Breaking: ಛತ್ತೀಸ್ಗಢ; ಮನೆ ಗೋಡೆ ಕುಸಿದು ಒಂದೇ ಕುಟುಂಬದ ಐವರು ಸಾವು
ರಾಯಪುರ್, ಆಗಸ್ಟ್ 15: ಛತ್ತೀಸ್ಗಢದಲ್ಲಿ ಭಾರಿ ಮಳೆ ಅವಾಂತರ ಸೃಷ್ಟಿಸಿದೆ. ಇದರಿಂದಾಗಿ ಮುಂಗೇಲಿ, ಧಮ್ತಾರಿ, ಬಲಾದ್ ಬಜಾರ್, ಸುರ್ಗುಜಾ ಮತ್ತು ಕೊರ್ಬಾ ಸೇರಿದಂತೆ ಬಿಲಾಸ್ಪುರದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಸಾವು ನೋವುಗಳು ದಾಖಲಾಗಿವೆ.
ಕಂಕೇರ್ನಲ್ಲಿ ಭಾರಿ ಮಳೆಗೆ ನಿನ್ನೆ ರಾತ್ರಿ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಪಾಖಂಜೂರ್ ಪ್ರದೇಶದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ.
ಬಿಲಾಸಪುರದಲ್ಲಿ 4 ದಿನಗಳಿಂದ ನಿರಂತರವಾಗಿ ಮಳೆ ಬೀಳುತ್ತಿದೆ. ಇದರಿಂದಾಗಿ ತಗ್ಗು ಪ್ರದೇಶದ ಬಡಾವಣೆಗಳು ಜಲಾವೃತಗೊಂಡಿವೆ. ಮುಂಗೇಲಿಯಲ್ಲಿ ನೂರಾರು ಜನರು ನೀರಿನ ಮಧ್ಯೆ ಸಿಲುಕಿಕೊಂಡಿದ್ದಾರೆ.

ಭಾನುವಾರ ಧಮ್ತಾರಿಯಲ್ಲಿ ಸೊಂಧೂರು ಅಣೆಕಟ್ಟಿನ ಎಲ್ಲಾ ಗೇಟ್ಗಳನ್ನು ತೆರೆಯಲಾಗಿದೆ. ಸೊಂಡೂರು ನದಿಯಿಂದ 2,400 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಈ ಹಿನ್ನೆಲೆ ಇಲ್ಲಿನ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ. ಬಲಾದ್ ಬಜಾರ್, ಸುರ್ಗುಜಾ ಸೇರಿದಂತೆ ಇತರೆ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ.
ನದಿ, ಹಳ್ಳಗಳ ನೀರು ಈಗ ತಗ್ಗು ಪ್ರದೇದೇಶಗಳಲ್ಲಿರುವ ಬಡಾವಣೆ, ವಾರ್ಡ್ಗಳಿಗೆ ನುಗ್ಗುತ್ತಿದೆ. ಮನೆಗಳು, ಶಾಲೆಗಳು ಮತ್ತು ಅಂಗಡಿಗಳು ನೀರಿನಲ್ಲಿ ಮುಳುಗಿವೆ. ನಗರ ಪ್ರದೇಶಗಳಲ್ಲಿ ಸಿರಗಿತ್ತಿ, ತಿಫ್ರಾ, ಸಕ್ರಿ, ಘೂರು, ಅಮೇರಿ, ಮನ್ನದೋಳ್, ದೀಪಾರಪರ, ಕುಂದರಪರ, ದೇವರಪಾರ, ಯದುನಂದನನಗರ, ಉಸಲಾಪುರ ಮತ್ತು ಸರ್ಕಂದ ಹೆಚ್ಚು ಹಾನಿಗೊಳಗಾಗಿವೆ.
ಗ್ರಾಮೀಣ ಭಾಗಗಳಾದ ಪಚಪೇಡಿ, ಜೊಂಧಾರ, ಮಸ್ತೂರಿ ಭಾಗದಲ್ಲೂ ಪರಿಸ್ಥಿತಿ ಬಿಗಡಾಯಿಸಿದೆ. ಮಳೆ ನೀರು ಜನರ ಮನೆಗಳಿಗೆ ನುಗ್ಗಿದೆ. SDRF ತಂಡವು ಎಲ್ಲಾ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿದೆ.
ಮುಂಗೇಲಿ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದು, ಸರಗಾಂವ ನಗರ ಪಂಚಾಯಿತಿಯಲ್ಲಿ 500ಕ್ಕೂ ಹೆಚ್ಚು ಮಂದಿ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ. ಭಾರೀ ಮಳೆಯ ನಡುವೆಯೂ ಮುಂಗೇಲಿ ಜಿಲ್ಲಾಧಿಕಾರಿ ರಾಹುಲ್ ದೇವ್ ಮತ್ತು ಎಸ್ಪಿ ಚಂದ್ರಮೋಹನ್ ಸಿಂಗ್ SDRF ತಂಡದೊಂದಿಗೆ ಮೋಟರ್ ಬೋಟ್ ಮೂಲಕ ಜನರಿಗೆ ಸಹಾಯ ಮಾಡುತ್ತಿದ್ದಾರೆ.












Click it and Unblock the Notifications