IMD Cyclone Alert: ಚಂಡಮಾರುತ ಪ್ರಸರಣ ತೀವ್ರತೆ: ಈ ಭಾಗಗಳಲ್ಲಿ 3 ದಿನ ರಣಭೀಕರ ಮಳೆ, ರೆಡ್ ಅಲರ್ಟ್
ಮುಂಗಾರು ಮಳೆ ಇನ್ನೇತು ತಗ್ಗಿತು ಎನ್ನುಷ್ಟರಲ್ಲಿ ಬದಲಾದ ಹವಾಮಾನ ವೈಪರೀತ್ಯಗಳಿಂದಾಗಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮತ್ತೆ ಆರ್ಭಟ ಮುಂದುವರಿಸಿದೆ. ವಿವಿಧ ಕಡೆಗಳಲ್ಲಿ ವಾಯುಭಾರ ಕುಸಿತ, ಚಂಡಮಾರುತ ಪ್ರಸರಣದಂತಹ ಬದಲಾವಣೆಗಳು ನಿರಂತರವಾಗಿ ಮುಂದುವರಿದಿವೆ. ಇದರಿಂದಾಗಿ ಕೆಲವು ಭಾಗಗಳಲ್ಲಿ ರೆಡ್ ಅಲರ್ಟ್, ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD Weather Forecast) ಮಂಗಳವಾರ ಮುನ್ಸೂಚನೆ ನೀಡಿದೆ.
ಈಶಾನ್ಯ ಬಂಗಾಳಕೊಲ್ಲಿ ಮತ್ತು ಪಕ್ಕದ ಮ್ಯಾನ್ಮಾರ್ ಕರಾವಳಿಯಲ್ಲಿ ಮೇಲಿನ ವಾಯುವ್ಯ ಚಂಡಮಾರುತದ ಪ್ರಸರಣದ ತೀವ್ರತೆ ಹೆಚ್ಚಾಗಿದೆ. ಅದು ಸೆಪ್ಟೆಂಬರ್ 02ರಂದು ವಾಯುವ್ಯ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವಾಗಿ ರೂಪುಗೊಂಡಿದೆ. ಮುಂದಿನ 24 ಗಂಟೆಗಳಲ್ಲಿ ಈ ವೈಪರೀತ್ಯ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆ ಇದೆ.

ಇನ್ನೂ ವಾಯುವ್ಯ ರಾಜಸ್ಥಾನದ ಮೇಲೆ ಮತ್ತೊಂದು ಚಂಡಮಾರುತದ ಪ್ರಸರಣ ಸೃಷ್ಟಿಯಾಗಿದೆ. ಈಗ ಅದು ದಕ್ಷಿಣ ಹರಿಯಾಣ ಮತ್ತು ನೆರೆಹೊರೆಯ ಮೇಲೆ ಇದ್ದು ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದವರೆಗೆ ವಿಸ್ತರಣೆ ಆಗಿದೆ. ಮಾನ್ಸುನ್ ತಗ್ಗು ಉತ್ತರ ಕಾಶ್ಮೀರದಿಂದ ಪಂಜಾಬ್, ಹರಿಯಾಣ, ಈಶಾನ್ಯ ರಾಜಸ್ಥಾನದ ಮೂಲಕ ವಾಯುವ್ಯ ಮಧ್ಯಪ್ರದೇಶದವರೆಗೆ ಸಾಗಲಿದ್ದು, ಅದು ಸಮುದ್ರ ಮಟ್ಟದಿಂದ 3.1 ಕಿ.ಮೀ. ಎತ್ತದಲ್ಲಿದೆ ಎಂದು ಐಎಂಡಿ ತಜ್ಞರು ವಿವರಿಸಿದ್ದಾರೆ.
ರಣ ಭೀಕರ ಮಳೆ: ರೆಡ್, ಆರೆಂಜ್ ಅಲರ್ಟ್ ರಾಜ್ಯಗಳು
ಬಂಗಾಳಕೊಲ್ಲಿಯ ಈಶಾನ್ಯ ಮತ್ತು ಮ್ಯಾನ್ಮಾರ್ ಕರಾವಳಿಗೆ ಹೊಂದಿಕೊಂಡ ವೈಪರೀತ್ಯವು ಒಡಿಶಾದ ಉತ್ತರ ಕರಾವಳಿತ್ತ ಸಾಗುವ ನಿರೀಕ್ಷೆ ಇದೆ. ಈ ವೇಳೆ ಅದು ಸಮುದ್ರ ಮಟ್ಟಕ್ಕಿಂತ 1.5 ಕಿ.ಮೀ ವರೆಗೆ ವಿಸ್ತರಿಸುವ ನಿರೀಕ್ಷೆ ಇದೆ. ಇದೆಲ್ಲ ಹವಾಮಾನ ಬದಲಾವಣೆಗಳ ಕಾರಣದಿಂದಾಗಿ ಒಡಿಶಾ, ಉತ್ತರಾಖಂಡ, ಹಿಮಾಚಲ ಪ್ರದೇಶಗಳಲ್ಲಿ ಅತ್ಯಧಿಕ ಭಾರೀ ಮಳೆ ಎದುರಾಗಲಿದೆ. ಮುಂದಿನ 48 ಗಂಟೆ ಈ ಮೂರು ರಾಜ್ಯಗಳಿಗೆ IMD 'ರೆಡ್ ಅಲರ್ಟ್' ನೀಡಿದೆ.
ಛತ್ತೀಸ್ಗಢ, ಪೂರ್ವ ರಾಜಸ್ಥಾನ, ಪಶ್ಚಿಮ ಬಂಗಾಳ, ಹರಿಯಾಣ, ಚಂಡೀಗಢ ಮತ್ತು ದೆಹಲಿ, ಜಮ್ಮು-ಕಾಶ್ಮೀರ, ಪಂಜಾಬ್, ಉತ್ತರಾಖಂಡ, ವಿದರ್ಭ ಹಾಗೂ ಉತ್ತರ ಪ್ರದೇಶದ ಕೆಲವು ಪ್ರತ್ಯೇಕ ಸ್ಥಳಗಳಲ್ಲಿ ಬಿರುಗಾಳಿ ಸಹಿತ ರಣಮಳೆ ಸುರಿಯುವ ಸಾಧ್ಯತೆ ಇದೆ. ಈ ರಾಜ್ಯಗಳಿಗೆ ಎರಡು ದಿನ 'ಆರೆಂಜ್ ಅಲರ್ಟ್' ನೀಡಲಾಗಿದೆ. ಎರಡು ದಿನಗಳ ನಂತರ ಮಳೆ ಕೊಂಚ ತಗ್ಗಲಿದ್ದು, ಆಗ ವ್ಯಾಪಕ ಮಳೆ ನಿರೀಕ್ಷೆ ಇದೆ.
ಸೆಪ್ಟಂಬರ್ 3,4 & 5 ರಂದು ಅಸ್ಸಾಂ ಮತ್ತು ಮೇಘಾಲಯ, ಕರಾವಳಿ ಆಂಧ್ರಪ್ರದೇಶ, ಕರಾವಳಿ ಕರ್ನಾಟಕ, ಪೂರ್ವ ಉತ್ತರ ಪ್ರದೇಶ, ಗುಜರಾತ್ ಪ್ರದೇಶ, ಜಾರ್ಖಂಡ್, ಕೊಂಕಣ ಮತ್ತು ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ, ಕರ್ನಾಟಕ ಕರಾವಳಿ, ಹಿಮಾಲಯದ ಉಪ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಮತ್ತು ರಾಜಸ್ಥಾನದ ಹಲವೆಡೆ ಧಾರಾಕಾರ ಮಳೆ ಆಗಲಿದ್ದು, 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ಕರಾವಳಿ ಭಾಗದಲ್ಲಿ ಗಾಳಿ ವೇಗದಲ್ಲಿ ಹೆಚ್ಚಳ
ಇದೇ ವೇಳೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಕರ್ನಾಟಕದ ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಮತ್ತು ಬಿರುಗಾಳಿ ಸಹಿತ ಮಳೆ ಆಗಲಿದೆ. ಆಗ ಗಾಳಿಯ ವೇಗ ಪ್ರತಿ ಗಂಟೆಗೆ 40-50 ಕಿ.ಮೀ.ಇರಲಿದೆ. ಭಾರೀ ಮಳೆಯ ರಾಜ್ಯಗಳ ಹೊರತಾಗಿ ಇತರ ರಾಜ್ಯಗಳಲ್ಲಿ ನಿತ್ಯವು ಹಗುರದಿಂದ ಸಾಧಾರಣ ಮಳೆ ಮುಂದುವರಿಯಲಿದೆ ಎಂಬ ಮುನ್ಸೂಚನೆ ಇದೆ.
ಆಂಧ್ರಪ್ರದೇಶದ ಕರಾವಳಿ, ತಮಿಳುನಾಡು ಕರಾವಳಿ, ಬಂಗಾಳಕೊಲ್ಲಿ, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳದ ಹೆಚ್ಚಿನ ಭಾಗಗಳಲ್ಲಿ ಸಹ ಗಂಟೆಗೆ 40-60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಐಎಂಡಿ ಮೂಲಗಳು ತಿಳಿಸಿವೆ.












Click it and Unblock the Notifications