ಮಹಾರಾಷ್ಟ್ರ, ಹರಿಯಾಣದಲ್ಲಿ ಮೋದಿ ಮ್ಯಾಜಿಕ್ ಮಾಡಿದ್ದು, ರಾಹುಲ್ ಲಾಜಿಕ್ ಟುಸ್ಸಾಗಿದ್ದು ಹೇಗೆ? ಸ್ಫೋಟಕ ಸಮೀಕ್ಷೆ ಹೇಳುವುದೇನು?
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಜೋರಾಗಿದೆ. 2024 ಲೋಕಸಭೆ ಚುನಾವಣೆ ಭರ್ಜರಿ ಫಲಿತಾಂಶದ ಹೊರತಾಗಿಯೂ, ಬಿಜೆಪಿಯು ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಗಳಲ್ಲಿ ಅದ್ಭುತ ಜಯ ಸಾಧಿಸಿದೆ. ಸರ್ಕಾರ ರಚನೆಯ ಲೆಕ್ಕಾಚಾರದಲ್ಲಿದ್ದ ಕೈ ಪ್ಲಾನ್ ಉಲ್ಟಾ ಆಗಿದೆ. ಭಾರಿ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಮಕಾಡೆ ಮಲಗಿದೆ.
ಈ ಬಾರಿ ಹರ್ಯಾಣದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವುದು ಕಷ್ಟ ಎನ್ನಲಾಗಿತ್ತು, ಮಹಾರಾಷ್ಟ್ರದಲ್ಲಿ ಫಲಿತಾಂಶ ಅತಂತ್ರವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಮತದಾರರು ಬಿಜೆಪಿ ಹಾಗೂ ಎನ್ಡಿಎ ಕೂಟಕ್ಕೆ ಭಾರಿ ಬಹುಮತ ನೀಡಿದ್ದಾರೆ. ಇದಕ್ಕೆ ಕಾರಣವೇನು? ಈ ರಾಜ್ಯದಲ್ಲಿ ಜನತೆ ಕಾಂಗ್ರೆಸ್ ಪಕ್ಷವನ್ನ ತಿರಸ್ಕರಿಸಿ ಬಿಜೆಪಿಗೆ ಮತ ಹಾಕಿದ್ದೇಕೆ? ಎಂಬ ಕುರಿತು ಸಮೀಕ್ಷಾ ವರದಿಯೊಂದು ಬಿಡುಗಡೆಯಾಗಿದೆ.

ಮ್ಯಾಟ್ರಿಜ್ ಸಮೀಕ್ಷೆಯು ಈ ರಾಜ್ಯಗಳಲ್ಲಿ ಬಿಜೆಪಿಯ ಯಶಸ್ಸಿನ ಹಿಂದಿನ ಅಂಶಗಳ ಬಗ್ಗೆ ಮೌಲ್ಯಯುತ ಮಾಹಿತಿಯನ್ನ ಬಹಿರಂಗಪಡಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ನಿರಂತರ ಪ್ರಭಾವ, ಪರಿಣಾಮಕಾರಿ ಸವಾಲನ್ನು ಎದುರಿಸುವಲ್ಲಿ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ವೈಫಲ್ಯ ಮತ್ತು ಸಂಸತ್ತಿನ ಮತ್ತು ವಿಧಾನಸಭೆ ಚುನಾವಣೆಗಳ ನಡುವೆ ಮತದಾರರ ಭಾವನೆಗಳ ಬದಲಾವಣೆಯಂತಹ ಹಲವಾರು ಅಂಶಗಳನ್ನು ಸಮೀಕ್ಷೆಯಿಂದ ತಿಳಿದು ಬಂದಿದೆ.
ಮಹಾರಾಷ್ಟ್ರ, ಹರ್ಯಾಣ ಚುನಾವಣೆಯಲ್ಲಿ ಬಿಜೆಪಿ ಗೆಲುವು, ಕಾಂಗ್ರೆಸ್ ಸೋಲಿನ ಕಾರಣಗಳನ್ನು ಪಟ್ಟಿ ಮಾಡಿರುವ ಮ್ಯಾಟ್ರಿಝ್ ಸರ್ವೆಯಲ್ಲಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ಗೆ ಸಂವಿಧಾನ ಕೈಹಿಡಿಯಲಿಲ್ಲ, ಇತ್ತ ಬಿಜೆಪಿಗೆ ಪ್ರಧಾನಿ ಮೋದಿ ಆಡಳಿತ ಹಾಗೂ ಜನಪ್ರಿಯತೆಯೇ ವರವಾಗಿದೆ ಎಂದಿದೆ. ಮ್ಯಾಟ್ರಿಝ್ ಸಂಸ್ಥೆ ನವೆಂಬರ್ 25 ರಿಂದ ಡಿಸೆಂಬರ್ 14ರ ವರೆಗೆ ಮಹಾರಾಷ್ಟ್ರದಲ್ಲಿ 76,830 ಮಂದಿ ಹಾಗೂ ಹರ್ಯಾಣದಲ್ಲಿ 53657 ಮಂದಿಯನ್ನು ಸಂದರ್ಶಿಸಿ ಈ ವರದಿ ತಯಾರಿಸಿದೆ ಎಂದು ಹೇಳಲಾಗಿದೆ.
ಬಿಜೆಪಿಯ ಯಶಸ್ಸಿನಲ್ಲಿ ಪ್ರಮುಖ ಅಂಶವಾಗಿ ಪ್ರಧಾನಿ ನರೇಂದ್ರ ಮೋದಿಯವರ ನಿರಂತರ ಜನಪ್ರಿಯತೆಯನ್ನು ಸಮೀಕ್ಷೆ ಹೇಳಿದೆ. ಈ ವರ್ಷದ ಆರಂಭದಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಕೇವಲ 240 ಸ್ಥಾನಗಳನ್ನು ಗಳಿಸಿದ್ದರೂ ಸಹ, ಮಹಾರಾಷ್ಟ್ರ ಮತ್ತು ಹರಿಯಾಣ ಎರಡರಲ್ಲೂ ಮತದಾರರಲ್ಲಿ ತಮ್ಮ ಬಲವಾದ ಮನವಿಯನ್ನು ಪ್ರಧಾನಿ ಮೋದಿ ಉಳಿಸಿಕೊಂಡಿದ್ದಾರೆ. ಹರ್ಯಾಣ ಹಾಗೂ ಮಹಾರಾಷ್ಟ್ರ ಚುನಾವಣೆಯಲ್ಲಿ ಎರಡೂ ರಾಜ್ಯದ ಜನ ಪ್ರಧಾನಿ ನರೇಂದ್ರ ಮೋದಿ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿದ್ದಾರೆ ಅನ್ನೋದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಹರ್ಯಾಣ ಹಾಗೂ ಮಹಾರಾಷ್ಟ್ರ ಎರಡೂ ರಾಜ್ಯದಲ್ಲಿ ಶೇಕಡಾ 53 ರಿಂದ 55ರಷ್ಟು ಜನ ಮೋದಿ ಜನಪ್ರಿಯತೆ, ಮೋದಿ ಚರಿಷ್ಮಾ ಹೆಚ್ಚಾಗಿದೆ ಎಂದಿದ್ದಾರೆ.ಸ್ವಚ್ಚ ಆಡಳಿತ, ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಸಿಕ್ಕಿರುವ ಸ್ಥಾನ ಸೇರಿದಂತೆ ಹಲವು ವಿಚಾರಗಳ ಕುರಿತು ಹೆಮ್ಮೆ ಪಟ್ಟಿದ್ದಾರೆ. ಎರಡೂ ರಾಜ್ಯದ ಜನ ಪ್ರಧಾನಿ ಮೋದಿ ಆಡಳಿತ ಮೆಚ್ಚಿಕೊಂಡಿದ್ದಾರೆ ಎನ್ನುವುದು ಸಮೀಕ್ಷಾ ವರದಿಯಲ್ಲಿ ಬಹಿರಂಗವಾಗಿದೆ.
ಇನ್ನೂ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ, ಜನಪ್ರಿಯತೆ, ಆಡಳಿತ, ಜನರಿಗೆ ನೀಡಿದ ಗೌರವ, ವಿಷಗಳ ಕುರಿತ ವಿಚಾರ ಎಲ್ಲವೂ ಪ್ರಮುಖವಾಗಿತ್ತು. ಆದರೆ ಮೋದಿ ಮುಂದೆ ರಾಹುಲ್ ಗಾಂಧಿ ನಾಯಕತ್ವ ಕ್ಷೀಣಿಸಿತ್ತು ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಸ್ಥಳೀಯ ಹಾಗೂ ತಳಮಟ್ಟದ ಸಮಸ್ಯೆಗಳು, ಅಲ್ಲಿನ ಕಾರ್ಯಕರ್ತರ ಬೇಡಿಕೆಗಳನ್ನು ಆಲಿಸುವಲ್ಲಿ ರಾಹುಲ್ ಗಾಂಧಿ ವಿಫಲರಾಗಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.
ಈ ಬಾರಿ ಈ ಎರಡು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಭರವಸೆಯಲ್ಲಿತ್ತು. ಆದರೆ ಎಲ್ಲವೂ ಉಲ್ಟಾ ಆಗಿದೆ. ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪ್ರಮುಖವಾಗಿ ಬಿಜೆಪಿ ವಿರುದ್ದ ಸಂವಿಧಾನ ಅಸ್ತ್ರ ಬಳಸಿತ್ತು. ಮೋದಿ ಸರ್ಕಾರ ಸಂವಿಧಾನ ಬದಲಿಸಲಿದೆ ಎಂದು ಅಭಿಯಾನ ಆರಂಭಿಸಿತ್ತು. ಲೋಕಸಭೆಯಲ್ಲಿ ಕಾಂಗ್ರೆಸ್ ತಕ್ಕಮಟ್ಟಿಗೆ ಯಶಸ್ಸು ಕಂಡಿತ್ತು. ಆದರೆ ಇದೇ ಕಾರಣವೇ ಅನ್ನೋದು ಸ್ಪಷ್ಟವಿಲ್ಲ.
ಇತ್ತ ಹರ್ಯಾಣ ಹಾಗೂ ಮಹಾರಾಷ್ಟ್ರ ಚುನಾವಣೆಯಲ್ಲೂ ಸಂವಿಧಾನ ಅಸ್ತ್ರ ಪ್ರಯೋಗಿಸಿತ್ತು. ಆದರೆ ಇದು ಕಾಂಗ್ರೆಸ್ಗೆ ತೀವ್ರ ಹೊಡೆತ ನೀಡಿದೆ ಎಂದು ಅಲ್ಲಿನ ಜನತೆಯೇ ಅಭಿಪ್ರಾಯ ಪಟ್ಟಿದ್ದಾರೆ. ಸಂವಿಧಾನ ಬದಲಾವಣೆ, ರೈತರ ಪ್ರತಿಭಟನೆ, ಕುಸ್ತಿ ಪಟುಗಳ ಪ್ರತಿಭಟನೆ ಸೇರಿದಂತೆ ಕೆಲ ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮಾಡಿದ ತಂತ್ರಗಳು ಜನರ ಮುಂದೆ ಫಲಿಸಲಿಲ್ಲ. ಇದಕ್ಕೆ ಜನರು ಸೊಪ್ಪ ಹಾಕಲಿಲ್ಲ. ಈ ಆಂದೋಲನಗಳು ಜನರಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಮ್ಯಾಟ್ರಿಜ್ ಸಮೀಕ್ಷೆ ಹೇಳಿದೆ.












Click it and Unblock the Notifications