಗಳಲ್ಲಿ ಗರಿಷ್ಠ ತಾಪಮಾನವು ಬರೋಬ್ಬರಿ ಗರಿಷ್ಠ 44ರಿಂದ 47 ಡಿಗ್ರಿ ಸೆಲ್ಸಿಯಸ್ ನಷ್ಟಿತ್ತು. ಹರಿಯಾಣ, ಮಧ್ಯಪ್ರದೇಶ ಮತ್ತು ಗುಜರಾತ್ನ ಕೆಲವು ಪ್ರದೇಶಗಳಲ್ಲಿ ಶಾಖದ ಅಲೆ ಇದೆ. ಇನ್ನೂ ಉತ್ತರ ಪ್ರದೇಶ ಪೂರ್ವ ಮತ್ತು ಪಶ್ಚಿಮ ಭಾಗದ ಪ್ರದೇಶಗಳಲ್ಲಿ, ಒಡಿಶಾ, ಪಂಜಾಬ್ ಹಾಗೂ ಮಹಾರಾಷ್ಟ್ರದ ಒಳಭಾಗದ ಹಲವು ಪ್ರದೇಶಗಳಲ್ಲಿ ಛತ್ತೀಸ್ಗಢ ರಾಜ್ಯದ ಒಂದಷ್ಟು ಭಾಗಗಳಲ್ಲಿ ಮತ್ತು ತೆಲಂಗಾಣದಲ್ಲಿ ಗರಿಷ್ಠ 40ರಿಂದ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ. ಇಲ್ಲಿ ಮುಂದಿನ ಒಂದು ವಾರವು ಇದೇ ರೀತಿ ಒಣಹವೇ ಮುಂದುವರಿಯಲಿದೆ ಎಂದು ಹವಾಮಾಣ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದಲ್ಲಿ ಮುಂದಿನ ಮೂರರಿಂದ ಐದು ದಿನಗಳ ಕಾಲ ಮಳೆ ಅಬ್ಬರಿಸಲಿದೆ. ಒಳನಾಡು ಜಿಲ್ಲೆಗಳಲ್ಲಿ ಉಂಟಾದ ಸ್ಟ್ರಫ್ ನಿಂದ ಕಳೆದ ಹಲವು ದಿನಗಳಿಂದ ಜೋರು ಮಳೆ ಆಗುತ್ತಿದೆ. ಕಳೆದ ಎರಡು ದಿನದಿಂದ ಮಳೆ ಚೂರು ಕಡಿಮೆ ಆಗಿ ತಾಪಮಾನ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಮಳೆ ಮತ್ತೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪೂರ್ವ ಮುಂಗಾರು ಮಳೆ ಚುರುಕಾಗಿರುವ ಕರ್ನಾಟಕ ಸೇರಿದಂತೆ ದೇಶದ ಕೆಲವು ರಾಜ್ಯಗಳಲ್ಲಿ ತಾಪಮಾನ ಪ್ರಮಾಣ ಇಳಿಕೆ ಆಗಿದೆ. ಹಲವೆಡೆ ಮಳೆ ಆಗ ಪರಿಣಾ, ಬಿಸಿ ಗಾಳಿ, ತೀವ್ರ ಶಾಖದ ಅಲೆ ಮುಂದುವರಿಯುತ್ತಿದೆ.












Click it and Unblock the Notifications