ಗುಜರಾತ್ನತ್ತ AAP ಚಿತ್ತ: ಇಂದಿನಿಂದ ಸರಣಿ ಕಾರ್ಯಕ್ರಮ
ಅಹಮದಾಬಾದ್ ಏಪ್ರಿಲ್ 2: ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಪಂಜಾಬ್ನಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತರ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿರುವ ಗುಜರಾತ್ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಸಕಲ ತಯಾರಿ ನಡೆಸುತ್ತಿದೆ. 1995 ರಿಂದ ಬಿಜೆಪಿ ಆಡಳಿತದಲ್ಲಿರುವ ರಾಜ್ಯದಲ್ಲಿ ಶನಿವಾರದಿಂದ ಸರಣಿ ಕಾರ್ಯಕ್ರಮಗಳನ್ನು ಪಕ್ಷ ಯೋಜಿಸಿದೆ. ದೆಹಲಿ ಮುಖ್ಯಮಂತ್ರಿ ಮತ್ತು ಅವರ ಪಂಜಾಬ್ ಕೌಂಟರ್ ಭಗವಂತ್ ಮಾನ್ ಈಗಾಗಲೇ ಎರಡು ದಿನಗಳ ಭೇಟಿಗಾಗಿ ಅಹಮದಾಬಾದ್ ತಲುಪಿದ್ದಾರೆ.
ಇಂದು ಅವರು ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದು ಎರಡು ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ಇದನ್ನು ಪಕ್ಷ "ತಿರಂಗಾ ಯಾತ್ರೆ" ಎಂದು ಕರೆಯುತ್ತಿದೆ. ಜೊತೆಗೆ ಭಾನುವಾರ ಅಹಮದಾಬಾದ್ನ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಲು ನಿರ್ಧರಿಸಲಾಗಿದೆ.
ದೆಹಲಿಯಲ್ಲಿರುವ ಕೇಜ್ರಿವಾಲ್ ಅವರ ನಿವಾಸದ ಮೇಲೆ ಇತ್ತೀಚೆಗೆ ನಡೆದ ದಾಳಿಯಿಂದಾಗಿ ಎಎಪಿಯ ಗುಜರಾತ್ ಘಟಕವು ಇಬ್ಬರು ನಾಯಕರ ಸುರಕ್ಷತೆ ಮತ್ತು ಭದ್ರತೆಗಾಗಿ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಹಮದಾಬಾದ್ ಪೊಲೀಸ್ ಮುಖ್ಯಸ್ಥರನ್ನು ಕೇಳಿದೆ. ಗುಜರಾತ್ನ ಎಲ್ಲಾ 182 ವಿಧಾನಸಭಾ ಸ್ಥಾನಗಳಲ್ಲಿ ಆಪ್ ಸ್ಪರ್ಧಿಸಲಿದೆ ಎಂದು ಕೇಜ್ರಿವಾಲ್ ಕಳೆದ ವರ್ಷ ಘೋಷಿಸಿದ್ದರು.

ಕಳೆದ ವರ್ಷ ಮಾರ್ಚ್ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಪಕ್ಷ ಉತ್ತಮ ಸಾಧನೆ ಮಾಡಿತ್ತು. ಎಎಪಿ 42 ಸ್ಥಾನಗಳನ್ನು ಗೆದ್ದಿದೆ. ತಾಲೂಕು ಪಂಚಾಯತ್ಗಳಲ್ಲಿ 31 ಸ್ಥಾನಗಳು, ಪುರಸಭೆಗಳಲ್ಲಿ ಒಂಬತ್ತು ಮತ್ತು ಎರಡು ಜಿಲ್ಲಾ ಪಂಚಾಯಿತಿ ಸ್ಥಾನಗಳನ್ನು ಪಡೆದುಕೊಂಡಿದೆ.
2017 ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಗುಜರಾತ್ನಲ್ಲಿ ಪಾದಾರ್ಪಣೆ ಮಾಡಿತು. ಆದರೆ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಪಕ್ಷದ ಪ್ರಸಿದ್ಧ ವ್ಯಕ್ತಿಗಳಾದ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಪ್ರಚಾರಕ್ಕೆ ಬರಲು ವಿಫಲರಾದ ಕಾರಣ ಎಲ್ಲಾ 29 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು.

ಆದರೆ ಈ ಬಾರಿ ಕೇಜ್ರಿವಾಲ್ ಸೂರತ್ನಲ್ಲಿ ರೋಡ್ಶೋ ನಡೆಸುವ ಮೂಲಕ ಮುಂದಿನ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಗೋವಾದಲ್ಲಿ ಇತ್ತೀಚೆಗಷ್ಟೇ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಎರಡು ಸ್ಥಾನಗಳೊಂದಿಗೆ ಖಾತೆ ತೆರೆದಿದೆ.
Recommended Video
ಜೊತೆಗೆ ಗುಜರಾತ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಕೂಡ ಸಿದ್ಧತೆ ನಡೆಸುತ್ತಿದೆ. ಚುನಾವಣೆ ಬೆನ್ನಲ್ಲೇ ರಾಹುಲ್ ಗಾಂಧಿ ಅವರು ಏಪ್ರಿಲ್ 6 ರಂದು ಅಹಮದಾಬಾದ್ನಲ್ಲಿ ಗಾಂಧಿ ಸಂದೇಶ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಈ ಯಾತ್ರೆ ಗುಜರಾತ್ನ ಪ್ರತಿ ಜಿಲ್ಲೆಗಳಲ್ಲಿ ಹಾದುಹೋಗಲಿದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಏಪ್ರಿಲ್ 6 ರಂದು ಗುಜರಾತ್ಗೆ ಭೇಟಿ ನೀಡುತ್ತಿದ್ದಾರೆ. ಐತಿಹಾಸಿಕ ಗಾಂಧಿ ಸಂದೇಶ ಯಾತ್ರೆಯನ್ನು ಏಪ್ರಿಲ್ 6 ರಂದು ರಾಹುಲ್ ಗಾಂಧಿ ಅವರು ಸಬರಮತಿ ಆಶ್ರಮದಿಂದ ಆರಂಭಿಸಲಿದ್ದಾರೆ. ಈ ಯಾತ್ರೆಯು ದೆಹಲಿಯ ದಿವಂಗತ ರಾಜೀವ್ ಗಾಂಧಿಯವರ ಸಮಾಧಿ ವೀರ್ ಭೂಮಿಯಲ್ಲಿ ಮುಕ್ತಾಯಗೊಳ್ಳಲಿದೆ. ಕಾಂಗ್ರೆಸ್ನ ಸೇವಾದಳದ ಕಾರ್ಯಕರ್ತರ ನೇತೃತ್ವದ ಯಾತ್ರೆಯು ರಾಜಸ್ಥಾನ, ಹರಿಯಾಣ ಸೇರಿದಂತೆ ಗುಜರಾತ್ನ ಪ್ರತಿ ಜಿಲ್ಲೆಗಳಲ್ಲಿ ಹಾದುಹೋಗುತ್ತದೆ ಮತ್ತು ಮಹಾತ್ಮ ಗಾಂಧಿಯವರ ಶಾಂತಿ ಸಂದೇಶಗಳನ್ನು ಎತ್ತಿ ತೋರಿಸುತ್ತದೆ.












Click it and Unblock the Notifications