Get Updates
Get notified of breaking news, exclusive insights, and must-see stories!

ಮಸ್ಕ್ ನೇತೃತ್ವದ ಟ್ವಿಟ್ಟರ್‌ಗೆ ಜೋಕೆ, ಭಾರತದಿಂದ ಸಿಗಲಿದೆ ಎಚ್ಚರಿಕೆ

ಬೆಂಗಳೂರು, ಏ. 27: ಎಲಾನ್ ಮಸ್ಕ್ ಲಕ್ಷಕೋಟಿಗಳನ್ನು ಕೊಟ್ಟು ಟ್ವಿಟ್ಟರ್ ಎಂಬ ಜನಪ್ರಿಯ ಸೋಷಿಯಲ್ ಮೀಡಿಯಾ ಕಂಪನಿಯನ್ನು ಖರೀದಿಸಿದ್ದಾರೆ. ಟ್ವಿಟ್ಟರ್ ವಾಕ್ ಸ್ವಾತಂತ್ರ್ಯಕ್ಕೆ ಒಳ್ಳೆಯ ವೇದಿಕೆಯಾಗಿ ಮಾರ್ಪಡಿಸುತ್ತೇನೆ ಎಂಬ ಪ್ರಮುಖ ಘನ ಉದ್ದೇಶದಿಂದ ಎಲಾನ್ ಮಸ್ಕ್ ಅವರು ಈ ವ್ಯವಹಾರಕ್ಕೆ ಕೈಹಾಕಿದ್ದಾರೆ. ಟ್ವಿಟ್ಟರ್ ಎಲ್ಲರ ಅಭಿಪ್ರಾಯಗಳಿಗೆ ಮಣೆಹಾಕುತ್ತದೆ. ಯಾವುದನ್ನೂ ನಿರ್ಬಂಧಿಸುವುದಿಲ್ಲ. ಯಾರು ಬೇಕಾದರೂ ಮುಕ್ತವಾಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಇವು ಎಲಾನ್ ಮಸ್ಕ್ ಅವರ ಪರಿಕಲ್ಪನೆಯ ಟ್ವಿಟ್ಟರ್.

ಆದರೆ, ಮಸ್ಕ್ ಅವರ ಈ 'ಮುಕ್ತ' ನೀತಿ ಜಾಗತಿಕವಾಗಿ ಜಾರಿಗೊಳ್ಳುವುದು ಅಷ್ಟು ಸುಲಭವಲ್ಲ. ಎಲಾನ್ ಮಸ್ಕ್ ಅಂದುಕೊಂಡಂತೆ ಟ್ವಿಟ್ಟರ್ ಸರ್ವರ ಅಭಿಪ್ರಾಯಗಳಿಗೆ ಅನಿರ್ಬಂಧಿತ ವೇದಿಕೆಯಾದರೆ ಅದು ಭಾರತದಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗಬಹುದು ಎನ್ನುತ್ತಾರೆ ಕೆಲ ಭಾರತೀಯ ತಂತ್ರಜ್ಞಾನ ನೀತಿ ತಜ್ಞರು.

ಭಾರತದಲ್ಲಿರುವ ಐಟಿ ಕಾನೂನುಗಳು ಮಸ್ಕ್ ಪರಿಕಲ್ಪನೆಯ ಮುಕ್ತ ಅಭಿಪ್ರಾಯಗಳಿಗೆ ಆಸ್ಪದ ಕೊಡುವುದಿಲ್ಲ. ಭಾರತದ ಕಾನೂನುಗಳಿಗೆ ಬದ್ಧವಾಗಿಲ್ಲದೇ ಹೋದರೆ ಟ್ವಿಟ್ಟರ್ ಆಗಲಿ ಅಥವಾ ಬೇರೆ ಸೋಷಿಯಲ್ ಮೀಡಿಯಾ ಕಂಪನಿಗಳಾಗಲೀ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಈ ಕಂಪನಿಗಳ ಹಿರಿಯ ಅಧಿಕಾರಿಗಳೂ ಕೂಡ ಕಾನೂನು ಕ್ರಮಕ್ಕೆ ಸಿದ್ಧವಾಗಿರಬೇಕಾಗುತ್ತದೆ.

Twitter Led by Elon Musk May Face Trouble in India Over Free Speech

"ವಿವಿಧ ಕಾರಣಗಳನ್ನ ಕೊಟ್ಟು ಪೋಸ್ಟ್‌ಗಳನ್ನು ಡಿಲೀಟ್ ಮಾಡುವಂತೆ ಒತ್ತಾಯಗಳ ಮಹಾಪೂರವೇ ಹರಿದುಬರುತ್ತದೆ. ಇದು ಮಸ್ಕ್ ಪರಿಕಲ್ಪನೆ ವಾಕ್ ಸ್ವಾತಂತ್ರ್ಯಕ್ಕೆ ತಾಳೆ ಹೊಂದುವುದಿಲ್ಲ. ಟ್ವಿಟ್ಟರ್ ಬಹಳಷ್ಟು ಘರ್ಷಣೆ ಎದುರಿಸಬೇಕಾಗುತ್ತದೆ. ಭಾರತದಲ್ಲಿ ಮಾತ್ರವಲ್ಲ ಯೂರೋಪ್‌ನಲ್ಲೂ ಎಲಾನ್ ಮಸ್ಕ್ ಅವರ ಟ್ವಿಟ್ಟರ್‌ಗೆ ಒತ್ತಡ ಹೆಚ್ಚಬಹುದು" ಎಂದು ಸೈಬರ್ ತಜ್ಞ ಪ್ರಶಾಂತೋ ಕೆ ರಾಯ್ ಹೇಳುತ್ತಾರೆ.

ಭಾರತೀಯರು ಬಹಳ ಸೂಕ್ಷ್ಮಮತಿಯರು:
ಸೋಷಿಯಲ್ ಮೀಡಿಯಾ ಕಂಪನಿಗಳಿಗೆ ಭಾರತ ಒಂದು ದೊಡ್ಡ ಮಾರುಕಟ್ಟೆ. ಆದರೆ, ಇಲ್ಲಿ ವ್ಯವಹಾರ ನಡೆಸುವುದು ಬಹಳ ಗೋಜಲಿನ ಸಂಗತಿಯೂ ಹೌದು ಎಂಬ ಅನಿಸಿಕೆಗಳಿವೆ.

Twitter Led by Elon Musk May Face Trouble in India Over Free Speech

"ಭಾರತೀಯ ಸಮಾಜ ಬಹಳ ಸಂಕೀರ್ಣ ಹಾಗೂ ವೈವಿಧ್ಯಮಯವಾಗಿದೆ. ಹಾಗೆಯೇ ಬಹಳ ಸೂಕ್ಷ್ಮವೂ ಹೌದು. ಯಾವ ವಿಷಯವೇ ಆಗಲೀ ಯಾರಿಗಾದರೊಬ್ಬರಿಗಾದರೂ ಘಾಸಿ ಮಾಡುತ್ತದೆ," ಎಂದು ಒಬ್ಬ ಉದ್ಯಮ ತಜ್ಞರು ತಿಳಿಸುತ್ತಾರೆ.

"ಇಲಾನ್ ಮಸ್ಕ್ ಅವರ ಪರಿಕಲ್ಪನೆಯ ವಾಕ್ ಸ್ವಾತಂತ್ರ್ಯವು ಪಾಶ್ಚಿಮಾತ್ಯ ದೃಷ್ಟಿಕೋನಕ್ಕೆ ಸಂಬದ್ಧವಾಗಿರುತ್ತದೆ. ಆದರೆ, ನಾವು ಭಾರತೀಯರು ಕಾಣುವ ರೀತಿಯ ವಾಕ್ ಸ್ವಾತಂತ್ರ್ಯವೇ ಬೇರೆಯದ್ದು," ಎಂದು ತಂತ್ರಜ್ಞಾನ ವಿಶ್ಲೇಷಕರೊಬ್ಬರು ಇಂಡಿಯಾಟೈಮ್ಸ್‌ಗೆ ಹೇಳಿದ್ದಾರೆ.

ಸಚಿವ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯೆ:

ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿಸಿದ ಬೆಳವಣಿಗೆಯನ್ನು ಭಾರತ ಸರಕಾರ ಎಚ್ಚರದಿಂದ ಗಮನಿಸಿದೆ. ಕೇಂದ್ರ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ ಎಲಾನ್ ಮಸ್ಕ್ ಅವರಿಗೆ ಶುಭಾಶಯ ಹೇಳಿದ್ದಾರೆ. ಹಾಗೆಯೇ, ಭಾರತದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಕಂಪನಿಗಳಿಂದ ಜವಾಬ್ದಾರಿತನ, ಸುರಕ್ಷತೆ ಮತ್ತು ವಿಶ್ವಾಸವನ್ನು ಸರಕಾರ ನಿರೀಕ್ಷಿಸುತ್ತದೆ. ಈ ನೀತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ ಒಂದು ಧರ್ಮದ ವಿರುದ್ಧ ಯಾರಾದರೂ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೆ ಕೊಟ್ಟರೆ ಆ ಸಮುದಾಯ ರೊಚ್ಚಿಗೆದ್ದು ಪ್ರತಿಭಟಿಸುತ್ತದೆ. ಈ ಸೋಷಿಯಲ್ ಮೀಡಿಯಾ ಪೋಸ್ಟ್ ಡಿಲೀಟ್ ಮಾಡುವವರೆಗೂ ಬಿಡುವುದಿಲ್ಲ. ಪೊಲೀಸ್ ಇಲಾಖೆ, ಸರಕಾರದಿಂದ ಇಂಥ ಹಲವು ಬೇಡಿಕೆಗಳು ಮತ್ತು ಒತ್ತಾಯಗಳು ನಿತ್ಯವೂ ವಿವಿಧ ಸೋಷಿಯಲ್ ಮೀಡಿಯಾಗೆ ಹೋಗುತ್ತಲೇ ಇರುತ್ತವೆ. ಸರಕಾರವನ್ನು ನಿಂದಿಸುವುದು, ಕೋಮುದಳ್ಳುರಿಗೆ ಕಾರಣವಾಗುವುದು, ಹಿಂಸಾಚಾರಕ್ಕೆ ಪ್ರೇರೇಪಿಸುವುದು ಹೀಗೆ ಹಲವು ಕಾರಣಗಳಿಗೆ ಸೋಷಿಯಲ್ ಮೀಡಿಯಾದ ಪೋಸ್ಟ್‌ಗಳನ್ನು ಸರಕಾರಿ ಅಧಿಕಾರಿಗಳು ಒತ್ತಾಯಪೂರ್ವಕವಾಗಿ ಡಿಲೀಟ್ ಮಾಡಿಸುತ್ತಿರುತ್ತಾರೆ.

ಹೀಗಾಗಿ, ಭಾರತದಂಥ ಸಂಕೀರ್ಣ ಮತ್ತು ಸೂಕ್ಷ್ಮ ಸಮಾಜದ ದೇಶದಲ್ಲಿ ಟ್ವಿಟ್ಟರ್ ಆಗಲೀ ಫೇಸ್‌ಬುಕ್ ಆಗಲೀ ನಿರ್ವಹಿಸುವುದು ಬಹಳ ಕಷ್ಟ. ಹಾಗಾಗಿಯೇ, ವಿವಿಧ ದೇಶಗಳ ಕಾನೂನುಗಳನ್ನ ಗಮನದಲ್ಲಿಟ್ಟುಕೊಂಡು ಸೋಷಿಯಲ್ ಮೀಡಿಯಾ ಕಂಪನಿಗಳು ಕಮ್ಯೂನಿಟಿ ಗೈಡ್‌ಲೈನ್ಸ್ ರೂಪಿಸುತ್ತವೆ. ಕೆಲ ಅಸಂಬದ್ಧವೆನಿಸುವ ಪೋಸ್ಟ್‌ಗಳನ್ನ ಯಾರು ಬೇಕಾದರೂ ಫ್ಲ್ಯಾಗ್ ಮಾಡುವ ಆಯ್ಕೆಯನ್ನು ಎಲ್ಲರಿಗೂ ನೀಡಲಾಗಿರುತ್ತದೆ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+