ನೀರು ಸೇವಿಸುವುದನ್ನೂ ಬಿಡುತ್ತೇನೆ: ಗುಜರಾತ್ ಸರ್ಕಾರಕ್ಕೆ ಹಾರ್ದಿಕ್ ಎಚ್ಚರಿಕೆ
ಅಹ್ಮದಾಬಾದ್, ಸೆಪ್ಟೆಬರ್ 06: "ಗುಜರಾತ್ ಸರ್ಕಾರ ತಮ್ಮೊಂದಿಗೆ ಮಾತನಾಡಲು ಮುಂದೆ ಬಾರದಿದ್ದರೆ ನೀರು ಸೇವಿಸುವುದನ್ನೂ ಬಿಟ್ಟುಬಿಡುತ್ತೇನೆ" ಎಂದು 24 ಗಂಟೆಗಳ ಗಡುವು ನೀಡಿದ್ದಾರೆ ಪಾಟೀದಾರ್ ಅದಾಲತ್ ಆಂದೋಲನ್ ಸಮಿತಿ(PAAS) ಮುಖಂಡ ಹಾರ್ದಿಕ್ ಪಟೇಲ್.
"ಇನ್ನು 24 ಗಂಟೆಗಳೊಳಗೆ ಗುಜರಾತ್ ಸರ್ಕಾರ ಹಾರ್ದಿಕ್ ಪಟೇಲ್ ಅವರೊಂದಿಗೆ ಮಾತುಕತೆಗೆ ಮುಂದಾಗದೆ ಇದ್ದಲ್ಲಿ ಅವರು ನೀರು ಸೇವಿಸುವುದನ್ನೂ ಬಿಡುವುದಾಗಿ ಹೇಳಿದ್ದಾರೆ. ಇಡೀ ರಾಜ್ಯ ಮತ್ತು ಜನತೆ ಹಾರ್ದಿಕ್ ಅವರ ಆಅರೋಗ್ಯದ ಕುರಿತು ಚಿಂತಾಕ್ರಾಂತವಾಗಿದೆ. ಅವರ ಬಗ್ಗೆ ಪ್ರಾರ್ಥಿಸುತ್ತಿದೆ. ಆದರೆ ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಕಾಳಜಿ ಇದ್ದಂತಿಲ್ಲ" ಎಂದು PAAS ವಕ್ತಾರ ಮನೋಜ್ ಪನಾರಾ ತಿಳಿಸಿದ್ದಾರೆ.
"ಸರ್ಕಾರದೊಂದಿಗೆ ಮಾತುಕತೆಗೆ ನಾವು ಸಿದ್ಧ. ಆದರೆ ಸರ್ಕಾರದ ಪ್ರತಿನಿಧಿಗಳೇ ಹಾರ್ದಿಕ್ ಪಟೇಲ್ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜಾಗಕ್ಕೆ ಬಂದು ಮಾತುಕತೆ ನಡೆಸಬೇಕು. ಅವರಿರುವ(ಸರ್ಕಾರದ ಪ್ರತಿನಿಧಿಗಳು) ಎಸಿ ರೂಮಿನಲ್ಲಿ ಕೂತು ಮಾತನಾಡುವುದಕ್ಕೆ ಹಾರ್ದಿಕ್ ಅವರಿಗೆ ಇಷ್ಟವಿಲ್ಲ" ಎಂದು ಪನಾರಾ ಹೇಳಿದ್ದಾರೆ.

ಆಗಸ್ಟ್ 24 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಹಾರ್ದಿಕ್ ಪಟೇಲ್ ಈಗಾಗಲೇ 20 ಕೆಜಿ ಯಷ್ಟು ತೂಕ ಕಳೆದುಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.
ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದು, ಗುಜರಾತಿನ ಅಹ್ಮದಾಬಾದಿನ ಅವರ ನಿವಾಸದ ಮುಂದೆ ICU On Wheel ಅಂಬುಲೆನ್ಸ್ ಸೌಲಭ್ಯವನ್ನು ಗುಜರಾತ್ ಸರ್ಕಾರ ನೀಡಿದೆ. ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ, ರೈತರ ಸಾಲ ಮನ್ನಾ, ದೇಶದ್ರೋಹದ ಆರೋಪದಲ್ಲಿ ಜೈಲಿನಲ್ಲಿರುವ ಅಲ್ಪೇಶ್ ಕಠಾರಿಯಾ ಬಿಡುಗಡೆಗಾಗಿ ಒತ್ತಾಯಿಸಿ 25 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ಉಪವಾಸ ಆರಂಭಿಸಿದ್ದಾರೆ.












Click it and Unblock the Notifications