ಚುನಾವಣಾ ಆಯೋಗದ ಮೇಲೆ ಬಿಜೆಪಿ ಒತ್ತಡ – ಕಾಂಗ್ರೆಸ್ ಟೀಕೆ
ನವದೆಹಲಿ, ಅಕ್ಟೋಬರ್ 13: ಗುರುವಾರ ಹಿಮಾಚಲ ಪ್ರದೇಶದ ಜತೆಗೆ ಗುಜರಾತ್ ವಿಧಾನಸಭೆ ಚುನಾವಣೆಗೂ ದಿನಾಂಕ ಘೋಷಣೆಯಾಗಲಿದೆ ಎಂದು ಕಾದಿದ್ದವರಿಗೆ ನಿರಾಸೆಯಾಗಿದೆ. ಮುಖ್ಯ ಚುನಾವಣಾ ಆಯುಕ್ತ ಅಚಲ್ ಕುಮಾರ್ ಜ್ಯೋತಿ ಗುರುವಾರ ಕೇವಲ ಹಿಮಾಚಲ ಪ್ರದೇಶ ಚುನಾವಣೆಯ ದಿನಾಂಕ ಘೋಷಣೆ ಮಾಡಿದ್ದಾರೆ.
ಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಪ್ರಕಟ
ಮತದಾನ ನವೆಂಬರ್ 9ರಂದು ನಡೆಯಲಿದ್ದರೆ ಫಲಿತಾಂಶ ಡಿಸೆಂಬರ್ 18ರಂದು ಪ್ರಕಟವಾಗಲಿದೆ. ಮತದಾನಕ್ಕೂ ಫಲಿತಾಂಶಕ್ಕೂ 40 ದಿನಗಳ ಅಂತರವಿದೆ. ಇದೇ ಅಂತರದಲ್ಲಿ ಗುಜರಾತ್ ಚುನಾವಣೆಯೂ ನಡೆಯಲಿದೆ ಎಂದು ಜ್ಯೋತಿ ಹೇಳಿದ್ದು, ದಿನಾಂಕವನ್ನ ಮಾತ್ರ ಘೋಷಣೆ ಮಾಡಿಲ್ಲ.
ಕೇವಲ ಹಿಮಾಚಲ ಪ್ರದೇಶ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮೋದಿ ಸರಕಾರ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಮೋದಿ ಸರಕಾರ ಬೇಕೆಂದೇ ಚುನಾವಣಾ ದಿನಾಂಕದ ಘೋಷಣೆಯನ್ನು ಮುಂದೂಡುವಂತೆ ಮಾಡಿದೆ ಎಂದು ಅದು ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ, "ಮೋದಿ ಸರಕಾರ ಹಿಮಾಚಲ ಪ್ರದೇಶದ ಜತೆ ಗುಜರಾತ್ ಚುನಾವಣೆಯ ದಿನಾಂಕ ಘೋಷಣೆ ಮಾಡದಂತೆ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರುತ್ತಿದೆ," ಎಂದು ಆರೋಪಿಸಿದ್ದಾರೆ.
ಅಕ್ಟೋಬರ್ 16ರಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನಲ್ಲಿ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಕಾರಣಕ್ಕೆ ಚುನಾವಣಾ ದಿನಾಂಕ ಘೋಷಣೆ ಮಾಡಿಲ್ಲ ಎಂದಿರುವ ಸುರ್ಜೇವಾಲ, "ಚುನಾವಣಾ ಆಯೋಗ ತಕ್ಷಣವೇ ಗುಜರಾತ್ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆ ಮಾಡಿ ನೀತಿ ಸಂಹಿತೆ ಜಾರಿಗೆ ತರಬೇಕು," ಎಂದು ಅವರು ಒತ್ತಾಯಿಸಿದ್ದಾರೆ.