IIT Baba Love Story: ಬೆಂಗಳೂರು ಮೂಲದ ಪ್ರತೀಕಾ ಕೈಹಿಡಿದ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್
IIT Baba Love Story: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುದ್ದಿಯಾಗಿದ್ದ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಕುಂಭಮೇಳದಲ್ಲಿ ಸುದ್ದಿಯಾಗಿದ್ದ ಮೊನಾಲಿಸಾ ಭೋಂಸ್ಲೆ ಈಚೆಗೆ ಉತ್ತರ ಪ್ರದೇಶ ಮೂಲದ ಫರ್ಮಾನ್ ಖಾನ್ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಮೊನಾಲಿಸಾ ಭೋಸ್ಲೆ ಕಳೆದ ವರ್ಷ ನಡೆದ ಮಹಾ ಕುಂಭಮೇಳದಲ್ಲಿ ರುದ್ರಾಕ್ಷ ಮತ್ತು ಮುತ್ತಿನ ಮಾಲೆಗಳನ್ನು ಮಾರುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದು ರಾತ್ರೋರಾತ್ರಿ ಫೇಮಸ್ ಆಗಿದ್ದರು. ಈ ಸಾಲಿನಲ್ಲಿ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ ಸಹ ಒಬ್ಬರು. ಅಭಯ್ ಸಿಂಗ್ ಅವರು ಇದೀಗ ಯುವತಿಯೊಬ್ಬರನ್ನು ಪ್ರೀತಿಸಿ ವಿವಾಹವಾಗಿದ್ದಾರೆ.
ಕಳೆದ ವರ್ಷದ ಮಹಾಕುಂಭ ಮೇಳದಲ್ಲಿ ಕೋಟ್ಯಾಂತರ ಜನ ಪುಣ್ಯ ಸ್ನಾನ ಮಾಡಿದ್ದು. ಈ ಕುಂಭಮೇಳದ ನಂತರ ಹಲವರ ಜೀವನ ಬದಲಾಗಿದೆ. ಈ ಮಹಾಕುಂಭ ಮೇಳವು ಅನೇಕರ ಅದೃಷ್ಟವನ್ನೇ ಬದಲಾಯಿಸಿದೆ. ಅವರಲ್ಲಿ ಮೊನಾಲಿಸಾ ಹಾಗೂ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ ಪ್ರಮುಖರು. ಈ ಇಬ್ಬರು ದೇಶದಾದ್ಯಂತ ಸುದ್ದಿಯಾಗಿದ್ದರು. ಮೊನಾಲಿಸಾಗೆ ಸಿನಿಮಾಗಳಲ್ಲಿ, ಮಾಡಲಿಂಗ್ ಅವಕಾಶ ಸಿಕ್ಕರೆ, ಅಭಯ್ ಸಿಂಗ್ ಅವರದ್ದು ಬೇರೆಯದೇ ಕಥೆ. ಈ ಇಬ್ಬರೂ ಸಹ ಇದೀಗ ಪ್ರತ್ಯೇಕವಾಗಿ ಪ್ರೀತಿಸಿ ವಿವಾಹವಾಗಿದ್ದಾರೆ.

ಮುಂಬೈನ ಪ್ರತಿಷ್ಠಿತ ಕಾಲೇಜ್ನಲ್ಲಿ ಐಐಟಿ ಪದವಿಯನ್ನು ಪಡೆದಿರುವುದಾಗಿ ಹೇಳಿಕೊಂಡಿರುವ ಬಾಬಾ ಉರ್ಫ್ ಅಭಯ್ ಸಿಂಗ್ ಎಂಬ ಈ ವ್ಯಕ್ತಿ ಕೆನಡಾದಲ್ಲಿ ಬರೋಬ್ಬರಿ 36 ಲಕ್ಷ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟು ಬಂದಿರುವ ಕಾರಣಕ್ಕೆ ಸುದ್ದಿಯಾಗಿದ್ದರು. ಮಹಾಕುಂಭ ಮೇಳದಲ್ಲಿ ಸ್ನಾನ ಮಾಡಲು ಎಲ್ಲರೂ ಕಾಯುತ್ತಿದ್ದ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು. ತಮ್ಮಲ್ಲಿ ನಿಗೂಢವಾದ ಶಕ್ತಿ ಇದೆ ಎಂದು ಹೇಳಿ, ಜನರಿಗೆ ಭವಿಷ್ಯವನ್ನು ಹೇಳಲು ಸಹ ಶುರು ಮಾಡಿಕೊಂಡಿದ್ದರು. ಆಗ ಮಾಧ್ಯಮಗಳಲ್ಲಿ ವರದಿಯಾದಂತೆ ತ್ರಿಕಾಲಜ್ಞಾನಿಯಂತೆ ಮಾತನಾಡಿ ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ ಭಾರತ ಸೋಲುತ್ತೆ ಎಂದು ಕೂಡ ಹೇಳಿದ್ದರು. ಆದರೆ ಅದು ಆಗಿರಲಿಲ್ಲ.
ಐಐಟಿ ಬಾಬಾ ಎಂದೇ ಖ್ಯಾತಿ ಗಳಿಸಿದ್ದ ಅಭಯ್ ಸಿಂಗ್ ಸದ್ದಿಲ್ಲದೇ ಕಳೆದ ಫೆಬ್ರವರಿ 15, 2026 ರಂದು ಮಹಾಶಿವರಾತ್ರಿಯಂದು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ಅಘಂಜಾರ್ ಮಹಾದೇವ ಎನ್ನುವ ಮಂದಿರದಲ್ಲಿ ಮದುವೆಯಾಗಿದ್ದಾರೆ. ಫೆಬ್ರವರಿ 19 ರಂದು ನ್ಯಾಯಾಲಯದಲ್ಲಿ ತಮ್ಮ ಮದುವೆಯ ನೋಂದಣಿಯನ್ನು ಸಹ ಮಾಡಿಸಿದ್ದಾರೆ. ವಿಶೇಷ ಅಂದರೆ ಬಾಬಾ ಕೈ ಹಿಡಿದ ಬೆಡಗಿ ಬೆಂಗಳೂರಿನ ಪ್ರತೀಕಾ. ಐಐಟಿ ಬಾಬಾ ಈ ಮೂಲಕ ಕರ್ನಾಟಕದ ಅಳಿಯನಾಗಿದ್ದಾರೆ.
IIT Baba Love Story: ಐಐಟಿ ಬಾಬಾ ಅಭಯ್ ಸಿಂಗ್ - ಪ್ರತೀಕಾ ಲವ್ ಸ್ಟೋರಿ
ಬೆಂಗಳೂರು ಮೂಲದ ಪ್ರತೀಕಾ ಅವರು ಇಂಜಿನಿಯರಿಂಗ್ ಪದವೀಧರೆ. ಒಂದು ವರ್ಷದ ಹಿಂದೆ ಅಭಯ್ ಸಿಂಗ್ ಹಾಗೂ ಪ್ರತೀಕಾ ಅವರು ತಮಿಳುನಾಡಿನ ಕೊಯಮತ್ತೂರಿನ ಆದಿಯೋಗಿ ಆಶ್ರಮದಲ್ಲಿ ಭೇಟಿಯಾಗಿದ್ದರು. ಈ ಸ್ನೇಹ ನಂತರ ಪ್ರೇಮವಾಗಿ ಬದಲಾಗಿದೆ. ಅಭಯ್ ಅವರ ಪ್ರಾಮಾಣಿಕತೆ ಮತ್ತು ಜೀವನದ ಕುರಿತು ಅವರಿಗಿರುವ ದೃಷ್ಟಿಕೋನವನ್ನು ನೋಡಿ ಮನಸೋತಿರುವುದಾಗಿ ಪ್ರತೀಕಾ ಹೇಳಿದ್ದಾರೆ. ಅಧ್ಯಾತ್ಮದ ಹಾದಿಯಲ್ಲಿ ಜೊತೆಯಾಗಿ ನಡೆಯಲು ನಿರ್ಧರಿಸಿ ಮದುವೆಯಾಗಿದ್ದಾರೆ.
ಇನ್ನು ಅಭಯ್ ಸಿಂಗ್ ಅವರ ಈ ನಿರ್ಧಾರ ಅವರ ಕುಟುಂಬದಲ್ಲೂ ಸಂತೋಷ ಹಾಗೂ ನೆಮ್ಮದಿ ತಂದಿದೆ ಎಂದು ಹೇಳಲಾಗಿದೆ. ಕೆಲವು ದಿನಗಳ ಹಿಂದೆ ಮನೆಯವರೊಂದಿಗಿನ ಜಗಳದಿಂದಾಗಿ ಮದುವೆಯ ಮೇಲೆ ನಂಬಿಕೆ ಕಳೆದುಕೊಂಡಿರುವುದಾಗಿ ಅಭಯ್ ಹೇಳಿಕೊಂಡಿದ್ದರು. ಇತ್ತೀಚೆಗೆ ಅವರು ತಮ್ಮ ಪತ್ನಿಯೊಂದಿಗೆ ಹರಿಯಾಣದ ತಮ್ಮ ಗ್ರಾಮಕ್ಕೆ ಭೇಟಿ ನೀಡಿದ್ದು, ತಾಯಿ ಶೀಲಾ ದೇವಿ ಅವರು ಕಣ್ಣೀರಾಗಿದ್ದಾರೆ. ಮಗ ಮತ್ತು ಸೊಸೆಗೆ ಆರತಿ ಬೆಳಗಿ ಸಂಭ್ರಮದಿಂದ ಸ್ವಾಗತ ಮಾಡಿದ್ದಾರೆ. ತಂದೆ ಕರಣ್ ಸಿಂಗ್ ಸಹ ಮಗನ ಈ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ.












Click it and Unblock the Notifications