ನನ್ನನ್ನು ಕ್ಷಮಿಸಿ: ತಾಯಿಯ ಮರಣದ ನಂತರ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡದಿರುವುದಕ್ಕಾಗಿ ಮೋದಿ ಕ್ಷಮೆಯಾಚನೆ
ಗಾಂಧಿನಗರ, ಡಿಸೆಂಬರ್ 30: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪಶ್ಚಿಮ ಬಂಗಾಳದ ಅಭಿವೃದ್ಧಿ ಯೋಜನೆ ಉದ್ಘಾಟನೆಯಲ್ಲಿ ವರ್ಚುವಲ್ ಆಗಿ ಪಾಲ್ಗೊಂಡರು.
ಈ ಕಾರ್ಯಕ್ರಮಗಳಲ್ಲಿ ಭೌತಿಕವಾಗಿ ಹಾಜರಾಗದಿದ್ದಕ್ಕಾಗಿ ಕ್ಷಮೆಯಾಚಿಸಿದರು.
'ಇಂದು ನಾನು ನಿಮ್ಮ ನಡುವೆ ಇರಬೇಕಿತ್ತು. ಆದರೆ ಕೆಲವು ವೈಯಕ್ತಿಕ ಕಾರಣಗಳಿಂದ ನಾನು ಬರಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ನಾನು ನಿಮ್ಮ ಮತ್ತು ಪಶ್ಚಿಮ ಬಂಗಾಳಕ್ಕೆ ಕ್ಷಮೆಯಾಚಿಸುತ್ತೇನೆ' ಎಂದು ಪ್ರಧಾನಿ ಮೋದಿ ತಿಳಿಸಿದರು.
ತಮ್ಮ ತಾಯಿ ಹೀರಾಬೆನ್ ಅವರ ಅಂತಿಮ ವಿಧಿಗಳನ್ನು ನೆರವೇರಿಸಿದ ನಂತರ ವೀಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಶುಕ್ರವಾರ ಬೆಳಗ್ಗೆ ಅವರ ತಾಯಿ ಹೀರಾಬೆನ್ ಸಾವನ್ನಪ್ಪಿದರು.
ಶುಕ್ರವಾರ ಬೆಳಗ್ಗೆ ಅಹಮದಾಬಾದ್ಗೆ ಪ್ರಧಾನಿ ಮೋದಿ ತೆರಳಿದರು.
ಯಾವುದೇ ಕಾರ್ಯಕ್ರಮಗಳನ್ನು ರದ್ದುಗೊಳಿಸುವುದಿಲ್ಲ ಎಂದು ಅವರ ಕಚೇರಿ ಘೋಷಿಸಿತು. ಎಲ್ಲಾ ನಿಗದಿತ ಕೆಲಸಗಳನ್ನು ಮುಂದುವರಿಸುವಂತೆ ಜನರನ್ನು ಮೋದಿ ಒತ್ತಾಯಿಸಿದರು. ಇದು ಹೀರಾಬೆನ್ಗೆ ಸಂದ ಗೌರವವಾಗಿದೆ ಎಂಬುದಾಗಿ ಅವರು ಹೇಳಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಭಾಷಣದಲ್ಲಿ ಹೀರಾಬೆನ್ ಅವರ ಸಾವಿನ ಬಗ್ಗೆ ಪ್ರಸ್ತಾಪಿಸಿದರು. ಪ್ರಧಾನಿ ಮೋದಿ ಅವರು ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರಿಂದ ಕಾರ್ಯಕ್ರಮಗಳನ್ನು ಮೊಟಕುಗೊಳಿಸುವಂತೆ ವಿನಂತಿಸಿದರು.
'ಗೌರವಾನ್ವಿತ ಪ್ರಧಾನ ಮಂತ್ರಿಗಳೇ, ಇಂದು ದುಃಖದ ದಿನ... ನಾನು ದೇವರನ್ನು ಪ್ರಾರ್ಥಿಸುತ್ತೇನೆ. ದೇವರು ನಿಮಗೆ ಶಕ್ತಿಯನ್ನು ನೀಡಲಿ ಮತ್ತು ಆಶೀರ್ವದಿಸಲಿ. ಇದರಿಂದ ನಿಮ್ಮ ಕ್ರಿಯೆ ಮತ್ತು ನಿಮ್ಮ ಚಟುವಟಿಕೆಗಳಿಂದ ನಿಮ್ಮ ತಾಯಿಯ ಪ್ರೀತಿಯನ್ನು ಮುಂದುವರಿಸಬಹುದು' ಎಂದು ಮಮತಾ ಹೇಳಿದರು.
'ನೀವು ಉತ್ಸಾಹದಿಂದ ಇಲ್ಲಿಗೆ ತಲುಪಿದ್ದಕ್ಕಾಗಿ ನಾನು ನಿಮಗೆ ನನ್ನ ಕೃತಜ್ಞತೆಯನ್ನು ತಿಳಿಸುತ್ತೇನೆ' ಎಂದು ಮಮತಾ ತಿಳಿಸಿದರು.
'ನೀವು ವಿಶ್ರಾಂತಿಯನ್ನು ತೆಗೆದುಕೊಳ್ಳಿ. ನಿಮ್ಮ ತಾಯಿ, ನಮ್ಮ ತಾಯಿ ಇದ್ದ ಹಾಗೆ. ನಾನು ನನ್ನ ತಾಯಿಯನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳುತ್ತೇನೆ' ಎಂದು ಮಮತಾ ಹೇಳಿದರು.
ಹೌರಾ-ನ್ಯೂ ಜಲ್ಪೈಗುರಿ ವಂದೇ ಭಾರತ್ ಎಕ್ಸ್ಪ್ರೆಸ್ ಮತ್ತು ಕೋಲ್ಕತ್ತಾ ಮೆಟ್ರೋದ ನೇರಳೆ ಮಾರ್ಗಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯ ಚಳವಳಿಗೆ ಬಂಗಾಳದ ಕೊಡುಗೆಯನ್ನು ನೆನಪಿಸಿಕೊಂಡರು. ಡಿಸೆಂಬರ್ 30 ಇತಿಹಾಸದಲ್ಲಿ ಮಹತ್ವದ ದಿನವಾಗಿದೆ ಎಂದು ಹೇಳಿದರು.
'ವಂದೇ ಮಾತರಂ ಕರೆ ನೀಡಿದ ಭೂಮಿ ಈಗ ವಂದೇ ಭಾರತ್ ಧ್ವಜವನ್ನು ನೋಡುತ್ತಿದೆ' ಎಂದು ಪ್ರಧಾನಿ ಮೋದಿ ತಿಳಿಸಿದರು.