ಇಬ್ಬರು ಶಾಸಕರು 'ಕೈ' ಕೊಟ್ಟರೂ ಅಹ್ಮದ್ ಪಟೇಲ್ ಗೆದ್ದಿದ್ದು ಹೇಗೆ?
ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ನ ಅಹ್ಮದ್ ಪಟೇಲ್. ಕಾಂಗ್ರೆಸ್ ಪಕ್ಷದ ಎರಡು ಮತಗಳ ಅಸಿಂಧುವಾಗಿದ್ದೇ ಕಾಂಗ್ರೆಸ್ ನಾಯಕನಿಗೆ ಆಯಿತು ಅನುಕೂಲ.
ಅಹ್ಮದಾಬಾದ್, ಆಗಸ್ಟ್ 9: ಅಂತೂ ಇಂತೂ, ಗುಜರಾತ್ ನ ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಅಹ್ಮದ್ ಪಟೇಲ್ ಅವರು ಅಗ್ನಿಪರೀಕ್ಷೆಯನ್ನು ಗೆದ್ದಿದ್ದಾರೆ. ಇದೊಂದು ರೀತಿ, ಐತಿಹಾಸಿಕ ಜಯ ಎಂದರೆ ತಪ್ಪೇನಿಲ್ಲ.
ಇಡೀ ದೇಶದ ಗಮನ ಸೆಳೆದಿದ್ದ ಈ ಚುನಾವಣೆಯು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಭಾರೀ ಪೈಪೋಟಿಗೆ ಕಾರಣವಾಗಿತ್ತು. ಕಾಂಗ್ರೆಸ್ ನ ಹಿರಿಯ ನಾಯಕರಾದ ಅಹ್ಮದ್ ಪಟೇಲ್ ಅವರನ್ನು ಸೋಲಿಸಲು ಬಿಜೆಪಿ ಮಾಡಿದ ಎಲ್ಲಾ ರಣತಂತ್ರಗಳು ವಿಫಲವಾಗಿ ಕೊನೆಯಲ್ಲಿ ಗೆಲುವಿನ ಮಾಲೆ ಈ ಹಿರಿಯ ನಾಯಕನ ಕೊರಳನ್ನೇ ಅಲಂಕರಿಸಿತು.
ಆದರೆ, ಇಲ್ಲೊಂದು ನಿಗೂಢತೆಯಿದೆ. ಗೆಲುವಿಗಾಗಿ ಅಹ್ಮದ್ ಪಟೇಲ್ ಅವರಿಗೆ ಬೇಕಿದ್ದು 45 ಮತ. ಪ್ರತಿಯೊಬ್ಬ ಅಭ್ಯರ್ಥಿಗೂ ಇಷ್ಟೇ ಮತಗಳು ಬೇಕಿತ್ತು. ಆದರೆ, ಬಿಜೆಪಿಯ ಕಡೆಗೆ ವಾಲಿದ ಕೆಲ ಕಾಂಗ್ರೆಸ್ ಶಾಸಕರು ಮತದಾನದ ಅರ್ಹತೆ ಕಳೆದುಕೊಂಡರು. ಹೈಕಮಾಂಡ್ ಗೆ ನಿಷ್ಠರಾಗಿದ್ದವರು ಒಟ್ಟು 44 ಕಾಂಗ್ರೆಸ್ ಶಾಸಕರು.
ಇಂಥ ಸಂದರ್ಭದಲ್ಲಿಯೂ, ಕಾಂಗ್ರೆಸ್ ನ 44 ಶಾಸಕರಲ್ಲಿ ಇಬ್ಬರು ಮತದಾನದ ವೇಳೆ ಅಡ್ಡಮತ ಚಲಾಯಿಸಿ ಕೊನೆ ಕ್ಷಣದಲ್ಲಿ ಅಹ್ಮದ್ ಪಟೇಲ್ ಗೆ ಕೈ ಕೊಟ್ಟರು. ಆದರೂ, ಅಹ್ಮದ್ ಪಟೇಲ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಹೇಗೆ, ಅದ್ಯಾವ ಚಮತ್ಕಾರ ಜರುಗಿತು ಎಂಬಿತ್ಯಾದಿ ಕುತೂಹಲಕಾರಿ ಮಾಹಿತಿ ಇಲ್ಲಿ ನಿಮಗಾಗಿ.

ಅಹ್ಮದ್ ಗೆ ಬೇಕಿದ್ದ ಮತಗಳೆಷ್ಟು?
ಈ ಬಾರಿಯ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಿದ ಶಾಸಕರ ಸಂಖ್ಯೆ 176. ಅಹ್ಮದ್ ಪಟೇಲ್ ಅವರು ಗೆಲುವಿಗಾಗಿ 45 ಮತಗಳು ಬೇಕಿತ್ತು.

ಗೆಲುವಿನ ಗುರಿ ಒಂಚೂರು ಹಿಂದಕ್ಕೆ!
ಈ ವೇಳೆ ಎರಡು ಮತಗಳನ್ನು (ಅಡ್ಡ ಮತ ಹಾಕಿದ್ದ ಇಬ್ಬರು ಕಾಂಗ್ರೆಸ್ಸಿಗರ ಮತಗಳು) ಚುನಾವಣಾ ಆಯೋಗ ಅಸಿಂಧುಗೊಳಿಸಿದೆ. ಹಾಗಾಗಿ, ಒಟ್ಟು ಮತದಾರರ ಸಂಖ್ಯೆ 174ಕ್ಕೆ ಇಳಿಯಿತು. ಆಗ, ಅಹ್ಮದ್ ಪಟೇಲ್ ಅವರಿಗೆ ಗೆಲುವಿಗಾಗಿ 44 ಮತಗಳು ಬೇಕಾದವು. ಸರಿಯಾಗಿ ಅಷ್ಟೇ ಮತಗಳನ್ನು ಅವರು ಪಡೆದಿದ್ದಾರೆ.

ಕಾಂಗ್ರೆಸ್ ನಲ್ಲಿ ನಡೆಯುತ್ತಿದೆ ವಿಶ್ಲೇಷಣೆ
ಕಾಂಗ್ರೆಸ್ ನ ಇಬ್ಬರು ಶಾಸಕರು ಅಡ್ಡಮತದಾನ ಹಾಕಿದ್ದರಿಂದಾಗಿ ಹಾಗೂ ಅವು ಅಸಿಂಧು ಎಂದು ಘೋಷಿಸಲ್ಪಟ್ಟಿದ್ದರಿಂದಾಗಿ ಗೆಲುವಿನ ಗುರಿ ಒಂದು ಮೆಟ್ಟಿಲು ಕಡಿಮೆಯಾಯಿತು. ಆಗ ಗೆಲುವಿಗಾಗಿ ಎಲ್ಲ ಅಭ್ಯರ್ಥಿಗಳಿಗೂ 44 ಮತಗಳು ಬೇಕಾದವು. ಆದರೆ, ಮತದಾನದ ವೇಳೆ ಕಾಂಗ್ರೆಸ್ ಪಾಳಯದ ಒಬ್ಬ ಶಾಸಕ (ಹೆಸರು ಗೊತ್ತಾಗಿಲ್ಲ) ಪಟೇಲ್ ವಿರುದ್ಧವೇ ಮತ ಚಲಾಯಿಸಿದ್ದಾರೆ. ಆದರೆ, ಅವರ ಗೆಲುವಿಗೆ ಬೇರೊಂದು ಪಕ್ಷದಿಂದ ಬಂದ ಒಂದು ಮತ ಕಾರಣವಾಗಿದೆ. ಆದರೆ, ಇದು ಯಾರೆಂದು ಇನ್ನೂ ಪಕ್ಕಾ ಆಗಿಲ್ಲ. ಈ ಬಗ್ಗೆ ಕಾಂಗ್ರೆಸ್ ನಲ್ಲಿ ವಿಶ್ಲೇಷಣೆ ನಡೆಯುತ್ತಿದೆ.

ಕೊನೆ ಕ್ಷಣದಲ್ಲಿ ಕೈ ಹಿಡಿದವೇ ಎನ್ ಸಿಪಿ ಅಥವಾ ಜೆಡಿಯು?
ಖುದ್ದು ಅಹ್ಮದ್ ಪಟೇಲ್ ಅವರ ಲೆಕ್ಕಾಚಾರದ ಪ್ರಕಾರ, ಜೆಡಿಯು ಪಕ್ಷದ ಛೋಟುಭಾಯಿ ವಾಸವಾ ಅಥವಾ ಎನ್ ಸಿಪಿಯ ಇಬ್ಬರು ಶಾಸಕರಲ್ಲಿ ಒಬ್ಬರು ತಮ್ಮ ಪರವಾಗಿ ಮತ ಹಾಕಿರಬಹುದು ಎನ್ನಲಾಗಿದೆ.












Click it and Unblock the Notifications