ಚಿದಂಬರಂ ಅರೆಸ್ಟ್: ಅಂದೇ ಶಪಥ ಮಾಡಿದ್ದ ಪ್ರಧಾನಿ ಮೋದಿ
Recommended Video
ನವದೆಹಲಿ, ಆ 22: ಬುಧವಾರದ ತಡರಾತ್ರಿಯ ಬೆಳವಣಿಗೆಯ ನಂತರ, ಮಾಜಿ ಕೇಂದ್ರ ಹಣಕಾಸು, ಗೃಹ ಸಚಿವ ಪಿ ಚಿದಂಬರಂ ಅವರನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
ಕಳೆದ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ, ಕಾಂಗ್ರೆಸ್ಸಿನ ಇದುವರೆಗಿನ ಭ್ರಷ್ಟಾಚಾರದ ವಿರುದ್ದ ವಾಗ್ದಾಳಿ ನಡೆಸಿದ್ದ ಮೋದಿ, ಚಿದಂಬರಂ ಅವರನ್ನೂ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದರು.
"ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ವ್ಯಕ್ತಿ ಕಾಂಗ್ರೆಸ್ಸಿನ ಚುನಾವಣಾ ಪ್ರಣಾಳಿಕೆಯ ಸಮಿತಿಯ ನೇತೃತ್ವವನ್ನು ವಹಿಸುತ್ತಿರುವ ಸುದ್ದಿ ನನಗೆ ಆಘಾತ ತಂದಿದೆ. ಜಾಮೀನು ಪಡೆಯುತ್ತಾ ಇವರ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಿದ್ದಾರೆ" ಎಂದು ಮೋದಿ,
ಚಿದಂಬರಂ ವಿರುದ್ದ ವಾಗ್ದಾಳಿ ನಡೆಸಿದ್ದರು.

ಇನ್ನೊಂದು ಸಾರ್ವಜನಿಕ ಸಭೆಯಲ್ಲಿ ಪರೋಕ್ಷವಾಗಿ ಚಿದಂಬರಂ ಅವರನ್ನು ಉಲ್ಲೇಖಿಸುತ್ತಾ, " ಇವರೆಲ್ಲಾ ಜಾಮೀನಿನ ಮೇಲೆ ಜಾಮೀನು ಪಡೆದುಕೊಂಡು ಓಡಾಡುತ್ತಿದ್ದಾರೆ. ಎಷ್ಟು ದಿನ ಹೀಗೆ ಓಡಾಡುತ್ತಿರುತ್ತಾರೆಂದು ನಾನೂ ನೋಡುತ್ತೇನೆ. ಇಂದಲ್ಲಾ, ನಾಳೆ ಇವರು ಜೈಲಿಗೆ ಹೋಗಲೇಬೇಕಾಗುತ್ತದೆ" ಎಂದು ಮೋದಿ ಗುಡುಗಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಚಿದಂಬರಂ, " ಮೋದಿಗೆ ಯಾರಾದರೂ ಸಾಮಾನ್ಯ ಕಾನೂನು ಪಾಠವನ್ನು ಕಲಿಸೊಕೊಡಬೇಕಾಗಿದೆ. ಸುಪ್ರೀಂಕೋರ್ಟ್ ಅತ್ಯಂತ ಸ್ಪಷ್ಟವಾಗಿ ಹೇಳಿದೆ. ಜಾಮೀನು ನಿಯಮ ಮತ್ತು ಜೈಲು ಅಪವಾದ ಎಂದು ಹೇಳಿದೆ" ಎಂದು ಮೋದಿಗೆ ತಿರುಗೇಟು ನೀಡಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಪಿ ಚಿದಂಬರಂ, ಕಾಂಗ್ರೆಸ್ಸಿನ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರಾಗಿದ್ದರು. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾಜಿ ಗೃಹಸಚಿವರೊಬ್ಬರು ಬಂಧನಕ್ಕೊಳಗಾಗುತ್ತಿದ್ದಾರೆ. ಇಲ್ಲಿಯವರೆಗೆ ಯಾವೊಬ್ಬ ಕೇಂದ್ರದ ಮಾಜಿ ಗೃಹ ಸಚಿವರನ್ನು ಪೊಲೀಸರು ಅಥವಾ ಸಿಬಿಐ ಬಂಧಿಸಿದ ಉದಾಹರಣೆ ಇಲ್ಲ.












Click it and Unblock the Notifications