ಗುಜರಾತ್ನ ಮೊರ್ಬಿ ಸೇತುವೆ ದುರಂತದ ಹಿಂದಿನ ಹಲವು ಲೋಪಗಳು
ಅಹಮದಾಬಾದ್, ನವೆಂಬರ್ 2: ಗುಜರಾತ್ನ ಮೊರ್ಬಿಯಲ್ಲಿ ನಡೆದ ತೂಗು ಸೇತುವೆ ದುರಂತವು 135 ಜನರನ್ನು ಬಲಿಪಡೆದುಕೊಂಡಿದೆ. ದುರ್ಘಟನೆಯಲ್ಲಿ ಗಾಯಾಳುಗಳಾಗಿರುವ ನೂರಾರು ಸಂತ್ರಸ್ತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಣೆಯಾದವರಿಗಾಗಿ ಶೋಧ ಕಾರ್ಯಗಳು ನಡೆಯುತ್ತಿವೆ. ಕಳೆದ ಕೆಲ ವರ್ಷಗಳಲ್ಲಿ ಸಂಭವಿಸಿದ ದೊಡ್ಡ ದುರಂತ ಇದಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 9 ಜನರನ್ನು ಬಂಧಿಸಲಾಗಿದೆ. ಆದರೆ, ಬಂಧಿಸಲಾಗಿರುವ ಆರೋಪಿಗಳು ಸಾಮಾನ್ಯರು ಎಂದು ತಿಳಿದುಬಂದಿದೆ. ಸೇತುವೆ ದುರಸ್ತಿ ಹಾಗೂ ನಿರ್ವಹಣೆಯ ಕಾಮಗಾರಿಯನ್ನು ಗುತ್ತಿಗೆ ಪಡೆದಿರುವ ಕಂಪನಿಯ ಮುಖ್ಯಸ್ಥರು ಕಾಣೆಯಾಗಿದ್ದಾರೆಂದು 'ಎನ್ಡಿಟಿವಿ' ವರದಿ ಮಾಡಿದೆ.
ಗುಜರಾತ್ನ ವಡೋದರಾದಲ್ಲಿ ಕೋಮು ಘರ್ಷಣೆ: 19 ಜನರ ಬಂಧನ
ಸೇತುವೆ ದುರಸ್ತಿ ಕಾರ್ಯದಲ್ಲಿ ಹಲವು ಲೋಪಗಳು
ಮೊರ್ಬಿ ಸೇತುವೆ ಒಂದು ಶತಮಾನಕ್ಕೂ ಹಳೆಯದಾಗಿದೆ. ಇದನ್ನು ಬ್ರಿಟಿಷರ ಆಡಳಿತಾವಧಿಯಲ್ಲಿ ಕಟ್ಟಲಾಗಿದೆ. ಈ ವರ್ಷದ ಮಾರ್ಚ್ನಲ್ಲಿ, ಸೇತುವೆಯ ದುರಸ್ತಿ ಹಾಗೂ ನಿರ್ವಹಣೆಯನ್ನು 'ಒರೆವ' ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಗೋಡೆ ಗಡಿಯಾರ ತಯಾರಿಸುವ ಕಂಪನಿಯಾದ ಒರೆವ ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿ ಕೆಲಸಗಳಲ್ಲಿ ಯಾವುದೇ ಪರಿಣತಿ ಹೊಂದಿಲ್ಲ. ಸೇತುವೆ ದುರಸ್ತಿಯಲ್ಲಿ ಹಲವು ಲೋಪಗಳಾಗಿರುವುದು ಕಂಡುಬಂದಿದೆ.
*ನವೀಕರಣಕ್ಕೆ ಬಳಸಲಾದ ವಸ್ತುಗಳು ದುರ್ಬಲ ಹಾಗೂ ಕೆಳಮಟ್ಟದ್ದಾಗಿವೆ
*143 ವರ್ಷಗಳಷ್ಟು ಹಳೆಯದಾದ ಸೇತುವೆಯ ನವೀಕರಣಕ್ಕೂ ಮೊದಲು ಅದರ ಶಿಸ್ತುಬದ್ಧ ಲೆಕ್ಕಪರಿಶೋಧನೆ ನಡೆದಿರಲಿಲ್ಲ
*ತೂಗು ಸೇತುವೆಯ ಹಲವು ಕೇಬಲ್ಗಳು ಮುರಿದು ಬಿದ್ದಿದ್ದವು. ಹಲವು ಕೇಬಲ್ಗಳು ತುಕ್ಕು ಹಿಡಿದಿದ್ದವು. ಈ ಕೇಬಲ್ಗಳನ್ನು ರಿಪೇರಿ ಮಾಡಿರಲಿಲ್ಲ.
*ಸೇತುವೆಯ ಮೇಲೆ ಸಾಗುವ ದಾರಿಯನ್ನಷ್ಟೇ ಬದಲಾಯಿಸಲಾಗಿತ್ತು. ಇದು ದುರಸ್ತಿ ಕಾಮಗಾರಿಯ ಭಾಗವಾಗಿದೆ. ಕೇಬಲ್ಗಳನ್ನು ಬದಲಿಸಿರಲಿಲ್ಲ. ಇದು ಗುತ್ತಿಗೆ ಕಾಮಗಾರಿಯ ಭಾಗವಾಗಿರಲಿಲ್ಲ.
*ಕಟ್ಟಿಗೆ ಸೇತುವೆಯ ದಾರಿಯನ್ನು ಅಲ್ಯುಮಿನಿಯಂನಿಂದ ಬದಲಾಯಿಸಲಾಗಿತ್ತು. ಇದು ಸೇತುವೆ ಭಾರವನ್ನು ಹೆಚ್ಚಿಸಿತ್ತು.
*ದುರಸ್ತಿಯ ಕಾಮಗಾರಿಗೆ ಗುತ್ತಿಗೆ ಪಡೆದ ಗುತ್ತಿಗೆದಾರರು ಸೇತುವೆ ಕೆಲಸಗಳಲ್ಲಿ ಅರ್ಹತೆ ಹೊಂದಿರಲಿಲ್ಲ.
*ಉಪಗುತ್ತಿಗೆದಾರರು ನವೀಕರಣದ ಭಾಗವಾಗಿ ಕೇಬಲ್ಗಳಿಗೆ ಬಣ್ಣ ಹಚ್ಚಿದ್ದಾರೆ ಹಾಗೂ ಪಾಲಿಶ್ ಮಾಡಿದ್ದಾರೆ.
*ಒರೆವ ಕಂಪನಿಯು ಅರ್ಹತಾ ಪ್ರಮಾಣ ಪತ್ರವನ್ನು ಹೊಂದಿರದೇ ಇದ್ದರೂ, ಗುತ್ತಿಗೆ ನೀಡಲಾಗಿತ್ತು.
*ತೂಗು ಸೇತುವೆಯ ಮೇಲೆ ಒಂದು ಸಾರಿ ಎಷ್ಟು ಜನರು ಸಾಗಿ ಹೋದಬಹುದೆಂಬುದನ್ನು ನಿರ್ಧರಿಸದೆ ಸಾರ್ವಜನಿಕ ಸಂಚಾರಕ್ಕೆ ತೆರೆಯಲಾಗಿತ್ತು.
*ಸೇತುವೆಯನ್ನು ಮತ್ತೆ ತೆರೆಯುವುದಕ್ಕೂ ಮೊದಲು ಸರ್ಕಾರದ ಅನುಮೋದನೆ ಪಡೆದಿರಲಿಲ್ಲ.
*ಸೇತುವೆ ದುರಸ್ತಿ ಮಾಡಿದ ಜಾಗದಲ್ಲಿ ಯಾವುದೇ ತುರ್ತು ರಕ್ಷಣಾ ಮತ್ತು ಸ್ಥಳಾಂತರಿಸುವ ಯೋಜನೆ ಇರಲಿಲ್ಲ. ಜೀವರಕ್ಷಕ ಉಪಕರಣಗಳು ಹಾಗೂ ಜೀವರಕ್ಷಕರನ್ನು ನೇಮಿಸಿರಲಿಲ್ಲ.
*ಸೇತುವೆ ದುರಸ್ತಿ ಕಾರ್ಯ ಕುರಿತಂತೆ ಯಾವುದೇ ದಾಖಲಾತಿ ಇಲ್ಲ. ತಜ್ಞರಿಂದ ಪರಿಶೀಲಿಸಲಾಗಿಲ್ಲ.
*ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲು ಕಂಪನಿಯು ಡಿಸೆಂಬರ್ವರೆಗೆ ಕಾಲಮಿತಿ ಹೊಂದಿತ್ತು. ಆದರೆ, ಅವರು ಗುಜರಾತಿ ಹೊಸ ವರ್ಷದ ಪ್ರಯುಕ್ತ ಅವಧಿಗೂ ಮುಂಚಿತವಾಗಿಯೇ ಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದ್ದರು.
ಮುನ್ನೆಲೆಗೆ ಬಂದ ಗುಜರಾತ್ ಮಾಡೆಲ್ ಚರ್ಚೆ; ಕಳೆದ 27 ವರ್ಷಗಳಿಂದ ಗುಜರಾತ್ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯವಾಗಿರುವ ಗುಜರಾತ್ ಬಗ್ಗೆ ಈಗ ಚರ್ಚೆಗಳು ನಡೆಯುತ್ತಿವೆ. ಸೇತುವೆ ದುರಂತವನ್ನು ಗುಜರಾತ್ ಮಾಡಲ್ಗೆ ಹೋಲಿಸಿ ಸಾಮಾಜಿಕ ತಾಣಗಳಲ್ಲಿ ಟೀಕೆ ಮಾಡಲಾಗುತ್ತಿದೆ. ಮೂರು ಜನರು ಒದ್ದರೆ ಬೀಳುವಂತಹ ಸೇತುವೆ ಗುಜರಾತ್ ಮಾಡೆಲ್ನ ಫಲಿತಾಂಶ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.
ಸೇತುವೆ ದುರಂತಕ್ಕೆ ಗುಜರಾತ್ ಸರ್ಕಾರ ಹಾಗೂ ಮೊರ್ಬಿ ಸ್ಥಳೀಯ ಆಡಳಿತದ ನಿರ್ಲಕ್ಷ್ಯವೇ ಕಾರಣವೆಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದಾರೆ. ಸೇತುವೆ ಪ್ರಕರಣದ ತನಿಖೆಯನ್ನು ಸಿಬಿಐ, ಇಡಿ ಏಕೆ ನಡೆಸುತ್ತಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದಾರೆ.