ಈ 10 ರಾಜ್ಯಗಳಲ್ಲಿ ನಿಯಂತ್ರಣಕ್ಕೆ ಬಂದರೆ, ದೇಶ ಕೊರೊನಾ ಗೆದ್ದಂತೆ: ಮೋದಿ ಉಲ್ಲೇಖಿಸಿದ ರಾಜ್ಯಗಳು
ನವದೆಹಲಿ, ಆ 12: ವಿವಿಧ ರಾಜ್ಯಗಳ ಮುಖ್ಯಮಂತ್ರಿ/ಪ್ರತಿನಿಧಿಗಳ ಜೊತೆಗಿನ ವಿಡಿಯೋ ಸಂವಾದದಲ್ಲಿ ಪ್ರಧಾನಿ ಮೋದಿ, ಕೊರೊನಾ ಟೆಸ್ಟಿಂಗ್ ತೀವ್ರಗೊಳಿಸುವಂತೆ ಸೂಚಿಸಿದ್ದಾರೆ. ರಾಜ್ಯದ ಪರವಾಗಿ ಡಿಸಿಎಂ ಡಾ.ಅಶ್ವಥ್ ನಾರಾಯಣ, ವೈದ್ಯಕಿಯ ಶಿಕ್ಷಣ ಸಚಿವ ಡಾ.ಸುಧಾಕರ್ ಮತ್ತು ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಭಾಗವಹಿಸಿದ್ದರು.
"ಪಾಸಿಟೀವ್ ಪ್ರಕರಣ ಹೆಚ್ಚಿರುವ ಹತ್ತು ರಾಜ್ಯಗಳಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದರೆ, ನಾವು ಕೊರೊನಾ ವಿರುದ್ದ ಗೆದ್ದಂತೆ" ಎಂದು ವಿಡಿಯೋ ಸಂವಾದದಲ್ಲಿ ಪ್ರಧಾನಿ ಹೇಳಿದ್ದಾರೆ.
"ಸಕ್ರಿಯ ಪ್ರಕರಣಗಳು ಕಮ್ಮಿಯಾಗುತ್ತಿರುವುದು ಮತ್ತು ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು, ನಮ್ಮೆಲ್ಲರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಜನರೂ ಇದರಿಂದ ಭಯಗೊಳ್ಳುತ್ತಿರುವುದು ಕಡಿಮೆಯಾಗಿದೆ"ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.
ವಿಡಿಯೋ ಸಂವಾದದಲ್ಲಿ ಕರ್ನಾಟಕದ ಪ್ರತಿನಿಧಿಗಳೂ ಸೇರಿದಂತೆ, ಮಹಾರಾಷ್ಟ್ರ, ಆಂಧ್ರಪ್ರದೇಶ, ಬಿಹಾರ, ಗುಜರಾತ್, ಉತ್ತರ ಪ್ರದೇಶ, ತೆಲಂಗಾಣ, ಪಂಜಾಬ್, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಮೋದಿ ಹೇಳಿದ ಹತ್ತು ರಾಜ್ಯಗಳು ಮತ್ತು ನಿಗದಿ ಪಡಿಸಿದ ಎರಡು ಗುರಿಗಳು:

ಮರಣದ ಪ್ರಮಾಣ ಶೇ. 2.1 ರಿಂದ ಶೇ.1.8ಕ್ಕೆ ಇಳಿದಿದೆ
"ಜುಲೈ ವೇಳೆ ಇದ್ದ ಮರಣದ ಪ್ರಮಾಣ ಶೇ. 2.1 ರಿಂದ ಶೇ.1.8ಕ್ಕೆ ಇಳಿದಿದೆ" ಎಂದಿರುವ ಪ್ರಧಾನಿ, "ಹತ್ತು ರಾಜ್ಯಗಳಲ್ಲಿ ದೇಶದ ಶೇ.80ರಷ್ಟು ಕೇಸುಗಳಿವೆ. ಹಾಗಾಗಿ, ಈ ಹತ್ತು ರಾಜ್ಯಗಳಲ್ಲಿ, ಕೊರೊನಾ ನಿಯಂತ್ರಣಕ್ಕೆ ತರುವುದು ಅತ್ಯವಶ್ಯಕ"ಎಂದು ಪ್ರಧಾನಿಗಳು ಹೇಳಿದ್ದಾರೆ.

ರಾಜ್ಯದ ಪ್ರತಿನಿಧಿಗಳಿಗೆ ಎರಡು ಗುರಿಯನ್ನು ನಿಗದಿ ಪಡಿಸಿರುವ ಪ್ರಧಾನಿಗಳು
ಈ ಸಂದರ್ಭದಲ್ಲಿ ರಾಜ್ಯದ ಪ್ರತಿನಿಧಿಗಳಿಗೆ ಎರಡು ಗುರಿಯನ್ನು ನಿಗದಿ ಪಡಿಸಿರುವ ಪ್ರಧಾನಿಗಳು, "ಕೊರೊನಾ ಸೋಂಕು ತಗುಲಿದ 72 ತಾಸಿನೊಳಗೆ, ವ್ಯಕ್ತಿಯನ್ನು ಪತ್ತೆ ಮಾಡಿದರೆ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ, ಇನ್ನೊಂದು, ಮರಣದ ಪ್ರಮಾಣವನ್ನು ಶೇ.1ಕ್ಕಿಂತ ಕಮ್ಮಿ ಮಾಡುವ ಗುರಿಯನ್ನು ಇಟ್ಟುಕೊಳ್ಳೋಣ" ಎನ್ನುವ ಎರಡು ಗುರಿಯನ್ನು ಪ್ರಧಾನಿಗಳು ನೀಡಿದ್ದಾರೆ.

ಕರ್ನಾಟಕ 10 ರಾಜ್ಯದಲ್ಲಿ ನಿಯಂತ್ರಣಕ್ಕೆ ಬಂದರೆ, ದೇಶ ಕೊರೊನಾ ಗೆದ್ದಂತೆ
"ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಬಿಹಾರ, ಗುಜರಾತ್, ಉತ್ತರ ಪ್ರದೇಶ, ತೆಲಂಗಾಣ, ಪಂಜಾಬ್, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚಿವೆ. ಹಾಗಾಗಿ, ಈ ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದರೆ, ಬಹುತೇಕ ನಾವು ಕೊರೊನಾ ಗೆದ್ದಂತೆ"ಎಂದು ಪ್ರಧಾನಿ ಹೇಳಿದ್ದಾರೆ.

ಡಾ.ಸುಧಾಕರ್, ಪ್ರಧಾನಿಗೆ ಮಾಹಿತಿಯನ್ನು ನೀಡಿದ್ದಾರೆ
"ರೋಗ ಹರಡುವಿಕೆಯನ್ನು ತಡೆಗಟ್ಟಲು ಮತ್ತು ಜಾಗೃತಿ ಮೂಡಿಸಲು ಬೂತ್ ಮಟ್ಟದಲ್ಲಿ ತಂಡ ರಚನೆ ಮಾಡಲಾಗಿದೆ. ಪ್ಲಾಸ್ಮಾ ಸಂಗ್ರಹಕ್ಕಾಗಿಯೇ ಪ್ರತ್ಯೇಕ ಬ್ಯಾಂಕ್ ಅನ್ನು ಸ್ಥಾಪಿಸಲಾಗಿದೆ. ದೈನಂದಿನ ಟೆಸ್ಟಿಂಗ್ ಪ್ರಮಾಣ ಗಣನೀಯವಾಗಿ ಏರಿಸಲಾಗಿದೆ"ಎಂದು ರಾಜ್ಯದ ಪರವಾಗಿ ಸಂವಾದದಲ್ಲಿ ಭಾಗವಹಿಸಿದ್ದ ಡಾ.ಸುಧಾಕರ್, ಪ್ರಧಾನಿಗೆ ಮಾಹಿತಿಯನ್ನು ನೀಡಿದ್ದಾರೆ.












Click it and Unblock the Notifications