Weather Forecast: ಈ ಭಾಗಗಳಲ್ಲಿ ಡಿಸೆಂಬರ್ 30ರ ವರೆಗೆ ಭಾರೀ ಮಳೆ ಮುನ್ಸೂಚನೆ
Weather Forecast: ಭೀಕರ ಚಳಿಯ ನಡುವೆಯೂ ದೇಶದ ಹಲವೆಡೆ ಮಳೆ ಮುಂದುವರೆದಿದೆ. ಹಾಗೆಯೇ ಡಿಸೆಂಬರ್ 30ರ ವರೆಗೆ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಮಳೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಶುಕ್ರವಾರದಂದು ಉತ್ತರ ಭಾರತದಾದ್ಯಂತ ನವದೆಹಲಿ, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದಲ್ಲಿ ವ್ಯಾಪಕವಾಗಿ ಮಳೆಯಾಗಿದೆ. ಇನ್ನು ಕಾಶ್ಮೀರದಲ್ಲಿ ದಟ್ಟ ಮಂಜು ಕವಿದ ವಾತಾವರಣದ ನಡುವೆಯೇ ಇಲ್ಲಿನ ಹಲವು ಭಾಗಗಳಲ್ಲಿ ಮಳೆಯಾಗಿದೆ. ಅಲ್ಲದೆ, ಕನಿಷ್ಠ ತಾಪಮಾನದಲ್ಲಿ ಸ್ವಲ್ಪ ಏರಿಕೆಯಾಗಿದೆ. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಸೆಂಬರ್ 30ರ ವರೆಗೆ ಹಿಮದ ಜೊತೆಗೆ ಪ್ರತ್ಯೇಕವಾಗಿ ಅಲ್ಲಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು (ಡಿಸೆಂಬರ್ 28) ಬೆಳಗ್ಗೆ ರಾಷ್ಟ್ರ ರಾಜಧಾನಿ ನವದೆಹಲಿಯ ಕೆಲವು ಭಾಗಗಳಲ್ಲಿ ಎಡಬಿಡದೆ ಮಳೆ ಸುರಿಯಿತು. ಇನ್ನು ರಾಷ್ಟ್ರ ರಾಜಧಾನಿಯು 15 ವರ್ಷಗಳಲ್ಲಿ ಈ ಡಿಸೆಂಬರ್ನಲ್ಲಿ ಅತ್ಯಧಿಕ ಮಳೆಯನ್ನು ದಾಖಲಿಸಿದೆ. ಇಂದು ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಭೀಕರ ಚಳಿ ನಡುವೆಯೂ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಚಂಡೀಗಢದಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ.
ಭಾರೀ ಮಳೆ ಮುನ್ಸೂಚನೆ: ಶುಕ್ರವಾರ & ಶನಿವಾರದಂದು ದೆಹಲಿಯಲ್ಲಿ ನಿರಂತರ ಮಳೆ ಮುಂದುವರೆದಿದೆ. ಪರಿಣಾಮ ಇಲ್ಲಿನ ಮಳೆಯು ವಾಯುಮಾಲಿನ್ಯವು ತಾತ್ಕಾಲಿಕವಾಗಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾದಂತಾಗಿದೆ. ಇನ್ನು ಶುಕ್ರವಾರ ಸುರಿದ ಬಿರುಗಾಳಿ ಮಳೆಗೆ ನವದೆಹಲಿಯ ಹಲವೆಡೆ ಮರಗಳು ನೆಲಕ್ಕುರುಳಿವೆ ಮತ್ತು ಕೆಲವು ರಸ್ತೆಗಳು ಚರಂಡಿಯಂತೆ ಮಾರ್ಪಟ್ಟ ಘಟನೆಗಳು ನಡೆದವು.
ಇಂದು (ಡಿಸೆಂಬರ್ 28) ನವದೆಹಲಿಯ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಾಲಂ, ಸಫ್ದರ್ಜಂಗ್, ಐಜಿಐ ವಿಮಾನ ನಿಲ್ದಾಣ , ಮೆಹ್ರೌಲಿ, ಗುರುಗ್ರಾಮ್ ಮತ್ತು ಫರಿದಾಬಾದ್ನಂತಹ ಪ್ರದೇಶಗಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಶನಿವಾರ (ಡಿಸೆಂಬರ್ 28) ನವದೆಹಲಿಯಲ್ಲಿ ತಾಪಮಾನವು 12°Cನಿಂದ 19°Cರ ವರೆಗೆ ದಾಖಲಾಗುವ ಸಾಧ್ಯತೆಯಿದೆ. ಮತ್ತೊಂದೆಡೆ ನವದೆಹಲಿ 15 ವರ್ಷಗಳಲ್ಲಿ ಈ ಡಿಸೆಂಬರ್ನಲ್ಲಿ ಅತ್ಯಧಿಕ ಮಳೆಯನ್ನು ದಾಖಲಿಸಿದೆ. ಅಲ್ಲದೆ, ಗಾಳಿಯ ಗುಣಮಟ್ಟ ಕೂಡ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಿದೆ ಎಂದು ತಿಳಿದುಬಂದಿದೆ.
ಇನ್ನು ಇಂದು ಹಿಮಾಚಲ ಪ್ರದೇಶದಲ್ಲಿ ಹಿಮದ ಜೊತೆ ಚಳಿಯ ಪ್ರಮಾಣ ಹೆಚ್ಚಾಗುವ ಹಿನ್ನೆಲೆ ಇಲ್ಲಿನ ಕೆಲವು ಭಾಗಗಳಲ್ಲಿ ಆರೆಂಜ್ ಅಲರ್ಟ್ ಘೋಷಷಿಸಿದೆ. ಲಾಹೌಲ್-ಸ್ಪಿತಿ, ಚಂಬಾ, ಕಂಗ್ರಾ, ಕುಲು, ಶಿಮ್ಲಾ ಮತ್ತು ಕಿನ್ನೌರ್ನಲ್ಲಿ ದಟ್ಟ ಮಂಜಿನ ಜೊತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಡಿಸೆಂಬರ್ 29ರಿಂದ ಜನವರಿ 1ರ ವರೆಗೆ ಬಿಲಾಸ್ಪುರ್, ಹಮೀರ್ಪುರ್ ಮತ್ತು ಉನಾದಂತಹ ಪ್ರದೇಶಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಜನವರಿ 1ರಂದು ಮಂಡಿ, ಚಂಬಾ ಜಿಲ್ಲೆಗಳಲ್ಲಿ ಇದೇ ವಾತಾವರಣ ಇರಲಿದ್ದು, ಮಂಜಿನ ಪ್ರಮಾಣ ಕಡಿಮೆಯಾಗಲಿದೆ ಎಂದು ತಿಳಿಸಿದೆ. ಶುಕ್ರವಾರ ಶಿಮ್ಲಾದಲ್ಲಿ 5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇಂದು ಸ್ವಲ್ಪ ಏರಿಕೆಯಾಗುವ ಸಾಧ್ಯತೆಯುದೆ. ಆದರೆ, ಡಿಸೆಂಬರ್ 29ರ ನಂತರ ತಾಪಮಾನದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಶ್ರೀನಗರ, ಕಾಶ್ಮೀರದಲ್ಲಿ ಹಿಮಪಾತ: ಶ್ರೀನಗರ ಮತ್ತು ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಶುಕ್ರವಾರ ದಟ್ಟ ಮಂಜು ಕವಿದ ವಾತಾವರಣ ನಿರ್ಮಾಣವಾಗಿತ್ತು. ಇನ್ನು ಹೆಚ್ಚಿನ ಪ್ರದೇಶಗಳಲ್ಲಿ ಹಗಲಿನ ವೇಳೆ ಮಂಜು ಕವಿಯಲಿದೆ. ಶ್ರೀನಗರ ಸೇರಿದಂತೆ ಹಲವೆಡೆ ಪ್ರದೇಶಗಳಲ್ಲಿ ಮಧ್ಯಾಹ್ನದ ವೇಳೆಯೂ ಮಂಜು ಕವಿಯುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.












Click it and Unblock the Notifications