ಗ್ವಾಲಿಯರ್ ನಲ್ಲಿ ಗಾಂಧೀಜಿ ಕೊಂದವನ ದೇಗುಲಕ್ಕೆ ಅಡಿಪಾಯ
ಗ್ವಾಲಿಯರ್ (ಮಧ್ಯಪ್ರದೇಶ), ನವೆಂಬರ್ 16: ಮಹಾತ್ಮಾ ಗಾಂಧಿ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ದೇಗುಲಕ್ಕೆ ಗ್ವಾಲಿಯರ್ ನಲ್ಲಿ ಅಡಿಪಾಯ ಹಾಕಲಾಗಿದೆ. ಅಖಿಲ ಭಾರತೀಯ ಹಿಂದೂ ಮಹಾಸಭಾದ ಸದಸ್ಯರು, ನಾಥುರಾಮ್ ಗೋಡ್ಸೆಯ ಪ್ರತಿಮೆಯ ಪ್ರತಿಕೃತಿಯನ್ನು ಬುಧವಾರದಂದು ಅನಾವರಣ ಮಾಡಿದರು.
'ಮಹಾತ್ಮಾ ಗಾಂಧೀಜಿಯಂತೆ ಗೋಡ್ಸೆ ಕೂಡಾ ದೇಶಭಕ್ತ'
ನಾಥೂರಾಮ್ ಗೋಡ್ಸೆ ಗಲ್ಲಿಗೇರಿಸಿದ ದಿನದ ನೆನಪಿನಲ್ಲಿ ಪ್ರತಿಮೆ ಸ್ಥಾಪನೆ ಮಾಡಲಾಗಿದೆ, ದೇಗುಲ ನಿರ್ಮಾಣ ಮಾಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಆದರೆ, ಜಿಲ್ಲಾಡಳಿತದಿಂದ ಅನುಮತಿ ಸಿಕ್ಕಿರಲಿಲ್ಲ. ಹೀಗಾಗಿ,ಸದ್ಯಕ್ಕೆ ಕಚೇರಿಯಲ್ಲೇ ಪ್ರತಿಮೆ ಸ್ಥಾಪಿಸಲಾಗಿದೆ. ಕಚೇರಿಯಲ್ಲಿ ಗೋಡ್ಸೆ ಮರಣ ವಾರ್ಷಿಕೋತ್ಸವ ಕಾರ್ಯಕ್ರಮ ಸಮಾರಂಭದಲ್ಲಿ ಗೋಡ್ಸೆ ಗುಣಗಾನ ಮಾಡಲಾಯಿತು.
ಗೋಡ್ಸೆ ಸಂಸ್ಮರಣಾ ದಿನಾಚರಣೆ, ಗೋಡ್ಸೆ ದೇಗುಲ, ಗೋಡ್ಸೆ ಪುಸ್ತಕಕ್ಕೆ ಬೇಡಿಕೆ ನಂತರ ಈಗ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ನಾಥುರಾಂ ಗೋಡ್ಸೆ ಪ್ರತಿಮೆ ಸ್ಥಾಪನೆಗೆ ಹಿಂದೂ ಪರ ಸಂಘಟನೆಗಳು ಮುಂದಾಗಿವೆ.
ಕರ್ನಾಟಕ ಸೇರಿ ದೇಶದೆಲ್ಲೆಡೆ ಗೋಡ್ಸೆ ಪ್ರತಿಮೆ ಸ್ಥಾಪನೆ!
ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆಯ ಸಿದ್ಧೌಲಿ ಗ್ರಾಮದಲ್ಲಿ ಅಖಿಲ ಭಾರತೀಯ ಹಿಂದೂ ಮಹಾಸಭಾ ನಾಥೂರಾಮ್ ಗೋಡ್ಸೆ ದೇವಸ್ಥಾನವನ್ನು ನಿರ್ಮಾಣ ಮಾಡಲು ಮುಂದಾಗಿತ್ತು. ಬೆಂಗಳೂರು, ಚಿತ್ರದುರ್ಗ ಮತ್ತು ಬಳ್ಳಾರಿಯಲ್ಲಿ ಗೋಡ್ಸೆ ಪ್ರತಿಮೆ ಸ್ಥಾಪನೆ ಮಾಡುವುದಾಗಿ ಪ್ರಣಾವಾನಂದ ಸ್ವಾಮೀಜಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಜನವರಿ 30, 1948ರಲ್ಲಿ ಗಾಂಧೀಜಿಗೆ ಗುಂಡು ಹಾರಿಸಿದ್ದ ನಾಥುರಾಮ್ ವಿನಾಯಕ್ ಗೋಡ್ಸೆಯನ್ನು ನವೆಂಬರ್ 15, 1949ರಂದು ಗಲ್ಲಿಗೇರಿಸಲಾಯಿತು.