ಭಾರತ ಮತ್ತು ಪಾಕ್ ನಡುವಿನ ಯುದ್ಧಗಳ ಇತಿಹಾಸ
ನವದೆಹಲಿ, ಮೇ 24 : ಮತ್ತೊಂದು ಯುದ್ಧಕ್ಕೆ ಕಾಡತೂಸುಗಳನ್ನು ಸಿದ್ಧ ಮಾಡಿಕೊಳ್ಳುತ್ತಿವೆ ಭಾರತ ಮತ್ತು ಪಾಕಿಸ್ತಾನ. ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡಿರುವ ಪಾಕಿಸ್ತಾನ ಕಾಲು ಕೆದರಿಕೊಂಡು ಜಗಳಕ್ಕೆ ಬಂದಿರುವುದರಿಂದ ತಿರುಗೇಟು ನೀಡದೆ ಭಾರತಕ್ಕೆ ಬೇರೆ ದಾರಿಯಿಲ್ಲ.
ಭಾರತ ಪಾಕ್ ನಡುವಣ ಯುದ್ಧಭೂಮಿ ಸಿಯಿಚಿನ್ ನಲ್ಲಿ ಪಾಕಿಸ್ತಾನ ಯುದ್ಧ ವಿಮಾನಗಳು ಹಾರಾಟ ನಡೆಸಿವೆ. 'ಹಮ್ ಈಂಟ್ ಕಾ ಜವಾಬ್ ಪತ್ಥರ್ ಸೆ ದೇಂಗೆ' ಅಂತ ಭಾರತದ ಸೇನೆ ಜೆಟ್ ವಿಮಾನಗಳನ್ನು, ಶಸ್ತ್ರಾಸ್ತ್ರಗಳನ್ನು ರೆಡಿ ಮಾಡಿಕೊಳ್ಳುತ್ತಿದೆ. ವಿಜಯದಶಮಿ ಇನ್ನೂ ದೂರವಿರುವಾಗಲೇ ವಿರೋಧಿಗಳ ಸಂಹಾರಕ್ಕೆ ಅಣಿಯಾಗಿದೆ.[ಯುದ್ಧಕ್ಕೆ ಸನ್ನದ್ಧವಾಯಿತೆ ಪಾಕಿಸ್ತಾನ, ವಾಯುಸೇನೆಯಲ್ಲಿ ಭಾರೀ ಚಟುವಟಿಕೆ]
ಈಗ ಒಂದು ವೇಳೆ ಯುದ್ಧ ನಡೆದದ್ದೇ ಆದಲ್ಲಿ ಇದು ಎರಡೂ ದೇಶಗಳ ನಡುವಿನ ಐದನೇ ಯುದ್ಧವಾಗಲಿದೆ. ಈಗಾಗಲೆ ನಾಲ್ಕು ಯುದ್ಧಗಳು ನಡೆದು, ಭಾರತ ಎಲ್ಲದರಲ್ಲೂ ಮೇಲುಗೈ ಸಾಧಿಸಿದೆ. 1971ರಲ್ಲಿ ನಡೆದ ಯುದ್ಧವನ್ನು ಹೊರತುಪಡಿಸಿದರೆ ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆದದ್ದು ಸುಂದರ ಕಾಶ್ಮೀರಕ್ಕಾಗಿ.
ಭಾರತಕ್ಕೆ ಯುದ್ಧ ಬೇಕಾಗಿಲ್ಲ. ಆದರೆ, ಕಾಲು ಕೆದರಿಕೊಂಡು ಬಂದರೆ ಬಿಡುವುದಿಲ್ಲ. ಇದಕ್ಕೆ ಚೀನಾದ ಕುಮ್ಮಕ್ಕು ಇದೆಯಾ ಗೊತ್ತಿಲ್ಲ. ಅಮೆರಿಕದ ಬೆಂಬಲವೂ ಸಿಗಲಿಕ್ಕಿಲ್ಲ. ಕಾರ್ಗಿಲ್ ಯುದ್ಧ ನಡೆದಾಗ ನವಾಜ್ ಷರೀಫ್ ಪ್ರಧಾನಿಯಾಗಿದ್ದರು, ಈಗಲೇ ಅವರೇ ಪಾಕ್ ಪ್ರಧಾನಿ. ಇಲ್ಲಿ ಆ ನಾಲ್ಕು ಯುದ್ಧಗಳ ಬಗ್ಗೆ ಪುಟ್ಟ ಮಾಹಿತಿಯಿದೆ. [ಪಾಕಿಸ್ತಾನದ ಸೇನಾ ನೆಲೆ ಧ್ವಂಸಗೊಳಿಸಿದ 6 ಅಸ್ತ್ರಗಳು]

1947ರ ಇಂಡೋ-ಪಾಕ್ ಯುದ್ಧ
ಭಾರತ ಪಾಕ್ ವಿಭಜನೆಯ ನಂತರ ಕಾಶ್ಮೀರಕ್ಕಾಗಿ ನಡೆದ ಮೊದಲ ಯುದ್ಧವಿದು. ಅಂದಿನ ಜಮ್ಮು ಮತ್ತು ಕಾಶ್ಮೀರದ ಮಹಾರಾಜಾ ಹರಿ ಸಿಂಗ್ ಭಾರತಕ್ಕೆ ಬೆಂಬಲ ನೀಡುತ್ತಾರೆ ಎಂದು ಪಾಕ್ ಬೆದರಿತ್ತು. ಪಾಕಿಸ್ತಾನದ ಮಿಲಿಟರ್ ಬೆಂಬಲದಿಂದ ಗುಡ್ಡಗಾಡು ಪಂಗಡ ದಾಳಿ ನಡೆಸಿ ಕಾಶ್ಮೀರದ ಒಂದು ಭಾಗವನ್ನು ಆಕ್ರಮಿಸಿಕೊಂಡಿತು. ಆಗ ವಿಧಿಯಿಲ್ಲದೆ ಮಹಾರಾಜಾ ಒಪ್ಪಂದಕ್ಕೆ ಸಹಿ ಹಾಕಲೇಬೇಕಾಯಿತು. 1948ರ ಏಪ್ರಿಲ್ 22ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗಡಿ ನಿಯಂತ್ರಣಾ ರೇಖೆಯನ್ನು ನಿಗದಿಪಡಿಸಿತು. ಭಾರತದ ಕಾಶ್ಮೀರದ ಎರಡನೇ ಮೂರರಷ್ಟು ಆಕ್ರಮಿಸಿಕೊಂಡಿದ್ದರೆ, ಪಾಕಿಸ್ತಾನ ಮೂರರಲ್ಲಿ ಒಂದು ಭಾಗವನ್ನು ಆಕ್ರಮಿಸಿಕೊಂಡಿದೆ.

1965ರ ಭಾರತ-ಪಾಕಿಸ್ತಾನ ಯುದ್ಧ
ಜಮ್ಮು ಮತ್ತು ಕಾಶ್ಮೀರದೊಳಗೆ ಉಗ್ರರನ್ನು ನುಸುಳಿಸಲು ಪಾಕಿಸ್ತಾನ ಆರಂಭಿಸಿದ 'ಆಪರೇಷನ್ ಜಿಬ್ರಾಲ್ಟರ್' ಪರಿಣಾಮವಾಗಿ ಭಾರತ ಪೂರ್ಣಪ್ರಮಾಣದ ಯುದ್ಧವನ್ನು ಸಾರಬೇಕಾಯಿತು. ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗ ಸತತ 17 ದಿನಗಳ ಕಾಲ ಎರಡೂ ಸೇನೆಗಳು ನಡುವೆ ತುರುಸಿನ ಯುದ್ಧ ನಡೆಯಿತು, ಸಾವಿರಾರು ಯೋಧರು ಪ್ರಾಣ ಕಳೆದುಕೊಂಡರು. ಎರಡನೇ ವಿಶ್ವ ಯುದ್ಧದ ನಂತರ ಅತೀ ಹೆಚ್ಚು ಯುದ್ಧ ವಾಹನ, ಟ್ಯಾಂಕ್ ಗಳನ್ನು ಬಳಸಿದ್ದು ಇದೇ ಯುದ್ಧದಲ್ಲಿ. ಸೋವಿಯತ್ ರಷ್ಯಾ ಮತ್ತು ಅಮೆರಿಕ ಮಧ್ಯ ಪ್ರವೇಶಿಸಿ, ತಾಷ್ಕೆಂಟ್ ಒಪ್ಪಂದವಾದ ನಂತರ ಕದನವಿರಾಮ ಘೋಷಿಸಲಾಯಿತು. ಈ ಯುದ್ಧದಲ್ಲಿ ಎರಡೂ ರಾಷ್ಟ್ರಗಳು ತಾವೇ ಗೆದ್ದೆವೆಂದು ಸಂಭ್ರಮಿಸಿದವು.[ಪಾಕಿಸ್ತಾನದ ಸೇನಾ ನೆಲೆ ಧ್ವಂಸಗೊಳಿಸಿದ 6 ಅಸ್ತ್ರಗಳು]

ಬಾಂಗ್ಲಾದೇಶಕ್ಕಾಗಿ ನಡೆದ 1971ರ ಯುದ್ಧ
ಈ ಯುದ್ಧ ಕಾಶ್ಮೀರಕ್ಕಾಗಿ ನಡೆಯದಿದ್ದುದು ವಿಶೇಷ. ಆದರೆ, ಅಂದಿನ ಈಸ್ಟ್ ಪಾಕಿಸ್ತಾನ ಮತ್ತು ವೆಸ್ಟ್ ಪಾಕಿಸ್ತಾನದ ರಾಜಕೀಯ ನಾಯಕರ ನಡುವೆ ಉದ್ಭವಿಸಿದ್ದ ಸಂಘರ್ಷದಿಂದ ಯುದ್ಧ ನಡೆಯಬೇಕಾಯಿತು. ಬಾಂಗ್ಲಾದೇಶ ಸ್ವತಂತ್ರವಾದ ನಂತರ ಪಾಕಿಗಳ ಕಿರುಕುಳ ತಾಳಲಾರದೆ ಹಲವಾರು ಬಾಂಗ್ಲಾದೇಶಿಯರು ಭಾರತದಲ್ಲಿ ಆಶ್ರಯ ಪಡೆದರು. ಬಾಂಗ್ಲಾದೇಶವನ್ನು ಸ್ವತಂತ್ರ ಮಾಡುವಲ್ಲಿ ಭಾರತವೂ ಮಧ್ಯಸ್ಥಿಕೆ ವಹಿಸಿತ್ತು. ಇದನ್ನು ವಿರೋಧಿಸಿ ಪಾಕ್ ಭಾರತದ ಮೇಲೆ ದಾಳಿ ಮಾಡಿದ್ದರಿಂದ ಯುದ್ಧ ಆರಂಭವಾಯಿತು. ಪಾಕಿಸ್ತಾನದಲ್ಲಿರುವ ಕಾಶ್ಮೀರ, ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯವನ್ನು ಭಾರತ ಕಬಳಿಸಿತ್ತು. ಎರಡು ವಾರ ನಡೆದ ಈ ಯುದ್ಧದಲ್ಲಿ 90 ಸಾವಿರಕ್ಕೂ ಹೆಚ್ಚು ಯೋಧರು, ನಾಗರಿಕರು ಶರಣಾಗತರಾದರು. ಪಾಕಿಸ್ತಾನ ತನ್ನ ಅರ್ಧದಷ್ಟು ನೌಕಾದಳ, ಕಾಲು ಭಾಗದಷ್ಟು ವಾಯುಸೇನೆ, ಮತ್ತು ಮೂರನೇ ಒಂದರಷ್ಟು ಭೂಸೇನೆಯನ್ನು ಕಳೆದುಕೊಂಡಿತು.

1999ರ ಕಾರ್ಗಿಲ್ ಯುದ್ಧ
ಗಡಿ ನಿಯಂತ್ರಣಾ ರೇಖೆಯನ್ನು ದಾಳಿ ಭಾರತದಲ್ಲಿನ ಕಾರ್ಗಿಲ್ ಜಿಲ್ಲೆಯಲ್ಲಿ ಪಾಕಿಸ್ತಾನ ಯೋಧರು ನುಸುಳಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಭಾರತ ಭಾರೀ ಪ್ರಮಾಣದಲ್ಲಿ ಯುದ್ಧ ಸಾರಿತು. ಎರಡು ತಿಂಗಳು ಭೀಕರ ಕದನ ನಡೆದು, ಶೇ.80ರಷ್ಟು ಪ್ರದೇಶವನ್ನು ಭಾರತ ತನ್ನ ಸುಪರ್ದಿಗೆ ತೆಗೆದುಕೊಂಡ ನಂತರ, ಪಾಕ್ ಸೇನೆಯಲ್ಲಿ ಭುಗಿಲೆದ್ದ ಆಂತರಿಕ ಭಿನ್ನಮತ, ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಪಾಕಿಸ್ತಾನ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲಾಯಿತು. ಪಾಕಿಸ್ತಾನದ ಆರ್ಥಿಕ ಸ್ಥಿತಿ ತೀರಾ ಕುಸಿದುಹೋಗಿತ್ತು. ಸತ್ತ ಪಾಕಿಸ್ತಾನದ ಯೋಧರ ಹೆಣವನ್ನು ಸ್ವೀಕರಿಸಲು ಪಾಕ್ ನಿರಾಕರಿಸಿತು. ಕೊನೆಗೂ 1999ರ ಜುಲೈ 26ರಂದು ಭಾರತ ಜಯಶಾಲಿ ಎಂದು ಘೋಷಿಸಲಾಯಿತು. ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಸೋಲನ್ನು ಒಪ್ಪಿಕೊಂಡರು.[ತೇಜ್ ಪುರ್ ಬಳಿ ಸುಖೋಯ್ 30 ಯುದ್ಧ ವಿಮಾನ ನಾಪತ್ತೆ]












Click it and Unblock the Notifications