ಕುರ್ಚಿಗಲ್ಲ, ನನ್ನ ಕಾಳಜಿ ಏನಿದ್ದರೂ ರೈತರ ಮೇಲೆ: ನರೇಂದ್ರ ಮೋದಿ
ಬನಷ್ಕಂಠ, ಡಿಸೆಂಬರ್ 08: "ನನ್ನ ಕಾಳಜಿ ಇರುವುದು ಕುರ್ಚಿಯ ಮೇಲಲ್ಲ, ರೈತರ ಮೇಲೆ" ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ರೈತರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಿದ್ದಾರೆ.
"ಗುಜರಾತ್ ಪ್ರವಾಹ ಬಂದಾಗ ಕಾಂಗ್ರೆಸಿಗರು ಬೆಂಗಳೂರಿನ ಈಜುಕೊಳದಲ್ಲಿದ್ರು"
ಗುಜರಾತ್ ನಲ್ಲಿ ಡಿ.9 ಮತ್ತು 14 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಪಟಾನ್ ಮತ್ತು ಬನಷ್ಕಂಠದ ರೈತರು ಒಮ್ಮೆ ನನ್ನನ್ನು ಭೇಟಿಯಾಗಿದ್ದರು. ಆಗ ನಾನವರಿಗೆ ನೀರಾವರಿ ಬಗ್ಗೆ ಗಮನ ಹರಿಸಿ ಎಂದಿದ್ದೆ. ಅದಕ್ಕೆ ಅವರು, ಇದು ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬಹುದು ಎಂದಿದ್ದರು. ಆಗ ನಾನು, ನನಗೆ ಕುರ್ಚಿ ಮುಖ್ಯವಲ್ಲ. ರೈತರು ಮುಖ್ಯ ಎಂದಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ' ಎಂದರು.
ಗುಜರಾತಿನಲ್ಲಿ ಭೀಕರ ಪ್ರವಾಹವಾಗಿದ್ದ ಸಮಯದಲ್ಲಿ, ಬಿಜೆಪಿ ಕಾರ್ಯಕರ್ತರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದರೆ, ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್ ವೊಂದರಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು ಎಂದು ಕಾಂಗ್ರೆಸ್ ಅನ್ನು ಕುಟುಕಿದರು.
ಗುಜರಾತಿನ ಒಟ್ಟು 182 ಕ್ಷೇತ್ರಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಡಿಸೆಂಬರ್ 18 ರಂದು ಬಿಡುಗಡೆಯಾಗಲಿದೆ.