Gujarat Election Result 2022 : ಮತ ಎಣಿಕೆ ನಡುವೆ ಗಮನ ಸೆಳೆಯುತ್ತಿರುವ ಪ್ರಮುಖ ಅಭ್ಯರ್ಥಿಗಳು
ಪ್ರಧಾನಮಂತ್ರಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಸತತವಾಗಿ 6 ಬಾರಿ ರಾಜ್ಯದಲ್ಲಿ ಗದ್ದುಗೆ ಏರಿರುವ ಬಿಜೆಪಿ ಏಳನೇ ಬಾರಿ ಕೂಡ ಅಧಿಕಾರವನ್ನು ಮರಳಿ ಪಡೆಯುವ ವಿಶ್ವಾಸದಲ್ಲಿದೆ.
ಚುನಾವಣೋತ್ತರ ಸಮೀಕ್ಷೆಗಳು ಕೂಡ ಬಿಜೆಪಿ ಪರವಾಗಿಯೇ ಬಂದಿರುವುದರಿಂದ ಸಹಜವಾಗಿಯೇ ಬಿಜಪಿ ಗೆಲುವಿನ ಆತ್ಮವಿಶ್ವಾಸದಲ್ಲಿದೆ. ರಾಜ್ಯದಲ್ಲಿ ಒಟ್ಟು 182 ವಿಧಾನಸಭಾ ಕ್ಷೇತ್ರಗಳಲ್ಲಿ 1,600 ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
Recommended Video
ಬಿಗಿ ಭದ್ರತೆಯ ನಡುವೆ ರಾಜ್ಯದಲ್ಲಿ ಮತ ಎಣಿಕೆ ನಡೆಯತ್ತಿದ್ದು, ಕೆಲವೇ ಗಂಟೆಗಳಲ್ಲಿ ಎಲ್ಲಾ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಇದುವರೆಗೂ ಗುಜರಾತ್ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ನಡೆಯುತ್ತಿತ್ತು, ಈಗ ಆಮ್ ಆದ್ಮಿ ಪಕ್ಷ ಕೂಡ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಹಲವು ಕ್ಷೇತ್ರಗಳಲ್ಲಿ ಗೆಲುವು ಕಾಣುವ ನಿರೀಕ್ಷೆಯಲ್ಲಿದೆ.

ಸಾವಿರಾರು ಅಭ್ಯರ್ಥಿಗಳು ಕಣದಲ್ಲಿದ್ದರೂ ಈ ಕೆಲವು ಅಭ್ಯರ್ಥಿಗಳು ಮಾತ್ರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಈ ಅಭ್ಯರ್ಥಿಗಳು ಸೋಲು-ಗೆಲುವಿನ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.
ಸಿಎಂ ಭೂಪೇಂದ್ರ ಪಟೇಲ್ಗೆ ಅಗ್ನಿ ಪರೀಕ್ಷೆ
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯ್ ಪಟೇಲ್ ಗುಜರಾತ್ನ ಆರ್ಥಿಕ ರಾಜಧಾನಿ ಅಹಮದಾಬಾದ್ನ ಘಟ್ಲೋಡಿಯಾ ಕ್ಷೇತ್ರದಿಂದ ಸ್ಫರ್ಧಿಸಿದ್ದಾರೆ. 2021ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವಿಜಯ್ ರೂಪಾನಿ ಅವರನ್ನು ಕೆಳಗಿಳಿಸಿ ಭೂಪೇಂದ್ರ ಪಟೇಲ್ಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ್ದವು. ವಿರೋಧ ಪಕ್ಷಗಳು ಈ ನಡೆಯನ್ನು ಪ್ರಶ್ನೆ ಮಾಡಿದ್ದವು. ಈ ಚುನಾವಣೆ ಅವರಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಸಿಕ್ಕ ಅವಕಾಶವಾಗಿದೆ.
ಬಿಜೆಪಿ ಅಭ್ಯರ್ಥಿ ಹಾರ್ದಿಕ್ ಪಟೇಲ್
ಗುಜರಾತ್ನಲ್ಲಿ ಬಿಜೆಪಿ ಸರ್ಕಾರದ ವಿರುದ್ಧವೇ ಪಾಟಿದಾರ್ ಸಮುದಾಯಕ್ಕೆ ಮೀಸಲಾತಿಗಾಗಿ ಭಾರಿ ಹೋರಾಟ ಮಾಡುವ ಮೂಲಕ ಮುನ್ನಲೆಗೆ ಬಂದಿದ್ದ ಹಾರ್ದಿಕ್ ಪಟೇಲ್, ಇಂದು ಅದೇ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. 2022ರ ಆರಂಭದಲ್ಲಿ ಕಾಂಗ್ರೆಸ್ ತೊರೆದಿದ್ದ ಹಾರ್ದಿಕ್ ಪಟೇಲ್ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅವರು ವಿರಾಮಗಾಮ್ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದು, ಎದುರಾಳಿಗಳಾಗಿ ಕಾಂಗ್ರೆಸ್ನ ಲಾಖಾ ಭಾರವಾಡ್ (ಹಾಲಿ ಶಾಸಕ) ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಅಮರಸಿಂಹ ಠಾಕೋರ್ ಇದ್ದಾರೆ.

ಆಪ್ ಸಿಎಂ ಅಭ್ಯರ್ಥಿ ಇಸುದನ್ ಗಧ್ವಿ
ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಇಸುದುನ್ ಗಧ್ವಿ ದ್ವಾರಕಾ ಜಿಲ್ಲೆಯ ಖಂಭಾಲಿಯಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ 20 ಸ್ಥಾನಗಳು ಬರುವುದಿಲ್ಲೆ ಎಂದು ಹೇಳಿದ್ದರು, ಇಸುದುನ್ ಗಧ್ವಿ ಮಾತ್ರ ತಮ್ಮ ಪಕ್ಷ 100 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು.
ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿರುವ ಜಿಗ್ನೇಶ್ ಮೇವಾನಿ
ಕಾಂಗ್ರೆಸ್ನ ಭದ್ರಕೋಟೆಯಾದ ವಡ್ಗಾಮ್ ಕ್ಷೇತ್ರದಿಂದ ಜಿಗ್ನೇಶ್ ಮೇವಾನಿ ಕಣಕ್ಕಿಳಿದಿದ್ದಾರೆ. ಬಿಜೆಪಿ ಕಟು ಟೀಕಾಕಾರ ಎಂದೇ ಗುರುತಿಸಿಕೊಂಡಿರುವ ಜಿಗ್ನೇಶ್ ಮೇವಾನಿಗೆ ಬಿಜೆಪಿ ಅಭ್ಯರ್ಥಿ ಮಣಿಭಾಯ್ ವಘೇಲಾ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ. ಎಎಪಿಯ ದಲ್ಪತ್ ಭಾಟಿಯಾ ಕೂಡ ಇಲ್ಲಿ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಇದೆ.

ಗುಜರಾತ್ ಎಎಪಿ ಮುಖ್ಯಸ್ಥ ಗೋಪಾಲ್ ಇಟಾಲಿಯಾ
ಗುಜರಾತ್ ರಾಜ್ಯದ ಎಎಪಿ ಮುಖ್ಯಸ್ಥ ಗೋಪಾಲ್ ಇಟಾಲಿಯಾ, ಸೂರತ್ ಜಿಲ್ಲೆಯ ಕಟರ್ಗಾಮ್ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರ ತಾಯಿಯನ್ನು ಭೇಟಿ ಮಾಡಿದ್ದನ್ನು ತೀವ್ರವಾಗಿ ಟೀಕಿಸುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. ಆದರೆ, ಪಕ್ಷದ ನಾಯಕ ಕೇಜ್ರಿವಾಲ್ ಇದನ್ನು ತಳ್ಳಿಹಾಕಿದ್ದರು. ಚುನಾವಣೆಗೆ ಮೊದಲು ಗೋಪಾಲ್ರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಬಿಜೆಪಿ ಭದ್ರಕೋಟೆಯಲ್ಲಿ ಆಮ್ ಆದ್ಮಿ ಪಕ್ಷದ ಬಾವುಟವನ್ನು ನೆಡಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ.
ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ
ಖ್ಯಾತ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಜಾಮ್ನಗರ ಉತ್ತರ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿ ಪಕ್ಷದಿಂದ ಅವಕಾಶ ನೀಡಲು ಹಾಲಿ ಶಾಸಕ ಧರ್ಮೇಂದ್ರ ಸಿಂಗ್ ಅವರಿಗೆ ಟಿಕೆಟ್ ನಿರಾಕರಿಸಿತ್ತು. ಇನ್ನೂ ಕುತೂಹಲಕಾರಿ ವಿಚಾರವೆಂದರೆ ಇದೇ ಕ್ಷೇತ್ರದಲ್ಲಿ ರವೀಂದ್ರ ಜಡೇಜಾ ಸಹೋದರಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಿದ್ದರು.












Click it and Unblock the Notifications