ಮುಂಗಾರು ತೀವ್ರತೆ; ಜುಲೈ 19ರವರೆಗೂ ಈ ರಾಜ್ಯಗಳಲ್ಲಿ ಭಾರೀ ಮಳೆ
ನವದೆಹಲಿ, ಜುಲೈ 15: ವಾರದಿಂದ ದೇಶಾದ್ಯಂತ ಮುಂಗಾರು ಮತ್ತೆ ಚುರುಕಾಗಿದ್ದು, ಹಲವು ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಜುಲೈ 19ರವರೆಗೂ ಭಾರೀ ಮಳೆ ಮುಂದುವರೆಯುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜುಲೈ 17ರಂದು ಉತ್ತರ ಭಾರತದಲ್ಲಿ ಭಾರೀ ಮಳೆಯಾಗುವ ಸೂಚನೆ ನೀಡಿದ್ದು, ಪಶ್ಚಿಮ ಕರಾವಳಿಯಲ್ಲಿ ಹೆಚ್ಚಾಗಿರುವ ಮಳೆ ಜುಲೈ 19ರವರೆಗೂ ಮುಂದುವರೆಯುತ್ತದೆ ಎಂದು ಹೇಳಿದೆ. ಜೂನ್ 19ರಿಂದ ಕ್ಷೀಣಿಸಿದ್ದ ನೈಋತ್ಯ ಮುಂಗಾರು ಜುಲೈ 8ರಿಂದ ಮತ್ತೆ ಬಿರುಸು ಪಡೆದುಕೊಂಡಿದೆ. ಜುಲೈ 13ರಂದು ಮುಂಗಾರು ಇಡೀ ದೇಶ ವ್ಯಾಪಿಸಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಕೆಲವು ದಿನ ಬಿರುಸಿನ ಮಳೆಯಾಗಲಿದೆ ಎಂದು ಹೇಳಿದೆ. ಮುಂದೆ ಓದಿ...

ಜುಲೈ 17-19ರವರೆಗೂ ಭಾರೀ ಪ್ರಮಾಣದ ಮಳೆ
ಹಿಮಾಚಲ ಪ್ರದೇಶದಲ್ಲಿ ಜುಲೈ 16ರಂದು ಭಾರೀ ಮಳೆ ಸಂಭವಿಸಲಿದೆ. ಉತ್ತರಾಖಂಡದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತನ್ನ ಈಚಿನ ಮುನ್ಸೂಚನೆಯಲ್ಲಿ ತಿಳಿಸಿದೆ. ಜುಲೈ 16ರವರೆಗೆ ವಾಯವ್ಯ ಭಾರತದಲ್ಲಿ ಚದುರಿದ ಮಳೆಯಾಗಲಿದೆ. ಜುಲೈ 17ರಿಂದ 19ರವರೆಗೆ ಹರಿಯಾಣ, ಪಂಜಾಬ್, ಉತ್ತರ ರಾಜಸ್ಥಾನ, ಉತ್ತರ ಮಧ್ಯ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಲಿದೆ ಎಂದು ತಿಳಿಸಿದೆ.

ಈಶಾನ್ಯ ರಾಜ್ಯಗಳಲ್ಲೂ ಮಳೆ ಹೆಚ್ಚು
ಈಶಾನ್ಯ ರಾಜ್ಯಗಳಲ್ಲಿ ಜುಲೈ 16ರಿಂದ ಹೆಚ್ಚಿನ ಪ್ರಮಾಣದ ಮಳೆ ಆರಂಭವಾಗಲಿದೆ. ಜುಲೈ 17-19ರ ಅವಧಿಯಲ್ಲಿ ಮಳೆ ಪ್ರಮಾಣ ಅತ್ಯಧಿಕವಿರಲಿದೆ ಎಂದು ಮುನ್ಸೂಚನೆಯಲ್ಲಿ ತಿಳಿಸಿದೆ. ಈ ಅವಧಿಯಲ್ಲಿ ಮುಂಜಾಗೃತಾ ಕ್ರಮಗಳನ್ನು ವಹಿಸುವಂತೆ ಸೂಚಿಸಲಾಗಿದೆ.

ಕೊಂಕಣ, ಗೋವಾ ಕರ್ನಾಟಕದಲ್ಲಿ ಮಳೆ
ಮುಂದಿನ ಮೂರು ದಿನಗಳ ಅವಧಿ ಕೊಂಕಣ, ಗೋವಾ, ಕರ್ನಾಟಕದಲ್ಲಿ ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ದೊರೆತಿದ್ದು, ಅತ್ಯಧಿಕ ಮಟ್ಟದಲ್ಲಿ ಮಳೆಯಾಗಬಹುದು ಎಂದು ಎಚ್ಚರಿಕೆ ರವಾನಿಸಲಾಗಿದೆ. ಜುಲೈ 19ರ ನಂತರ ಮಳೆ ಪ್ರಮಾಣ ತಗ್ಗಲಿದೆ ಎಂದು ತಿಳಿಸಲಾಗಿದೆ.

ರಾಜ್ಯದಲ್ಲಿ ಮುಂದಿನ 4 ದಿನ ಭಾರೀ ಮಳೆ ಸೂಚನೆ
ರಾಜ್ಯದಲ್ಲಿ ಮುಂದಿನ 4 ದಿನ ಭಾರಿ ಮಳೆಯಾಗಲಿದ್ದು, 7 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ರಾಯಚೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಿಯೆ ಆರೆಂಜ್ ಅಲರ್ಟ್, ರಾಮನಗರ, ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.












Click it and Unblock the Notifications