ವಂದೇ ಮಾತರಂಗೆ ಒತ್ತಾಯಿಸಿ ಅರ್ಜಿ: ಕೇಂದ್ರಕ್ಕೆ ಹೈಕೋರ್ಟ್ ನೋಟೀಸ್
ನವದೆಹಲಿ, ಮೇ 25: ಭಾರತದ ರಾಷ್ಟ್ರಗೀತೆಯಾದ 'ಜನ ಮನ ಗಣ' ಹಾಡಿಗೆ ಇರುವ ಸ್ಥಾನಮಾನ ಮತ್ತು ಗೌರವ 'ವಂದೇ ಮಾತರಂ'ಗೂ ಇರುವಂತೆ ಘೋಷಣೆ ಆಗಬೇಕೆಂದು ಒತ್ತಾಯಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ದೆಹಲಿ ಹೈಕೋರ್ಟ್ ಇಂದು ಬುಧವಾರ ಕೇಂದ್ರ ಸರಕಾರಕ್ಕೆ ನೋಟೀಸ್ ಜಾರಿ ಮಾಡಿದೆ.
ಅರ್ಜಿಯ ಬಗ್ಗೆ ಎಚ್ಚರಿಸಿ ನ್ಯಾಯಾಧೀಶರಾದ ವಿಪಿನ್ ಸಂಘಿ ಮತ್ತು ಸಚಿನ್ ದತ್ತ ಅವರಿದ್ದ ಹೈಕೋರ್ಟ್ ನ್ಯಾಯಪೀಠ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ, ಶಿಕ್ಷಣ ಸಚಿವಾಲಯ, ಸಂಸ್ಕೃತಿ ಸಚಿವಾಲಯ, ನ್ಯಾಯ ಮತ್ತು ಕಾನೂನು ಸಚಿವಾಲಯ ಹಾಗೂ ಇತರ ಸಂಬಂಧಿಸಿದವರಿಗೆ ನೋಟೀಸ್ ನೀಡಿದೆ. ನವೆಂಬರ್ 9ರಂದು ಅರ್ಜಿಯ ವಿಚಾರಣೆಗೆ ದಿನ ನಿಗದಿ ಮಾಡಲಾಗಿದೆ. ಅದೇ ವೇಳೆ, ಕೋರ್ಟ್ನಲ್ಲಿ ಅರ್ಜಿ ವಿಚಾರಣೆ ಪಟ್ಟಿಗೆ ಸೇರುವ ಮುನ್ನವೇ ಮಾಧ್ಯಮಕ್ಕೆ ಹೋಗಿ ಪ್ರಚಾರ ಮಾಡಿದ್ದಕ್ಕೆ ಅರ್ಜಿದಾರರ ವಿರುದ್ಧ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ಆಯಿತು.
ವಂದೇ ಮಾತರಂನಲ್ಲಿ ಕೆಲ ಸಮುದಾಯಗಳ ಭಾವನೆಗೆ ಧಕ್ಕೆ ಆಗುತ್ತದೆ ಎಂಬ ಅಭಿಪ್ರಾಯ ಆಗಾಗ್ಗೆ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಈ ಅರ್ಜಿ ಗಮನ ಸೆಳೆಯುತ್ತಿದೆ.

ಅರ್ಜಿದಾರರ ಒತ್ತಾಯ
ಎಲ್ಲಾ ಶಾಲೆ ಹಾಗು ಶಿಕ್ಷಣ ಸಂಸ್ಥೆಗಳಲ್ಲಿ ಜನ ಗಣ ಮನ ಗೀತೆಯ ಜೊತೆಗೆ ವಂದೇ ಮಾತರಂ ಹಾಡನ್ನೂ ಕಡ್ಡಾಯವಾಗಿ ಹಾಡಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಬೇಕೆಂದು ಪಿಐಎಲ್ನಲ್ಲಿ ಒತ್ತಾಯಿಸಲಾಗಿದೆ. ಈ ಸಂಬಂಧ 1950 ಜನವರಿ 24ರ ದಿನದಂದು ಸಂವಿಧಾನ ರಚನಾ ಸಭೆಯಲ್ಲಿ ಕೈಗೊಂಡ ನಿರ್ಣಯದ ಆಶಯದಲ್ಲಿ ಮಾರ್ಗಸೂಚಿ ರಚಿಸಬೇಕೆಂದು ಕೋರಲಾಗಿದೆ.
ಬಿಜೆಪಿ ನಾಯಕ ಹಾಗೂ ವಕೀಲರಾಗಿರುವ ಅಶ್ವಿನಿಕುಮಾರ್ ಉಪಾಧ್ಯಾಯ ಈ ಅರ್ಜಿ ಸಲ್ಲಿಸಿದ್ದು. "ಭಾರತ ರಾಜ್ಯಗಳ ಸಂಯೋಜನೆಯೇ ಹೊರತು ರಾಜ್ಯಗಳ ಒಕ್ಕೂಟವಲ್ಲ ಅಥವಾ ಸಂಘಟನೆಯಲ್ಲ. ಇಲ್ಲಿರುವುದು ಒಂದೇ ರಾಷ್ಟ್ರೀಯತೆ, ಅದು ಭಾರತೀಯ ಮಾತ್ರ. ಹೀಗಾಗಿ, ಪ್ರತಿಯೊಬ್ಬ ಭಾರತೀಯನೂ 'ವಂದೇ ಮಾತರಂ'ಗೆ ಗೌರವ ಕೊಡಬೇಕು" ಎಂದು ಅವರು ತಮ್ಮ ಅರ್ಜಿಯಲ್ಲಿ ಅಭಿಪ್ರಾಯ ಮಂಡಿಸಿದ್ದಾರೆ.

ಭಾವನೆಗೆ ಧಕ್ಕೆ ಆಗಲ್ಲ
"ದೇಶದ ಒಗ್ಗಟ್ಟು ಉಳಿಸಬೇಕೆಂದರೆ 'ಜನ ಗಣ ಮನ' ಮತ್ತು 'ವಂದೇ ಮಾತರಂ' ಅನ್ನು ಪ್ರಚುರಪಡಿಸಲು ರಾಷ್ಟ್ರೀಯ ನೀತಿ ರೂಪಿಸುವುದು ಸರಕಾರದ ಕರ್ತವ್ಯವಾಗಿದೆ" ಎಂದು ವಾದಿಸಿರುವ ಅಶ್ವಿನಿಕುಮಾರ್ ಉಪಾಧ್ಯಾಯ, 'ನಮ್ಮ ಸಂವಿಧಾನ ರಚನಾಕಾರರೇ ನಿರ್ಧರಿಸಿರುವ ಈ ಎರಡು ಗೀತೆಗಳು ಯಾರದ್ದಾದರೂ ಭಾವನೆಯನ್ನು ಯಾಕೆ ಘಾಸಿಗೊಳಿಸುತ್ತದೆ?" ಎಂದು ಅಚ್ಚರಿ ವ್ಯಕ್ತಪಡಿಸಿದ್ಧಾರೆ.
"ಜನ ಗಣ ಮನ ಹಾಡಿನಲ್ಲಿ ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ಭಾವನೆಗಳನ್ನು ವ್ಯಕ್ತಪಡಿಸಲಾಗಿದೆ. ಆದರೆ, ವಂದೇ ಮಾತರಂನಲ್ಲಿರುವ ಭಾವನೆಗಳು ದೇಶದ ಗುಣ ಮತ್ತು ತಿರುಳನ್ನು ಸಂಕೇತಿಸುತ್ತವೆ. ಎರಡಕ್ಕೂ ಸಮಾನ ಸ್ಥಾನಮಾನ ಇರಬೇಕು. ವಂದೇ ಮಾತರಂ ಹಾಡುವಾಗ ಪ್ರತಿಯೊಬ್ಬ ಭಾರತೀಯನೂ ಗೌರವಿಸುವುದು ಆತನ ಜವಾಬ್ದಾರಿ" ಎಂದು ಅರ್ಜಿದಾರರು ತಿಳಿಸಿದ್ದಾರೆ.

ದೇಶಭಕ್ತಿಯ ಕಿಚ್ಚು
"ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮತ್ತು ಸ್ವಾತಂತ್ರ್ಯ ಬಂದ ಸಮಯದಲ್ಲಿ ಇಡೀ ದೇಶದ ಚಿಂತನೆ ಮತ್ತು ಧ್ಯೇಯಗಳಿಗೆ ದ್ಯೋತಕವಾಗಿದ್ದು ವಂದೇ ಮಾತರಂ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ವಂದೇ ಮಾತರಂ. ಜನರಿಗೆ ಹೋರಾಟದ ಕೆಚ್ಚು ಮತ್ತು ದೇಶಭಕ್ತಿಯ ಕಿಚ್ಚು ಹಚ್ಚುತ್ತಿದ್ದುದು ವಂದೇ ಮಾತರಂ ಘೋಷಣೆಗಳು. ಹೀಗಾಗಿ, ಬ್ರಿಟಿಷರು ಸಾರ್ವಜನಿಕ ಸ್ಥಳದಲ್ಲಿ ವಂದೇ ಮಾತರಂ ಘೋಷಣೆ ಮಾಡಬಾರದೆಂದು ನಿಷೇಧ ಜಾರಿಗೆ ತಂದರು. ಘೋಷಣೆ ಕೂಗಿದ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸುವ ಕೆಲಸ ಮಾಡಿದರು" ಎಂದು ಅಶ್ವಿನಿಕುಮಾರ್ ಉಪಾಧ್ಯಾಯ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಅಧಿವೇಶನಗಳಲ್ಲಿ ವಂದೇ ಮಾತರಂ
ಜನ ಗಣ ಮನ ಹಾಡು ಬರೆದ ರಬೀಂದ್ರನಾಥ್ ಠಾಗೂರ್ 1896ರಲ್ಲಿ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ಹಾಡಿದ್ದುಂಟು. 1901ರಲ್ಲಿ ನಡೆದ ಮತ್ತೊಂದು ಕಾಂಗ್ರೆಸ್ ಅಧಿವೇಶನದಲ್ಲಿ ದಕ್ಷಿಣ ಚರಣ್ ಸೇನ್ ಕೂಡ ವಂದೇ ಮಾತರಂ ಹಾಡಿದರು. 1905ರಲ್ಲಿ ಬನಾರಸ್ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸರಳಾ ದೇವಿ ಚೌದುರಾಣಿ ಕೂಡ ವಂದೇ ಮಾತರಂ ಹಾಡಿದರು. ಲಾಲ ಲಜಪತ್ ರಾಯ್ ಅವರಂತೂ ಲಾಹೋರ್ನಿಂದ 'ವಂದೇ ಮಾತರಂ' ಎಂಬ ಪತ್ರಿಕೆಯನ್ನೂ ಹೊರತರುತ್ತಿದ್ದರು" ಎಂದು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಂದೇ ಮಾತರಂಗೆ ಇದ್ದ ಸರ್ವ ಮಾನ್ಯತೆಯ ವಿಚಾರವನ್ನು ಅಶ್ವಿನಿಕುಮಾರ್ ಉಪಾಧ್ಯಾಯ ತಮ್ಮ ಅರ್ಜಿಯಲ್ಲಿ ವಿವರಿಸಿದ್ದಾರೆ.












Click it and Unblock the Notifications