ನಮ್ಮನ್ನು ಗುರಿಯಾಗಿಸಿ 4 ಕ್ವಿಂಟಾಲ್ನಷ್ಟು ಬೈಗುಳಗಳನ್ನು ಪ್ರಧಾನಿ ಪ್ರತಿದಿನ ಬೈಯುತ್ತಾರೆ: ಮಲ್ಲಿಕಾರ್ಜುನ ಖರ್ಗೆ ಪ್ರತಿದಾಳಿ
ವಡೋದರಾ, ಡಿಸೆಂಬರ್ 01: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ಪ್ರತಿನಿತ್ಯ ನಾಲ್ಕು ಕ್ವಿಂಟಾಲ್ನಷ್ಟು ಬೈಗುಳನ್ನು ಬೈಯುತ್ತಾರೆ ಎಂದು ಖರ್ಗೆ ಹೇಳಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ನ ಹಲವು ನಾಯಕರನ್ನು ಗುರಿಯಾಗಿಸಿ ಪ್ರಧಾನಿ ಬೈಗುಳಗಳ ಮಳೆಯನ್ನು ಸುರಿಸುತ್ತಾರೆ ಎಂದು ಟೀಕಿಸಿದ್ದಾರೆ.
ಗುಜರಾತ್ನ ವಡೋದರಾ ಜಿಲ್ಲೆಯ ವಘೋಡಿಯಾ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತ್ಯಜಿತ್ಸಿನ್ಹ ಗಾಯಕ್ವಾಡ್ ಪರ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಖರ್ಗೆ ಮಾತನಾಡಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ ಮುಕ್ತಾಯಗೊಂಡಿದ್ದು, ಎರಡನೇ ಹಂತದ ಮತದಾನ ಡಿಸೆಂಬರ್ 5 ರಂದು ನಡೆಯಲಿದೆ.

ಕಾಂಗ್ರೆಸ್ ನಾಯಕರಲ್ಲೇ ಸ್ಪರ್ಧೆ ನಡೆಯುತ್ತಿದೆ ಎಂದ ಪ್ರಧಾನಿ
ಇದಕ್ಕೂ ಮೊದಲು ಪಂಚಮಹಲ್ ಜಿಲ್ಲೆಯ ಕಲೋಲ್ ಪಟ್ಟಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತಮ್ಮ ವಿರುದ್ಧ ಯಾರು ಹೆಚ್ಚು ನಿಂದನೀಯ ಪದಗಳನ್ನು ಬಳಸುತ್ತಾರೆ ಎಂಬ ಸ್ಪರ್ಧೆಯು ಕಾಂಗ್ರೆಸ್ ನಾಯಕರಲ್ಲಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು, ಹೈದರಾಬಾದ್ನ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, ನಾನು ಪ್ರತಿದಿನ 2.5ರಿಂದ ಮೂರು ಕೆಜಿಯಷ್ಟು ನಿಂದನೆಗಳನ್ನು ಸ್ವೀಕರಿಸುತ್ತೇನೆ ಎಂದು ಪ್ರಧಾನಿ ತಿಳಿಸಿದ್ದರು.

ಪ್ರಧಾನಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ
'ನಾವು ಅವರನ್ನು ಅವಮಾನಿಸಿದ್ದೇವೆ ಎಂದು ಮೋದಿ ಪದೇ ಪದೇ ಹೇಳಿಕೊಳ್ಳುತ್ತಾರೆ. ನಾನು ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ನನ್ನನ್ನು ನಿಂದಿಸುತ್ತಾರೆ ಎಂದು ಅವರು ಆರೋಪಿಸುತ್ತಾರೆ. ಕೆಲವೊಮ್ಮೆ ಮೋದಿ ತಾವು ಬಡವರು ಎಂದು ಹೇಳುತ್ತಾರೆ. ನೀವು(ಮೋದಿ) ಎಷ್ಟು ದಿನ ಇದನ್ನು (ನಾನು ಬಡವ ಎಂದು) ಹೇಳುತ್ತೀರಿ? ಇದು ಹೇಗೆ ಸಾಧ್ಯ? ನೀವು ಸುಮಾರು ಹದಿಮೂರೂವರೆ ವರ್ಷಗಳ ಕಾಲ ಗುಜರಾತ್ನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದೀರಿ. ಕಳೆದ ಎಂಟು ವರ್ಷಗಳಿಂದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದೀರಿ' ಎಂದು ಖರ್ಗೆ ತಿಳಿಸಿದ್ದಾರೆ.
ಎರಡು ದಶಕಗಳ ಕಾಲ ಸಿಎಂ ಮತ್ತು ಪ್ರಧಾನಿಯಾಗಿ ಸೇವೆ ಸಲ್ಲಿಸಿದ ನಂತರವೂ ಮೋದಿ ಬಡವರಾಗಿದ್ದರೆ, ಈ ದೇಶದ ದಲಿತರು, ಬಡವರು ಮತ್ತು ಬುಡಕಟ್ಟು ಜನಾಂಗದವರ ದುಸ್ಥಿತಿಯನ್ನು ಊಹಿಸಿಕೊಳ್ಳಿ ಎಂದು ಖರ್ಗೆ ಹೇಳಿದರು.

ಜನರ ಸಹಾನುಭೂತಿ ಪಡೆಯಲು ಮೋದಿಯಿಂದ ಹೇಳಿಕೆ
ಜನರ ಸಹಾನುಭೂತಿ ಪಡೆಯಲು ಮೋದಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಅಧ್ಯಕ್ಷರು, ಚುನಾವಣಾ ಸಮಯದಲ್ಲಿ ಅಭಿವೃದ್ಧಿಯ ವಿಷಯವನ್ನು ಪ್ರಸ್ತಾಪಿಸುವಂತೆ ಒತ್ತಾಯಿಸಿದ್ದಾರೆ.
'ಕಾಂಗ್ರೆಸ್ ಪ್ರತಿದಿನ ಎರಡು ಕಿಲೋಗ್ರಾಂಗಳಷ್ಟು ನಿಂದನೆಗಳನ್ನು ನೀಡುತ್ತದೆ ಎಂದು ಮೋದಿ ಹೇಳಿಕೊಳ್ಳುತ್ತಾರೆ. ನೀವು ನಮಗೆ ದಿನಕ್ಕೆ ನಾಲ್ಕು ಕ್ವಿಂಟಾಲ್ ಬೈಗುಳ ನೀಡುತ್ತೀರಿ ಎಂಬುದು ಸತ್ಯ. ಕೆಲವೊಮ್ಮೆ ನೀವು ನನ್ನನ್ನು ಅಥವಾ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಳ್ಳುತ್ತೀರಿ. ನಮಗೆ ಬೈಗಳಗಳನ್ನು ನೀಡದೇ ನೀವು ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಅದು ನಿಮ್ಮ ಆಹಾರ. ಆದರೆ, ನಾಗರಿಕರ ಹಿತದೃಷ್ಟಿಯಿಂದ ನಾವು ನಿಮ್ಮ ಹಾಗೆ ಮಾತನಾಡುವುದಿಲ್ಲ' ಎಂದು ಖರ್ಗೆ ಹೇಳಿದರು.

ಮೋದಿಗೆ ಪ್ರಧಾನಿ ಆಗಲು ಸಾಧ್ಯವೇ ಆಗುತ್ತಿರಲಿಲ್ಲ ಎಂದ ಖರ್ಗೆ
ಕಳೆದ ಏಳು ದಶಕಗಳ ಕಾಲ ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಕಾಂಗ್ರೆಸ್ ಸಂರಕ್ಷಿಸದಿದ್ದರೆ, ಮೋದಿ ಎಂದಿಗೂ ಪ್ರಧಾನಿ ಹಾಗೂ ಮುಖ್ಯಮಂತ್ರಿಯಾಗಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಖರ್ಗೆ ಹೇಳಿದರು.
ಪ್ರಧಾನ ಮಂತ್ರಿ ಮತ್ತು ಅವರ ಸರ್ಕಾರವು ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ಸಂರಕ್ಷಿಸಲಾಗಿದ್ದ ಆಸ್ತಿಗಳನ್ನು 'ಮಾರಾಟ' ಮಾಡುತ್ತಿದೆ ಎಂದು ಖರ್ಗೆ ಆರೋಪಿಸಿದರು.
'ಬಂದರು ಅಥವಾ ವಿಮಾನ ನಿಲ್ದಾಣಗಳೆಲ್ಲವನ್ನೂ ಪ್ರಧಾನಿ ಮೋದಿ ಮಾರಾಟ ಮಾಡುತ್ತಿದ್ದಾರೆ. ಅಂತಹ ಆಸ್ತಿಗಳನ್ನು ಮಾರಾಟ ಮಾಡಿದ ನಂತರ ಅವರು ನಮ್ಮನ್ನು ಕೇಳುತ್ತಾರೆ, ಕಳೆದ 70 ವರ್ಷಗಳಲ್ಲಿ ನಾವು ಏನು ಮಾಡಿದ್ದೇವೆಂದು... ನೀವು ಏನನ್ನು ಮಾರಾಟ ಮಾಡುತ್ತಿದ್ದೀರಿ ಅದನ್ನು ನಾವು ಸಂರಕ್ಷಿಸಿದ್ದೆವು ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ' ಎಂಬುದಾಗಿ ತಿಳಿಸಿದರು.
ವಾಘೋಡಿಯಾ ಕ್ಷೇತ್ರ ಸೇರಿದಂತೆ 93 ಸ್ಥಾನಗಳಿಗೆ ಡಿಸೆಂಬರ್ 5 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.












Click it and Unblock the Notifications