'ಆರೆಸ್ಸೆಸ್ ನಲ್ಲಿ ಚಡ್ಡಿ ಹಾಕಿಕೊಂಡ ಮಹಿಳೆಯನ್ನು ನೋಡಿದ್ದೀರಾ?'
Recommended Video

ಬರೋಡಾ, ಅಕ್ಟೋಬರ್ 10 : "ಆರೆಸ್ಸೆಸ್ ಬಿಜೆಪಿಯ ಪ್ರಮುಖ ಸಂಘಟನೆ. ಅದರಲ್ಲಿ ಎಷ್ಟು ಮಹಿಳೆಯರಿದ್ದಾರೆ? ಆರೆಸ್ಸೆಸ್ಸಿನ ಶಾಖೆಯಲ್ಲಿ ಖಾಕಿ ಚಡ್ಡಿಯಲ್ಲಿರುವ ಮಹಿಳೆಯನ್ನು ಎಂದಾದರೂ ನೋಡಿದ್ದೀರಾ? ನಾನಂತೂ ನೋಡಿಲ್ಲ!"
ಇದು ಕಾಂಗ್ರೆಸ್ ಅಧ್ಯಕ್ಷರಾಗಿ ದೀಪಾವಳಿಯ ನಂತರ ಅಧಿಕಾರ ಸ್ವೀಕರಿಸಲಿರುವ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಪ್ರಶ್ನಿಸಿರುವ, ಟೀಕಿಸಿರುವ ಪರಿ. ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಅವರು ಆರೆಸ್ಸೆಸ್ ಚಡ್ಡಿಗೇ ಕೈಹಾಕಿದ್ದಾರೆ.
ಪಕ್ಷವನ್ನು ಸಂಘಟಿಸಲು ದೇಶ ಸುತ್ತುತ್ತಿರುವ ರಾಹುಲ್ ಅವರು ಗುಜರಾತ್ ನಲ್ಲಿ ಎರಡು ದಿನಗಳ ಪ್ರವಾಸ ಮಾಡಿದ ಬಳಿಕ ಈಗ ಮಧ್ಯಪ್ರದೇಶದಲ್ಲಿ ಯುವಜನತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ಮೋದಿ ಮತ್ತು ಬಿಜೆಪಿ ಸರಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ.
ಭಾರತದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ನರೇಂದ್ರ ಮೋದಿ ಸಂಪೂರ್ಣವಾಗಿ ಸೋತಿದ್ದು, ಚೀನಾದವರಿಗೆ ಉದ್ಯೋಗ ಸಿಗುವಂತೆ ಮಾಡಿದ್ದಾರೆ ಎಂಬುದು ರಾಹುಲ್ ಅವರ ಆರೋಪ. ಹಣದುಬ್ಬರ ಹೇಗೆ ಕಡಿಮೆ ಮಾಡುತ್ತೀರಿ ಎಂದು ಶ್ರೋತೃಗಳು ಕೇಳಿದ ಪ್ರಶ್ನೆಗೆ ಕೂಡ ಅವರು ಸಮಂಜಸವಾಗಿ ಉತ್ತರಿಸಲು ಯತ್ನಿಸಿದ್ದಾರೆ.
ರಾಹುಲ್ ಗಾಂಧಿ ಅವರ ಮಾತಿನ ವೈಖರಿ ಕೆಳಗಿನಂತೆ ಇದೆ.

ದೇಶದ ಕಾವಲುಗಾರ ಏಕೆ ಸುಮ್ಮನಿದ್ದಾರೆ?
ಅಮಿತ್ ಶಾ ಅವರ ಮಗ ಜಯ್ ಶಾ ಅವರ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ವಾಗ್ದಾಳಿ ಮುಂದುವರಿಸಿರುವ ಅವರು, ದೇಶದ 'ಕಾವಲುಗಾರ' (ನರೇಂದ್ರ ಮೋದಿ) ಏಕೆ ಸುಮ್ಮನಿದ್ದಾರೆ? ಅವರಿಗೆ ಜಯ್ ಮೇಲೆ ಯಾವುದೇ ಕಾಮೆಂಟ್ ಮಾಡುವುದು ಇಷ್ಟವಿಲ್ಲ ಎಂದು ವ್ಯಂಗ್ಯವಾಡಿದರು.

ಮಹಿಳೆಯರ ಬಾಯಿ ಮುಚ್ಚಿಸಲಾಗುತ್ತಿದೆ
ಮಹಿಳೆಯರು ಸುಮ್ಮನಿರುವ ತನಕ, ಯಾವುದೇ ಮಾತನ್ನು ಆಡದಿರುವ ತನಕ ಬಿಜೆಪಿಗೆ ಎಲ್ಲವೂ ಸರಿ. ಆದರೆ, ಯಾವಾಗ ಮಹಿಳೆ (ಬಿಜೆಪಿ ವಿರುದ್ಧ) ಬಾಯಿ ತೆರೆಯುತ್ತಾಳೋ ಆ ಬಾಯಿಯನ್ನು ಶಾಶ್ವತವಾಗಿ ಮುಚ್ಚಿಸಲಾಗುತ್ತದೆ ಎಂದು ರಾಹುಲ್ ಅವರು, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಸ್ತಾಪ ಮಾಡದೆ ಮಾರ್ಮಿಕವಾಗಿ ನುಡಿದರು.

ಉದ್ಯೋಗ ಸೃಷ್ಟಿಯ ಬಗ್ಗೆ ಮೋದಿಗೆ ಗಮನವಿಲ್ಲ
ನಂತರ ಸೆಲ್ಫಿ ವಿಷಯವನ್ನು ಎತ್ತಿಕೊಂಡ ಅವರು, ನಿಮಗೆಲ್ಲ ಸೆಲ್ಫಿ ತೆಗೆದುಕೊಳ್ಳುವುದೆಂದರೆ ತುಂಬಾ ಇಷ್ಟ. ಆದರೆ, ಈ ಫೋನ್ ನಿಂದಾಗಿ ಭಾರತೀಯರಿಗಲ್ಲ ಚೀನಾದ ಯುವಕರಿಗೆ ಉದ್ಯೋಗ ದೊರೆಯುತ್ತದೆ. ಏಕೆಂದರೆ ಅದು ಮೇಡ್ ಇನ್ ಚೀನಾ ಆಗಿರುತ್ತದೆ. ಹೀಗೇಕೆ ಆಗುತ್ತಿದೆಯೆಂದರೆ, ಮೋದಿಯವರಿಗೆ ಉದ್ಯೋಗ ಸೃಷ್ಟಿಯ ಮೇಲೆ ಗಮನವೇ ಇಲ್ಲ ಎಂದು ವ್ಯಾಖ್ಯಾನಿಸಿದರು.

ಸ್ಟಾರ್ಟ್ ಅಪ್ ಇಂಡಿಯಾ ಬಗ್ಗೆ ಕೇಳಿದ್ದೀರಾ?
ನೀವು ಸ್ಟಾರ್ಟ್ ಅಪ್ ಇಂಡಿಯಾ ಬಗ್ಗೆ ಕೇಳಿದ್ದೀರಾ? ಹಾಗೆಯೆ ನೀವು ಐಕಾನ್ ಆಫ್ ಸ್ಟಾರ್ಟ್ ಅಪ್ ಇಂಡಿಯಾ (ಜಯ್ ಶಾ) ಬಗ್ಗೆ ಕೇಳಿದ್ದೀರಾ? ಎಂದು ಸಭಿಕರನ್ನು ಕೇಳುತ್ತಲೇ, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಮಿತ್ ಶಾ ಅವರ ಮಗನ ಬಗ್ಗೆ ಟೀಕಾಸ್ತ್ರ ಎಸೆದರು.

ರಾಹುಲ್ ವಿರುದ್ಧ ಬಿಜೆಪಿ ವಾಗ್ದಾಳಿ
ರಾಹುಲ್ ಗಾಂಧಿಯವರು ನರೇಂದ್ರ ಮೋದಿ ಮತ್ತು ಅಮಿತ್ ಶಾ ಮೇಲೆ ಅಪನಗದೀಕರಣ ಮತ್ತಿತರ ಸಂಗತಿಗಳ ಬಗ್ಗೆ ಮಾತಿನ ಬಾಂಬನ್ನು ಎಸೆಯುತ್ತಿರುವಾಗ, ರಾಹುಲ್ ಗಾಂಧಿ ಎಂಬ ಬಾಲಕ ದೊಡ್ಡವನಾಗುತ್ತಲೇ ಇಲ್ಲ, ಡಯಾಪರ್ ನಿಂದ ಹೊರಬರುತ್ತಲೇ ಇಲ್ಲದಿರುವುದು ನಿಜಕ್ಕೂ ದೌರ್ಭಾಗ್ಯ ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications