ಹಿಮಾಚಲ ಪ್ರದೇಶ: ಕಾಂಗ್ರೆಸ್ ರಾಜಾ-ರಾಣಿಯರ ಪಕ್ಷ ಎಂದ ಅಮಿತ್ ಶಾ
ಶಿಮ್ಲಾ, ನ. 02: ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಆರಂಭವಾಗಿದ್ದು, ಬಿಜೆಪಿಯ ಘಟಾನುಘಟಿ ನಾಯಕರು ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಕಾಂಗ್ರೆಸ್ 'ರಾಜಾ ಮತ್ತು ರಾಣಿಯರ' ಪಕ್ಷವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ವಾಗ್ದಾಳಿ ನಡೆಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12ರಂದು ಚುನಾವಣೆ ನಡೆಯಲಿದ್ದು, ನಾದೌನ್ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್ ಸ್ವಜನಪಕ್ಷಪಾತವನ್ನು ಅನುಸರಿಸುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಅನೇಕ ಮುಖ್ಯಮಂತ್ರಿ ಆಕಾಂಕ್ಷಿಗಳು ಕಣದಲ್ಲಿದ್ದರೂ ಯಾರಿಗೂ ಅವಕಾಶ ಸಿಗುವುದಿಲ್ಲ ಎಂದು ಆರೋಪಿಸಿದ್ದಾರೆ.
ನಾದೌನ್ನ ಬಿಜೆಪಿ ಅಭ್ಯರ್ಥಿ ವಿಜಯ್ ಅಗ್ನಿಹೋತ್ರಿ ಪರ ಪ್ರಚಾರ ನಡೆಸುತ್ತಿರುವ ಅಮಿತ್ ಶಾ, ಹಿಮಾಚಲ ಪ್ರದೇಶ ದೇಶದ ನಂಬರ್ ಒನ್ ರಾಜ್ಯವಾಗಲು ಬಿಜೆಪಿಯನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕು ಎಂದರು. ಜೊತೆಗೆ ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ಡ್ರಗ್ಸ್ ಮುಕ್ತವನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ಸಾಮಾನ್ಯರಿಗಿಲ್ಲ!
"ಕಾಂಗ್ರೆಸ್ಗೆ ಅಭಿವೃದ್ಧಿಯ ಹೆಸರಿನಲ್ಲಿ ಹೇಳಲು ಏನೂ ಇಲ್ಲ, ಹಿಮಾಚಲದಲ್ಲಿ ಕೆಲವು ಸ್ಥಾನಗಳನ್ನು ಗೆಲ್ಲಲು ಅದು ಎಂಟರಿಂದ 10 ಸ್ಥಾನಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಘೋಷಿಸಿದೆ. ನಾದೌನ್ನಲ್ಲಿಯೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಇದ್ದಾರೆ. ಆದರೆ ಅವರು ಸಿಎಂ ಆಗುವುದಿಲ್ಲ ಎಂದು ಅವರಿಗೆ ತಿಳಿದಿಲ್ಲ. ಕಾಂಗ್ರೆಸ್ನಲ್ಲಿ ಸಿಎಂ, ಮುಖ್ಯಮಂತ್ರಿಯಾಗಲು ಯಾರೊಬ್ಬರ ಮಗ ಅಥವಾ ಮಗಳಾಗಿರಬೇಕು. ಹೀಗಾಗಿ ನಿಮ್ಮಗೆ ಅವಕಾಶ ಎಂದಿಗೂ ಬರುವುದಿಲ್ಲ" ಎಂದು ಆರೋಪಿಸಿದ್ದಾರೆ.
|
ಕಾಂಗ್ರೆಸ್ ರಾಜಾ, ರಾಣಿಯರ ಪಕ್ಷ: ಅಮಿತ್ ಶಾ
"ಕಾಂಗ್ರೆಸ್ ರಾಜರು ಮತ್ತು ರಾಣಿಯರ ಪಕ್ಷವಾಗಿದ್ದು, ಯಾರಿಗೂ ಅವಕಾಶ ಸಿಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ರಾಜ-ರಾಣಿಯರಿಗೆ ಸ್ಥಾನವಿದೆಯೇ?. ಇಲ್ಲಿ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವವರಿಗೆ ಮಾತ್ರ ಸ್ಥಾನವಿದೆ. ಹೀಗಾಗಿ ನಾವು ಇಲ್ಲಿ ಒಬ್ಬರನ್ನು ಅಭ್ಯರ್ಥಿ ಮಾಡಿದ್ದೇವೆ. ಅವರು ಶಾಸಕರಾಗಿರದಿದ್ದರೂ ನಿಮ್ಮ ಸೇವೆಯನ್ನು ಮುಂದುವರಿಸಿದ್ದಾರೆ" ಎಂದು ಅಮಿತ್ ಶಾ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ದೇಶದ ಭದ್ರತೆಗಾಗಿ ತಮ್ಮ ಮಕ್ಕಳನ್ನು ಸಶಸ್ತ್ರ ಪಡೆಗಳಿಗೆ ಕಳುಹಿಸಿದ ಧೈರ್ಯಶಾಲಿ ತಾಯಂದಿರಿಗೆ ಅಮಿತ್ ಶಾ ಗೌರವ ಸಲ್ಲಿಸಿದ್ದಾರೆ

‘ಒಂದು ಶ್ರೇಣಿ, ಒಂದು ಪಿಂಚಣಿ’ ಜಾರಿ ಮಾಡದ ಕಾಂಗ್ರೆಸ್
40 ವರ್ಷಗಳಿಂದ 'ಒಂದು ಶ್ರೇಣಿ, ಒಂದು ಪಿಂಚಣಿ' ಎಂದು ಆಗ್ರಹಿಸುತ್ತಿದ್ದರೂ ಕಿವುಡ ಕಾಂಗ್ರೆಸ್ಗೆ ಜನರ ಧ್ವನಿಯೇ ಕೇಳಿಸಲಿಲ್ಲ. 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿಜಿ 2015ರಲ್ಲಿ 40,000 ಕೋಟಿ ರೂಪಾಯಿ ವೆಚ್ಚದ 'ಒಂದು ಶ್ರೇಣಿ, ಒಂದು ಪಿಂಚಣಿ' ಯೋಜನೆ ಜಾರಿಗೆ ತಂದರು" ಎಂದು ಅಮಿತ್ ಶಾ ಹೇಳಿದ್ದಾರೆ.
60 ವರ್ಷಗಳ ಕಾಲ ಆಡಳಿತ ನಡೆಸಿದರೂ 'ಒಂದು ಶ್ರೇಣಿ, ಒಂದು ಪಿಂಚಣಿ'ಯನ್ನು ಏಕೆ ಜಾರಿ ಮಾಡಲಿಲ್ಲ ಎಂಬುದಕ್ಕೆ ಕಾಂಗ್ರೆಸ್ನಿಂದ ಉತ್ತರ ಕೇಳಬೇಕು ಎಂದು ಜನರನ್ನು ಒತ್ತಾಯಿಸಿದ್ದಾರೆ.
370 ನೇ ವಿಧಿಯ ಕುರಿತು ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್ 60 ವರ್ಷಗಳ ಕಾಲ ಆಡಳಿತ ನಡೆಸಿತು. "ಜವಾಹರಲಾಲ್ ನೆಹರು ಅವರ ಉಡುಗೊರೆಯನ್ನು ವರ್ಷಗಳ ಕಾಲ ಮಗುವಿನಂತೆ ಮುದ್ದಿಸುತ್ತಿತ್ತು. ಹೀಗಾಗಿ ನಮ್ಮ ಕಾಶ್ಮೀರವು ಭಾರತದೊಂದಿಗೆ ತನ್ನ ಬಾಂಧವ್ಯವನ್ನು ಬೆಸೆಯಲು ವಿಫಲವಾಗಿದೆ" ಎಂದು ಆರೋಪಿಸಿದ್ದಾರೆ.

ಭಯೋತ್ಪಾದನೆ ಬಗ್ಗೆ ನಿಷ್ಕ್ರಿಯತೆ ತೋರಿದ ಕಾಂಗ್ರೆಸ್
ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಬಗ್ಗೆ ಕಾಂಗ್ರೆಸ್ ನಿಷ್ಕ್ರಿಯತೆ ತೋರಿಸಿದೆ ಎಂದು ಆರೋಪಿಸಿದ್ದಾರೆ." 10 ವರ್ಷಗಳ ಕಾಲ ಸೋನಿಯಾ-ಮನಮೋಹನ್ ಸರ್ಕಾರದ ಅವಧಿಯಲ್ಲಿ ಭಯೋತ್ಪಾದಕರು ಭಾರತಕ್ಕೆ ನುಗ್ಗಿ ನಮ್ಮ ಯೋಧರನ್ನು ಕೊಂದರು. ಆದರೆ ಕಾಂಗ್ರೆಸ್ಗೆ ಏನನ್ನೂ ಹೇಳುವ ಧೈರ್ಯ ಇರಲಿಲ್ಲ. ಮೋದಿ ಸರ್ಕಾರ ಬಂದಾಗ ಪಾಕಿಸ್ತಾನದ ಇಂತಹ ಪ್ರಯತ್ನಗಳಿಗೆ ಸರ್ಜಿಕಲ್ ದಾಳಿಯ ರೂಪದಲ್ಲಿ ತಕ್ಕ ಉತ್ತರವನ್ನು ನೀಡಿದರು" ಎಂದು ಹೇಳಿದ್ದಾರೆ.
60 ವರ್ಷಗಳ ಕಾಲ ದೇಶವನ್ನು ಆಳಿದ ಪಕ್ಷವು ಈಗ ಹಿಮಾಚಲ ಪ್ರದೇಶದ ಜನರಿಗೆ ಭರವಸೆಗಳನ್ನು ನೀಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications