ನಾನು ಅಜ್ಮಲ್ ಕಸಬ್ಗಿಂತ ಕೆಟ್ಟವನಲ್ಲ ಎಂದಿದ್ದೇಕೆ ದೆಹಲಿ ಮಿನಿಸ್ಟರ್!
ನವದೆಹಲಿ, ನವೆಂಬರ್ 23: ತಿಹಾರ್ ಜೈಲಿನಲ್ಲಿ ವಿಐಪಿ ಆತಿಥ್ಯ ನೀಡಿದ ಆರೋಪದ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಆಮ್ ಆದ್ಮಿ ಪಕ್ಷದ ದೆಹಲಿ ಸಚಿವ ಸತ್ಯೇಂದ್ರ ಜೈನ್ ಜೈಲಿನ ಅವ್ಯವಸ್ಥೆ ಬಗ್ಗೆ ಮಾತನಾಡಿದ್ದಾರೆ.
ಮಂಗಳವಾರ ಸತ್ಯೇಂದರ್ ಜೈನ್ ವಿಚಾರಣಾ ನ್ಯಾಯಾಲಯಕ್ಕೆ ಈ ಬಗ್ಗೆ ದೂರು ಸಲ್ಲಿಸಿದ್ದು, ಜೈಲಿನಲ್ಲಿ ಸರಿಯಾದ ಆಹಾರ ಮತ್ತು ವೈದ್ಯಕೀಯ ಚಿಕಿತ್ಸೆಯು ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಅವರು ಕಸ್ಟಡಿಯಲ್ಲಿ ಸುಮಾರು 28 ಕೆಜಿ ತೂಕ ಕಡಿಮೆಯಾಗಿದ್ದಾರೆ ಎಂದು ಅವರ ಪರ ಹಿರಿಯ ವಕೀಲ ರಾಹುಲ್ ಮೆಹ್ರಾ ಉಲ್ಲೇಖಿಸಿದ್ದಾರೆ.
ತಮ್ಮ ಜೈಲಿನ ಕೊಠಡಿಯೊಳಗಿನ ದೃಶ್ಯಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ ಆರೋಪದ ಮೇಲೆ ಕೇಂದ್ರ ತನಿಖಾ ಸಂಸ್ಥೆ ಇಡಿ ವಿರುದ್ಧ ಸತ್ಯೇಂದ್ರ ಜೈನ್ ಅವರು ಸಲ್ಲಿಸಿದ ಅವಹೇಳನದ ಅರ್ಜಿಯನ್ನು ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ವಿಚಾರಣೆ ನಡೆಸಿದರು. ಈ ಸಂಬಂಧ ಹೆಚ್ಚಿನ ವಾದ-ಪ್ರತಿವಾದವನ್ನು ಆಲಿಸುವುದಕ್ಕಾಗಿ ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿಕೆ ಮಾಡಿತು.

ಜಾರಿ ನಿರ್ದೇಶನಾಲಯದಿಂದ ಸಚಿವರಿಗೆ ಮಾನಹಾನಿ
ದೆಹಲಿ ಸಚಿವ ಸತ್ಯೇಂದರ್ ಜೈನ್ ಅವರ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ನ್ಯಾಯಾಲಯದ ಆದೇಶದ ಹೊರತಾಗಿಯೂ ಮಾಧ್ಯಮಗಳಿಗೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡುತ್ತಿದೆ ಎಂದು ಅವರ ವಕೀಲರು ವಾದಿಸಿದರು. "ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಕೃತ್ಯದಿಂದ ನನಗೆ ಪ್ರತಿ ನಿಮಿಷವೂ ಮಾನಹಾನಿಯಾಗುತ್ತಿದೆ," ಎಂದು ಜೈನ್ ಪರ ಮಾತನಾಡಿದ ವಕೀಲರು ಉಲ್ಲೇಖಿಸಿದ್ದಾರೆ.

ಕಸಬ್ ಗಿಂತ ನಾನೇನೂ ಕೆಟ್ಟವನಲ್ಲ ಎಂದು ವಾದ
26/11ರ ಮುಂಬೈ ದಾಳಿಗೆ ಸಂಬಂಧಿಸಿದಂತೆ ಗಲ್ಲಿಗೇರಿದ ಪಾಕಿಸ್ತಾನಿ ಭಯೋತ್ಪಾದಕನನ್ನು ಉಲ್ಲೇಖಿಸಿ, "ಅಜ್ಮಲ್ ಕಸಬ್ ಕೂಡ ಮುಕ್ತ ಮತ್ತು ನ್ಯಾಯಯುತ ವಿಚಾರಣೆಯನ್ನು ಪಡೆದರು" ಎಂದು ಹೇಳಿದರು. "ನಾನು ಖಂಡಿತವಾಗಿಯೂ ಅದಕ್ಕಿಂತ ಕೆಟ್ಟವನಲ್ಲ. ನಾನು ಬಯಸುವುದು ನ್ಯಾಯಯುತ ಮತ್ತು ಮುಕ್ತ ವಿಚಾರಣೆಯಷ್ಟೇ. ದಯವಿಟ್ಟು ಸತ್ಯೇಂದ್ರ ಜೈನ್ ವಿರುದ್ಧ ನಡೆಯುತ್ತಿರುವ ಮಾಧ್ಯಮ ವರದಿಗಳನ್ನು ನೋಡಿ ಮತ್ತು ಅದು ಏಜೆನ್ಸಿಗಳ ಹಿತಾಸಕ್ತಿಯಾಗಿದೆ," ಎಂದು ಜೈನ್ ಪರ ವಕೀಲರು ಹೇಳಿದರು.

ಜೈಲಿನಲ್ಲಿದ್ದು 28 ಕೆಜಿ ತೂಕ ಕಳೆದುಕೊಂಡ ಮಿನಿಸ್ಟರ್!
ದೆಹಲಿ ಸಚಿವ ಸತ್ಯೇಂದರ್ ಜೈನ್ ಜೈಲಿನಲ್ಲಿ ವಿಶೇಷ ಆತಿಥ್ಯ ಪಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯದ ಆರೋಪಗಳನ್ನು ವಕೀಲರು ನಿರಾಕರಿಸಿದರು. "ಅವರು ಯಾವ ಸವಲತ್ತಿನ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಜೈಲಿನಲ್ಲಿ 28 ಕೆಜಿ ತೂಕವನ್ನು ಕಳೆದುಕೊಂಡಿದ್ದೇನೆ. ಜೈಲಿನಲ್ಲಿರುವ ವಿಶೇಷ ವ್ಯಕ್ತಿಗೆ ಸಿಗುವುದು ಇದೇನಾ? ನನಗೆ ಸರಿಯಾದ ಆಹಾರವೂ ಸಿಗುತ್ತಿಲ್ಲ. ವಿಚಾರಣಾಧೀನ ಆರೋಪಿ ಆಗಿದ್ದರೂ ಅವರು ಜೈಲಿನ ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ವಕೀಲರು ತಿಳಿಸಿದರು.
ಇದರ ಮಧ್ಯೆ ಜೈನ್ ಮಸಾಜ್ ಪಡೆಯುತ್ತಿರುವ ವೈರಲ್ ವೀಡಿಯೋಗಳು ಮತ್ತು "ಅವರ ಚಿಕಿತ್ಸೆಯ ಭಾಗವಾಗಿ ಕಡ್ಡಾಯಗೊಳಿಸಲಾದ ಫಿಸಿಯೋಥೆರಪಿ ಅವಧಿಗೆ" ಸಂಬಂಧಿಸಿದ್ದೇ ಆಗಿದೆ ಎಂಬ ಎಎಪಿಯ ಹೇಳಿಕೆಯನ್ನು ವಾದದಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಯಿತು.

ಒಂದೇ ಒಂದು ವಿಡಿಯೋ ಲೀಕ್ ಮಾಡಿಲ್ಲ ಇಡಿ!
ಜೂನ್ನಿಂದ ಸತ್ಯೇಂದರ್ ಜೈನ್ ಅನ್ನು ಜೈಲಿನಲ್ಲಿಡಲು ಕೇಂದ್ರ ಬಿಜೆಪಿ ಸರ್ಕಾರವು ಕೇಂದ್ರೀಯ ಸಂಸ್ಥೆ ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಎಪಿ ಪದೇ ಪದೇ ಹೇಳುತ್ತಿದೆ. ಆದರೆ "ಫಿಸಿಯೋಥೆರಪಿ" ಸಂಬಂಧಿಸಿದ ವಿಡಿಯೋದಿಂದ ತೀವ್ರವಾಗಿ ಮುಖಭಂಗವನ್ನು ಎದುರಿಸುವಂತಾಗಿದೆ. ಇದರ ಮಧ್ಯೆ "ಮಸಾಜ್" ಮಾಡಿದವನು ಒಬ್ಬ ವಿಚಾರಣಾಧೀನ ಕೈದಿಯಾಗಿದ್ದು, ಅತ್ಯಾಚಾರದ ಆರೋಪಿ ಎಂದು ಮೂಲಗಳು ತಿಳಿಸಿವೆ.
ಸತ್ಯೇಂದ್ರ ಜೈನ್ ಅವರಿಗೆ ಫಿಸಿಯೋಥೆರಪಿ ಮಾಡುವಂತೆ ಸಲಹೆ ನೀಡಿದ್ದರಿಂದ ಅದನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಇಡಿ ವಕೀಲ ಜೊಹೈಬ್ ಹೊಸೈನ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ. ಅಲ್ಲದೇ ಕೇಂದ್ರೀಯ ಸಂಸ್ಥೆಯಿಂದ "ಒಂದೇ ಒಂದು ಸೋರಿಕೆಯೂ ಆಗಿಲ್ಲ," ಎಂದು ಅವರು ಹೇಳಿದರು. ಜೈನ್ ಅವರ ತಂಡಕ್ಕೆ ಪೆನ್ ಡ್ರೈವ್ನಲ್ಲಿ ಸೆರೆಮನೆಯ ದೃಶ್ಯಾವಳಿಗಳನ್ನು ನೀಡಲಾಗಿದೆ ಎಂದು ಇಡಿ ಹೇಳಿದೆ.
ಇಡಿ ಪ್ರಕರಣದ ನೇತೃತ್ವ ವಹಿಸಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಎಸ್ವಿ ರಾಜು ವೈಯಕ್ತಿಕ ಕಾರಣಗಳಿಗಾಗಿ ಹಾಜರಾಗದ ಕಾರಣ ನ್ಯಾಯಾಲಯವು ಪ್ರಕರಣವನ್ನು ಮುಂದೂಡಿದೆ.












Click it and Unblock the Notifications