ಕಾಂಗ್ರೆಸ್ ಬೆಂಬಲಕ್ಕೆ ಹಾರ್ದಿಕ್ ಪಟೇಲ್ ರೆಡಿ... ಆದ್ರೆ ಷರತ್ತುಗಳು ಅನ್ವಯ!
ಭೋಪಾಲ್, ಅಕ್ಟೋಬರ್ 26: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕೆಂಬ ಗುರಿ ಹೊಂದಿರುವ ಕಾಂಗ್ರೆಸ್ಸಿಗೆ ಬೆಂಬಲ ನೀಡುವುದಾಗಿ ಪಾಟೀದಾರ್ ಆಂದೋಲನದ ರೂವಾರಿ ಹಾರ್ದಿಕ್ ಪಟೇಲ್ ಹೇಳಿದ್ದಾರೆ.
ಪಾಟೀದಾರ್ ಸಮುದಾಯದ ಮತದಾರರು ಹೆಚ್ಚಿರುವ ಮಧ್ಯಪ್ರದೇಶದ ಮಾಲ್ವಾದಲ್ಲಿ ಬಿಜೆಪಿ ಬೆಂಬಲಿಗರು ಜಾಸ್ತಿ. ಇದು ಬಿಜೆಪಿಯ ಭದ್ರಕೋಟೆಯೂ ಹೌದು. ಆದರೆ ಈ ಬಾರಿ ಚುನಾವಣೆಯಲ್ಲಿ ಮಾಲ್ವಾದಲ್ಲಿ ಬಿಜೆಪಿ ಮಣ್ಣುಮುಕ್ಕುವಂತೆ ಮಾಡುವುದಕ್ಕೆ ಹಾರ್ದಿಕ್ ಪಟೇಲ್ ಸಜ್ಜಾಗಿದ್ದಾರೆ.
ಅ.29 ರಂದು ಈ ಪ್ರದೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಚಾರ ನಡೆಸಲಿದ್ದು ಅದಕ್ಕೂ ಮುನ್ನವೇ ಈ ಪ್ರದೇಶಕ್ಕೆ ಹಾರ್ದಿಕ್ ಭೇಟಿ ನೀಡಿ, ಜನರಲ್ಲಿ ಕಾಂಗ್ರೆಸ್ ಪರವಾದ ಮನಸ್ಥಿತಿಯನ್ನು ಬಿತ್ತುವ ಯೋಚನೆಯಲ್ಲಿದ್ದಾರೆ.
ಹಿರಿಯ ನಾಯಕರಿಗೆ ಟಿಕೆಟ್ ಇಲ್ಲ! ಫಲಿಸುತ್ತಾ, ಉಲ್ಟಾ ಹೊಡೆಯತ್ತಾ ಕಾಂಗ್ರೆಸ್ ತಂತ್ರ?
ಆದರೆ ಸುಖಾಸುಮ್ಮನೆ ಕಾಂಗ್ರೆಸ್ಸಿಗೆ ಇಷ್ಟೆಲ್ಲ ಸಹಾಯ ಮಾಡಿಬಿಡುತ್ತಾರಾ ಹಾರ್ದಿಕ್? ಯಾವ ಪ್ರತಿಫಲದ ಅಪೇಕ್ಷೆ ಇಲ್ಲದೆ?! ಖಂಡಿತ ಇಲ್ಲ, ಕಾಂಗ್ರೆಸ್ ಬೆಂಬಲಕ್ಕೆ ಹಾರ್ದಿಕ್ ಪಟೇಲ್ ರೆಡಿ, ಆದರೆ ಷರತ್ತಗಳು ಅನ್ವಯ! ಏನದು ಷರತ್ತು?
ಷರತ್ತುಗಳೇನು?
ಮಾಲ್ವಾ ಪ್ರದೇಶದಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕೆ ಸಿದ್ಧ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷವು ಪಾಟೀದಾರ್ ಸಮುದಾಯದ ಕನಿಷ್ಠ 12 ಜನರಿಗೆ ಟಿಕೇಟ್ ನೀಡಬೇಕು ಎಂಬುದು ಪಟೇಲ್ ಬೇಡಿಕೆ! ಇದಕ್ಕೆ ಒಪ್ಪಿದರೆ ಮಾತ್ರವೇ ಕಾಂಗ್ರೆಸ್ ಪರ ಪ್ರಚಾರಕ್ಕೆ ಹಾರ್ದಿಕ್ ಸಿದ್ಧವಿದ್ದಾರೆ.
ಮಧ್ಯಪ್ರದೇಶದಲ್ಲಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ! ಚೌಹಾಣ್ ವಿಶ್ವಾಸ
60 ಲಕ್ಷ ಜನರು!
ಮಧ್ಯಪ್ರದೇಶದಲ್ಲಿ ಒಟ್ಟು 60 ಲಕ್ಷ ಪಾಟೀದಾರ್ ಸಮುದಾಯದ ಜನರಿದ್ದಾರೆ. ಇವರದಲ್ಲಿ 40 ಲಕ್ಷದಷ್ಟು ಜನರು ಮಾಲ್ವಾ ಪ್ರದೇಶದಲ್ಲೇ ಇದ್ದಾರೆ. ಇವರು ಆರ್ಥಿಕವಾಗಿಯೂ ಬಹಳ ಬಲಾಡ್ಯವಾಗಿದ್ದಾರೆ. ಕಳೆದ ವರ್ಷ ಮಂಡಸೌರ್ ನಲ್ಲಿ ನಡೆದ ರೈತ ಹೋರಾಟದಲ್ಲಿ ಆರು ಜನ ಪಾಟೀದಾರ್ ರೈತರೇ ಪ್ರಾಣ ಕಳೆದುಕೊಂಡಿದ್ದರು. ಈ ವಿಷಯವನ್ನೂ ರಾಜಕೀಯಕ್ಕೆ ಬಳಸಿಕೊಳ್ಳಲು ಪಟೇಲ್ ಮತ್ತು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. 40 ಲಕ್ಷದಷ್ಟು ಬೃಹತ್ ಸಂಖ್ಯೆ ಮತದಾರರನ್ನು ಹೊಂದಿರುವ ಈ ಪ್ರದೇಶವನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂಬುದು ಕಾಂಗ್ರೆಸ್ಸಿಗೂ ಗೊತ್ತು!
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಗಿಬೀಳುತ್ತಿರುವ ಸಂಸದರು!
ಕಾಂಗ್ರೆಸ್ ಪಕ್ಷದಿಂದಲೇ ಟಿಕೆಟ್
ಪಾಟೀದಾರ್ ಅನಾಮತ್ ಆಂದೋಲನ ಸಮೀತಿ(PAAS) ಮೂಲಕ ಪಟೇಲ್(ಪಾಟೀದಾರ್) ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಹೋರಾಡುತ್ತಿದ್ದಾರೆ ಹಾರ್ದಿಕ್ ಪಟೇಲ್. ಅವರು ಯಾವುದೇ ರಾಜಕೀಯ ಪಕ್ಷವನ್ನು ಕಟ್ಟಿರದ ಕಾರಣ ಕಾಂಗ್ರೆಸ್ ಪಕ್ಷದಿಂದಲೇ ಪಾಟೀದಾರ್ ಸಮುದಾಯದ ನಾಯಯಕರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.
ಬಿಜೆಪಿಗೆ ಬಹುದೊಡ್ಡ ತಲೆನೋವು!
ಈಗಾಗಲೇ 22 ಜಿಲ್ಲೆಗಳ ಪಾಟೀದಾರ್ ಸಮುದಾಯದ ಮುಖಂಡರು ಕಾಂಗ್ರೆಸ್ ರಾಜ್ಯಾಧ್ಯಕ್ಷ ಕಮಲ್ ನಾಥ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆಡಳಿತಾರೂಢ ಬಿಜೆಪಿ ಬಗ್ಗೆ ಇವರಲ್ಲಿ ಉತ್ತಮ ಅಭಿಪ್ರಾಯವಿಲ್ಲ. ರೈತರ ಮೇಲಿನ ದೌರ್ಜನ್ಯ ಮತ್ತು ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಕಾಂಗ್ರೆಸ್ಸಿಗೆ ಲಾಭವಾಗಬಹುದು. ಅದರೊಂದಿಗೆ ಪಾಟೀದಾರ್ ಮತಗಳೂ ಬಿಜೆಪಿಯ ಕೈತಪ್ಪುವ ಎಲ್ಲಾ ಸೂಚನೆಗಳೂ ಸಿಕ್ಕುತ್ತಿವೆ.
ಚುನಾವಣೆ ಎಂದು?
ಮಧ್ಯಪ್ರದೇಶದಲ್ಲಿ ನವೆಂಬರ್ 28 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ. ಒಟ್ಟು 230 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಲು ಬೇಕಿರುವ ಮ್ಯಾಜಿಕ್ ನಂಬರ್ 116. ಮೂರು ಅವಧಿಯಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಬಂದಿದ್ದು, ಇದೀಗ ಬಿಜೆಪಿಯ ನಾಗಾಲೋಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.