ಗುಜರಾತ್ ಚುನಾವಣೆ 2022: ಎಎಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ
ಗುಜರಾತ್ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಪ್ ಆಡಳಿತಾರೂಢ ಬಿಜೆಪಿ ಸೋಲಿಸಲು ಹರ ಸಾಹಸ ಮಾಡುತ್ತಿದೆ.
ದೆಹಲಿ ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸೇರಿದಂತೆ ಪಕ್ಷದ ದೊಡ್ಡ ಹೆಸರುಗಳು ಪಕ್ಷದ ಸ್ಟಾರ್ ಪ್ರಚಾರಕರಲ್ಲಿ ಸೇರಿದ್ದಾರೆ.
ಎಎಪಿ ಸಂಸದರಾದ ಸಂಜಯ್ ಸಿಂಗ್ ಮತ್ತು ರಾಘವ್ ಚಡ್ಡಾ ಕೂಡ ಗುಜರಾತ್ಗೆ 20-ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಎಎಪಿ ಗುಜರಾತ್ ಪ್ರವೇಶಿಲು ಭರ್ಜರಿ ತಯಾರಿ ನಡೆಸುತ್ತಿದೆ. ಮಾಜಿ ಕ್ರಿಕೆಟಿಗ ಮತ್ತು ಪಂಜಾಬ್ನ ರಾಜ್ಯಸಭಾ ಸಂಸದ ಹರ್ಭಜನ್ ಸಿಂಗ್ ಕೂಡ ಸ್ಟಾರ್ ಪ್ರಚಾರಕರಾಗಿ ಗುಜರಾತ್ನಲ್ಲಿ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಮತ್ತು ಗುಜರಾತ್ನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ಕೂಡ ಪಟ್ಟಿಯಲ್ಲಿದ್ದಾರೆ.

ಎಎಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ
ಇವರಲ್ಲದೆ ಅಲ್ಪೇಶ್ ಕಥಿರಿಯಾ, ಯುವರಾಜ್ ಜಡೇಜಾ, ಮನೋಜ್ ಸೊರಥಿಯಾ, ಜಗ್ಮಲ್ ವಾಲಾ, ರಾಜು ಸೋಲಂಕಿ, ಪ್ರವೀಣ್ ರಾಮ್, ಗೌರಿ ದೇಸಾಯಿ, ಮಾಥುರ್ ಬಲ್ದನಿಯಾ, ಅಜಿತ್ ಲೋಕಿಲ್, ರಾಕೇಶ್ ಹೀರಾಪರಾ, ಬಲ್ಜಿಂದರ್ ಕೌರ್, ಅನ್ಮೋಲ್ ಗಗನ್ ಮಾನ್ ಸೇರಿದಂತೆ ಇತರರು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ಪಂಜಾಬ್ ಸರ್ಕಾರದ ಇಬ್ಬರು ಮಹಿಳಾ ಸಚಿವರಾದ ಬಲ್ಜಿಂದರ್ ಕೌರ್ ಮತ್ತು ಅನ್ಮೋಲ್ ಗಗನ್ ಮಾನ್ ಅವರ ಹೆಸರೂ ಇದೆ. ಮಂಗಳವಾರ ಎಎಪಿ ಗುಜರಾತ್ ವಿಧಾನಸಭೆ ಚುನಾವಣೆಗೆ 20 ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದುವರೆಗೆ ಆಮ್ ಆದ್ಮಿ ಪಕ್ಷ ಗುಜರಾತ್ಗೆ 73 ಅಭ್ಯರ್ಥಿಗಳನ್ನು ಘೋಷಿಸಿದೆ.

ಇಸುದನ್ ಗಧ್ವಿ ಗುಜರಾತ್ನ ಮುಂದಿನ ಸಿಎಂ ಅಭ್ಯರ್ಥಿ
ಇದಕ್ಕೂ ಮುನ್ನ ನವೆಂಬರ್ 4 ರಂದು ಎಎಪಿ ಸರ್ಕಾರವು ಪಕ್ಷದ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಇಸುದನ್ ಗಧ್ವಿ ಅವರನ್ನು ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತು. ಕ್ರೌಡ್ಸೋರ್ಸಿಂಗ್ ಅಭಿಯಾನದ ನಂತರ ಪಕ್ಷವು ಈ ಘೋಷಣೆಯನ್ನು ಮಾಡಿದೆ. ಗುಜರಾತ್ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಅಭಿಯಾನವನ್ನು ಎಎಪಿ ಪ್ರಾರಂಭಿಸಿತ್ತು. ಇದರ ಅಡಿಯಲ್ಲಿ ರಾಜ್ಯದ ಜನರು ನವೆಂಬರ್ 3 ರ ಸಂಜೆ 5 ಗಂಟೆಯವರೆಗೆ ಪಕ್ಷವು ಹಂಚಿಕೊಂಡ ಸಂಖ್ಯೆ ಮತ್ತು ಇಮೇಲ್ ಐಡಿಗೆ ತಮ್ಮ ಅಭಿಪ್ರಾಯವನ್ನು ನೀಡಿದರು. ಇದರಲ್ಲಿ ಹಲವಾರು ಜನ ಇಸುದನ್ ಗಧ್ವಿ ಅವರ ಹೆಸರನ್ನು ಸೂಚಿಸಿದ್ದರು. ಹೀಗಾಗಿ ಪಕ್ಷ ಇಸುದನ್ ಗಧ್ವಿ ಅವರನ್ನೇ ಗುಜರಾತ್ನ ಮುಂದಿನ ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ.

ಪಂಜಾಬ್ ತಂತ್ರ ಗುಜರಾತ್ನಲ್ಲಿ ಬಳಕೆ ಮಾಡಿದ ಎಎಪಿ
ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಯಾರನ್ನು ಆಯ್ಕೆಯಾಗಬೇಕು ಎಂದು ಜನರನ್ನು ಕೇಳುವ ಅಭಿಯಾನವನ್ನು ಅಕ್ಟೋಬರ್ 29 ರಂದು ಪ್ರಾರಂಭಿಸಿದರು. ಪಂಜಾಬ್ನಲ್ಲಿ ಅಸೆಂಬ್ಲಿ ಚುನಾವಣೆಗೂ ಇದೇ ಅಸ್ತ್ರವನ್ನು ಎಎಪಿ ಬಳಕೆ ಮಾಡಿತ್ತು. ಎಎಪಿ ಸಮೀಕ್ಷೆಯನ್ನು ನಡೆಸಿತ್ತು. ಇದರಲ್ಲಿ ಭಗವಂತ್ ಮಾನ್ ಸ್ಪಷ್ಟ ಜನಪ್ರಿಯ ಸಿಎಂ ಆಗಿ ಆಯ್ಕೆಯಾಗಿದ್ದರು. ಮಾನ್ ರಾಜ್ಯದ ಮುಖ್ಯಮಂತ್ರಿಯಾದರು.

ಡಿಸೆಂಬರ್ 8 ಮತ ಎಣಿಕೆ
ಗುರುವಾರ ಚುನಾವಣಾ ಆಯೋಗ ಗುಜರಾತ್ನಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿತ್ತು. ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆಗಳು ನಡೆಯಲಿದ್ದು, ಡಿಸೆಂಬರ್ 8 ರಂದು ಹಿಮಾಚಲ ಪ್ರದೇಶದ ಫಲಿತಾಂಶದ ದಿನಾಂಕದೊಂದಿಗೆ ಮತ ಎಣಿಕೆ ನಡೆಯಲಿದೆ.












Click it and Unblock the Notifications