ಕೇರಳದ ಮಳೆಗೆ ಕಂಗಾಲಾದ ಬೆಂಗಳೂರಿನ ಅಯ್ಯಪ್ಪ ಮಾಲಾಧಾರಿ ತಂಡ
"ಕೇರಳವೇ ಬಚ್ಚಲು ಮನೆ ಆದಂತೆ ಆಗಿಬಿಟ್ಟಿದೆ. ಕೊಟ್ಟಾಯಂನ ರೈಲ್ವೆ ಸ್ಟೇಷನ್ ಬಿಟ್ಟ ಕ್ಷಣದಿಂದ ಮಳೆಯೋ ಮಳೆ. ಶಬರಿ ಮಲೆಗೆ ಹೋಗುವ ದಾರಿಯಲ್ಲಿ ನೀಲಕಲ್ ಅಂತ ಸಿಗುತ್ತದೆ. ಅದಕ್ಕೆ ಆರೇಳು ಕಿಲೋಮೀಟರ್ ದೂರದಲ್ಲಿ ಲ್ಯಾಂಡ್ ಸ್ಲೈಡಿಂಗ್ (ಭೂ ಕುಸಿತ) ಆಗಿದೆ. ಉದ್ದಕ್ಕೂ ವಾಹನಗಳು ನಿಂತಿವೆ."
-ಹೀಗೆ ಒಂದೇ ಉಸುರಿನಲ್ಲಿ ಮಾತನಾಡಿದರು ಎಸ್.ಅನಿಲ್. ಬೆಂಗಳೂರಿನ ಹೆಮ್ಮಿಗೆಪುರದ ಗೊಲ್ಲಹಳ್ಳಿಯಲ್ಲಿ ಅವರ ಮನೆ. ಕ್ಯಾಪ್ ಜೆಮಿನಿ ಬಿಪಿಒ ಕಂಪೆನಿಯ ಉದ್ಯೋಗಿಯಾದ ಅವರು ಶನಿವಾರ ರಾತ್ರಿ ಬೆಂಗಳೂರಿನಿಂದ ಶಬರಿಮಲೆಗೆ ಹೊರಟಿದ್ದರು. ಭಾನುವಾರ ಬೆಳಗ್ಗೆ ಕೊಟ್ಟಾಯಂನ ರೈಲು ನಿಲ್ದಾಣದಲ್ಲಿ ಇಳಿದ ಕ್ಷಣದಿಂದ ಬೀಳುತ್ತಿರುವ ಮಳೆಗೆ ಅವರ ಇಡೀ ತಂಡ ಕಂಗಾಲಾಗಿದೆ.

ತಮ್ಮ ಜತೆಗೆ ಅಡುಗೆಯವರನ್ನು ಕರೆದುಕೊಂಡು ಹೋಗಿದ್ದರೂ ಎಲ್ಲಿಯೂ ಅಡುಗೆ ಮಾಡಿಕೊಳ್ಳಲು ಸಾಧ್ಯವಾಗದಂಥ ವಾತಾವರಣ ಎದುರಾಗಿದೆ. ಶಬರಿ ಮಲೆಗೆ ಹೋಗುವ ದಾರಿಯಲ್ಲಿ ನೀಲಕಲ್ ಎಂಬ ಸ್ಥಳಕ್ಕೆ ಆರೇಳು ಕಿಲೋಮಿಟರ್ ಹಿಂದೆ ಭೂ ಕುಸಿತವಾಗಿ ಮರಗಳು ಬುಡಸಮೇತ ರಸ್ತೆಗೆ ಬಿದ್ದಿವೆ. ಸುಮಾರು ಒಂದೆರಡು ಗಂಟೆ ಕಾಲ ಶ್ರಮ ಪಟ್ಟು ಸಾರ್ವಜನಿಕರೇ ತೆರವುಗೊಳಿಸಿದ್ದಾರೆ.

ಸಂಜೆ ನಾಲ್ಕರ ಹೊತ್ತಿಗೆ ಮಂಜು ಮುಸುಕಿದ ವಾತಾವರಣ ಇದೆ. ಶಬರಿ ಮಲೆನಲ್ಲಿ ಬೆಟ್ಟದ ಮೇಲೆ ಅಡುಗೆ ಮಾಡಿಕೊಳ್ಳುವಂತಿಲ್ಲ. ಬೆಟ್ಟದ ಕೆಳಗೆ ಅಡುಗೆ ಮಾಡಿಕೊಳ್ಳಬೇಕಿತ್ತು. ಆದರೆ ನೀರಿನ ವ್ಯವಸ್ಥೆಗೆ ಸಮಸ್ಯೆಯಾಗಿದೆ. ಪಂಪಾ ನದಿ ಉಕ್ಕಿ ಹರಿಯುತ್ತಿದ್ದು, ಆ ನೀರನ್ನು ಬಳಸಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಅನಿಲ್ ಒನ್ಇಂಡಿಯಾ ಕನ್ನಡ ಜತೆಗೆ ಮಾತನಾಡಿದರು.












Click it and Unblock the Notifications