Gujarat Election Result 2022 : ಬಿಜೆಪಿ ದಾಖಲೆಯ ಜಯಕ್ಕೆ 6 ಪ್ರಮುಖ ಕಾರಣಗಳಿವು
6 ಬಾರಿ ಗುಜರಾತ್ನಲ್ಲಿ ಆಡಳಿತ ನಡೆಸಿರುವ ಬಿಜೆಪಿ 7ನೇ ಬಾರಿ ಗದ್ದುಗೆ ಏರಲು ಸಿದ್ಧತೆ ನಡೆಸಿದೆ. 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ, ಈ ಬಾರಿ ದಾಖಲೆಯ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಖಚಿತವಾಗಿದೆ.
ಭಾರತೀಯ ಚುನಾವಣಾ ಆಯೋಗದ (ಇಸಿಐ) ಅಂಕಿಅಂಶಗಳ ಪ್ರಕಾರ 52.9 ಶೇಕಡಾ ಮತಗಳನ್ನು ಪಡೆದಿದೆ. ಭೂಪೇಂದ್ರ ಪಟೇಲ್ ಸೋಮವಾರ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
2017 ರಲ್ಲಿ ಕೇವಲ 99 ಸೀಟುಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ 150 ಕ್ಕೂ ಹೆಚ್ಚಿನ ಸೀಟು ಗೆಲ್ಲುವುದು ಖಚಿತವಾಗಿದೆ. ಕಳೆದ ಚುನಾವಣೆಯಲ್ಲಿ 77 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದ್ದ ಕಾಂಗ್ರೆಸ್ 2022ರ ಚುನಾವಣೆಯಲ್ಲಿ ಧೂಳೀಪಟವಾಗಿದೆ.
Gujarat Election Results 2022: 19,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಹಾರ್ದಿಕ್ ಪಟೇಲ್ ಗೆಲುವು
ಇದುವರೆಗಿನ ಮತಎಣಿಕೆಯಲ್ಲಿ ಕೇವಲ 16 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಬಿಜೆಪಿಗೆ ಪೈಪೋಟಿ ನೀಡಲು ಆಮ್ ಆದ್ಮಿ ಪಕ್ಷ ಕೂಡ ಗುಜರಾತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿತ್ತು. ಪಂಜಾಬ್ ಗೆದ್ದಿದ್ದ ಆಪ್ ಗುಜರಾತ್ನಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ವಿಶ್ವಾಸದಲ್ಲಿತ್ತು, ಆದರೆ, ಆಮ್ ಆದ್ಮಿ ಪಕ್ಷವನ್ನು ಗುಜರಾತಿನ ಮತದಾರ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಹಾಗಾದ್ರೆ, ಬಿಜೆಪಿಯ ಈ ಭರ್ಜರಿ ಜಯಕ್ಕೆ ಕಾರಣಗಳು ಏನು?
ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು
ಕಡಿಮೆಯಾಗದ ನರೇಂದ್ರ ಮೋದಿ ಪ್ರಭಾವ
ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ತಮ್ಮ ಅವಧಿಯಲ್ಲಿ ರಾಜ್ಯದಲ್ಲಿ ಸಾಕಷ್ಟು ಪ್ರಭಾವಿ ವ್ಯಕ್ತಿಯಾಗಿದ್ದರು. ಅವರು, ದೇಶದ ಪ್ರಧಾನಿಯಾದ ಬಳಿಕವೂ ಗುಜರಾತಿನಲ್ಲಿ ಇನ್ನಷ್ಟು ಜನಪ್ರಿಯವಾಗಿದ್ದಾರೆ. ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದ ಅವರು, ಚುನಾವಣೆಗೆ ಮುನ್ನ ಭರ್ಜರಿಯಾಗಿ ಪ್ರಚಾರ ಮಾಡಿದರು. ಅವರ ಜನಪ್ರಿಯತೆ ಗುಜರಾತ್ನಲ್ಲಿ ಮೋದಿ Vs ಇತರರು ಎನ್ನುವಂತೆ ಮಾಡಿತ್ತು.
ಗುಜರಾತಿನ ಜನತೆಗೆ ನರೇಂದ್ರ ಮೋದಿ ಮೇಲಿರುವ ವಿಶ್ವಾಸ ಕಡಿಮೆಯಾಗಿಲ್ಲ. ಹಲವು ಸಮಸ್ಯೆಗಳ ನಡುವೆಯೂ ಜನ ಮೋದಿಯನ್ನು ನಂಬಿದ್ದಾರೆ. ಯಾವುದೇ ಅಭ್ಯರ್ಥಿ ನಿಂತರೂ ನರೇಂದ್ರ ಮೋದಿ ಹೆಸರು ಅವರಿಗೆ ಮತ ತಂದುಕೊಟ್ಟಿದೆ.
ಇದನ್ನೇ ಬಿಜೆಪಿ ಸದುಪಯೋಗಪಡಿಸಿಕೊಂಡಿತು. ಪ್ರತಿ ಹಂತದ ಮತದಾನಕ್ಕೆ ಮುನ್ನ ಪ್ರಧಾನಿ ಮೋದಿ ಗುಜರಾತ್ನಲ್ಲಿ ವ್ಯಾಪಕ ಪ್ರಚಾರ ನಡೆಸಿದರು. ಡಿಸೆಂಬರ್ 1 ರಂದು ಅಹಮದಾಬಾದ್ನಲ್ಲಿ ಬೃಹತ್ ರೋಡ್ಶೋ ನಡೆಸಿದರು.
ಕೋವಿಡ್ ನಂತರ ಸುಧಾರಣೆ
ಕೋವಿಡ್-19 ಸಾಂಕ್ರಾಮಿಕದ ನಂತರ ಗುಜರಾತ್ನಲ್ಲಿ ನಡೆದ ಮೊದಲ ಚುನಾವಣೆ ಇದು. ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟು ಸರ್ಕಾರ ಸುಳ್ಳು ಹೇಳಿದೆ ಎನ್ನುವ ವಿವಾದ ಗುಜರಾತ್ ಸರ್ಕಾರವನ್ನು ಕಾಡಿತ್ತು. ಆದರೆ, ಬಿಜೆಪಿ ಮತದಾರರ ಕೋಪವನ್ನು ಕಡಿಮೆ ಮಾಡಲು, ಮುಖ್ಯಮಂತ್ರಿಯಾಗಿದ್ದ, ವಿಜಯ್ ರೂಪಾನಿ ಅವರನ್ನು ವಜಾಗೊಳಿಸಿತು.
ಅದಾದ ಬಳಿಕ, ಭೂಪೇಂದ್ರ ಪಟೇಲ್ರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆಯಾದರು. ಅದಾದ ಬಳಿಕ ರಾಜ್ಯದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಯಿತು. ಚುನಾವಣಾ ಸಮಸ್ಯೆಗಳ ಪಟ್ಟಿಯಲ್ಲಿ ಕೋವಿಡ್-19 ವಿಚಾರ ಕಾಣಿಸಿಕೊಳ್ಳಲಿಲ್ಲ. ರಾಷ್ಟ್ರೀಯ ಸಮಸ್ಯೆಗಳು ಮತ್ತು ಧಾರ್ಮಿಕ ಧ್ರುವೀಕರಣ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀಡಿದೆ ಎಂದು ಸಾಕಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷವಾಗಿ ವಿಫಲವಾದ ಕಾಂಗ್ರೆಸ್
2017 ರಲ್ಲಿ, ಕಾಂಗ್ರೆಸ್ ಪಕ್ಷ 77 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿತ್ತು. ಆದರೆ, 2022ರಲ್ಲಿ ಕಾಂಗ್ರೆಸ್ ಗುಜರಾತ್ನಲ್ಲಿ ಸಂಪೂರ್ಣವಾಗಿ ನೆಲೆ ಕಳೆದುಕೊಂಡಿದೆ.
ಬುಡಕಟ್ಟು ಜನರು ನೆಲೆಸಿರುವ ಕ್ಷೇತ್ರಗಳಲ್ಲಿ ಹೆಚ್ಚು ಪ್ರಭಾವಿಯಾಗಿದ್ದ ಕಾಂಗ್ರೆಸ್ ಈ ಬಾರಿ ಸೋಲುಕಂಡಿದೆ. ಬುಡಕಟ್ಟು ಕ್ಷೇತ್ರಗಳಲ್ಲಿ 27 ಸ್ಥಾನಗಳಲ್ಲಿ ಕಳೆದ ಬಾರಿ ಕಾಂಗ್ರೆಸ್ ಗೆದ್ದಿದ್ದರೆ, ಈ ಬಾರಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಗುಜರಾತ್ನಲ್ಲಿ 89.17 ಲಕ್ಷ ಬುಡಕಟ್ಟು ಜನಸಂಖ್ಯೆ ಇದೆ. 2011 ರ ಜನಗಣತಿಯ ಮಾಹಿತಿಯ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯ 15 ಪ್ರತಿಶತ ಬುಡಕಟ್ಟು ಜನಸಂಖ್ಯೆ ಇದೆ. ಬಿಜೆಪಿ ಇವರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಮೊದಲ ಬಾರಿಗೆ ಮತದಾರರ ಸಂಖ್ಯೆಯಲ್ಲಿ ಕುಸಿತ
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಗುಜರಾತ್ 10 ವರ್ಷಗಳಲ್ಲಿ ಮೊದಲ ಬಾರಿಗೆ 16 ಪ್ರತಿಶತ ಕಡಿಮೆ ಮತದಾರರನ್ನು ಹೊಂದಿದೆ. ರಾಜ್ಯದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ಮತದಾರರಲ್ಲಿ 60 ಪ್ರತಿಶತ ಏರಿಕೆ ಕಂಡಿದೆ.
ಕಳೆದ 27 ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಪಕ್ಷಕ್ಕೆ ಹೆಚ್ಚಿನ ನಿಷ್ಠಾವಂತರು ಮತ ಚಲಾಯಿಸಿದ್ದಾರೆ. ಇದೇ, ಬಿಜೆಪಿ ಪಕ್ಷಕ್ಕೆ ಸಾಕಷ್ಟು ಲಾಭವಾಗಿ ಪರಿಣಮಿಸಿದೆ.
ಕಳೆದಬಾರಿ ಸೋತ ಕ್ಷೇತ್ರಗಳ ಮೇಲೆ ಗಮನ
2012ರಲ್ಲಿ ಗೆಲುವು ಸಾಧಿಸಿದ್ದ ಮೊರ್ಬಿ, ಸುರೇಂದ್ರನಗರ, ಸೋಮನಾಥ್ ಮತ್ತು ಅಮ್ರೇಲಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ 2017 ರ ಚುನಾವಣೆಯಲ್ಲಿ ಸೋಲು ಕಂಡಿತ್ತು. ಕಳೆದ ಬಾರಿ ಸೋತ ಕ್ಷೇತ್ರಗಳ ಮೇಲೆ ಬಿಜೆಪಿ ಹೆಚ್ಚಿನ ಗಮನ ಹರಿಸಿತ್ತು.
ಆ ಕ್ಷೇತ್ರಗಳಲ್ಲಿ ನಾಯಕರು ಸಾಮೂಹಿಕವಾಗಿ ಪ್ರಚಾರ ನಡೆಸಿದ್ದರು. ಅದರ ಪರಿಣಾಮವಾಗಿ 2017ರಲ್ಲಿ ಕಳೆದುಕೊಂಡ ಕ್ಷೇತ್ರಗಳನ್ನು ಈ ಬಾರಿ ಮರಳಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಅತ್ಯುತ್ತಮ ಸಂಘಟನಾ ಶಕ್ತಿ
ಬಿಜೆಪಿ ತನ್ನ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಮತ್ತು ಎಎಪಿಗಿಂತ ಹೆಚ್ಚಿನ ಸಂಘಟನಾ ಚತುರತೆಯನ್ನು ಹೊಂದಿದೆ. ನವೆಂಬರ್ ತಿಂಗಳಿನಲ್ಲಿ ಅಭ್ಯರ್ಥಿಗಳ ಮೊದಲ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದ ನಂತರ ಪಕ್ಷ ಆಂತರಿಕ ಅಸಮಾಧಾನವನ್ನು ಯಶಸ್ವಿಯಾಗಿ ಶಮನಗೊಳಿಸಿತು.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಂಪುಟದ ಐವರು ಸಚಿವರು ಮತ್ತು ವಿಧಾನಸಭೆ ಸ್ಪೀಕರ್ ನಿಮಾಬೆನ್ ಆಚಾರ್ಯ ಸೇರಿದಂತೆ 42 ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಆದರೂ, ಪಕ್ಷದಲ್ಲಿ ಯಾವುದೇ ಗೊಂದಲಕ್ಕೆ, ಬಂಡಾಯಕ್ಕೆ ಆಸ್ಪದ ನೀಡಲಿಲ್ಲ.