ಗುಜರಾತ್ ಸೇತುವೆ ದುರಂತದ ಕುರಿತು ಸಿಬಿಐ ತನಿಖೆ ಇಲ್ಲವೇಕೆ: ಮಮತಾ ಪ್ರಶ್ನೆ
ಕೋಲ್ಕತ್ತ, ನವೆಂಬರ್ 2 : ಗುಜರಾತ್ನ ಮೊರ್ಬಿಯಲ್ಲಿ ಭಾನುವಾರ ತೂಗು ಸೇತುವೆ ಕುಸಿದ ಪರಿಣಾಮ 135 ಜನರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ನೂರಾರು ಜನರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಗಾಯಾಳುಗಳಿಗೆ ಸಾಂತ್ವನ ಹೇಳಿದ್ದಾರೆ.
ಗುಜರಾತ್ನಲ್ಲಿ ನಡೆದ ಪ್ರಕರಣವು ದೇಶದಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಈ ಘಟನೆಗೆ ಗುಜರಾತ್ ಸರ್ಕಾರ ಹಾಗೂ ಸ್ಥಳೀಯ ಆಡಳಿತದ ನಿರ್ಲಕ್ಷ್ಯವೇ ಕಾರಣವೆಂದು ವಿರೋಧ ಪಕ್ಷಗಳ ನಾಯಕರು ಹರಿಹಾಯ್ದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರೀ ಚರ್ಚೆ ನಡೆಯುತ್ತಿದೆ. ಗುಜರಾತ್ಗೆ ಮೋದಿ ಭೇಟಿ ನೀಡುವುದಕ್ಕೂ ಮೊದಲು 'ಗೋ ಬ್ಯಾಕ್ ಮೋದಿ' ಹ್ಯಾಶ್ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ.
ಕಳೆದ ವರ್ಷ ನಡೆದ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆಗೂ ಮುನ್ನ ಸೇತುವೆಯೊಂದು ಕುಸಿದ ಪರಿಣಾಮ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಮೋದಿ ಅವರು ತಮ್ಮ ಚುನಾವಣಾ ಪ್ರಚಾರದ ವೇಳೆ ಈ ಕುರಿತು ಮಾತನಾಡಿದ್ದರು. 'ಸೇತುವೆ ಕುಸಿತದ ಘಟನೆಯು ದೇವರಿಂದ ಬಂದ ಸಂದೇಶವಾಗಿದೆ. ಮಮತಾ ಸರ್ಕಾರವನ್ನು ಕಿತ್ತೊಗೆಯು ಸಮಯ ಬಂದಿದೆ' ಎಂದು ಮೋದಿ ಹೇಳಿದ್ದರು. ಪ್ರಕರಣವನ್ನು ರಾಜಕೀಯಗೊಳಿಸಲು ಮೋದಿ ಯತ್ನಿಸಿದ್ದರು. ಮೋದಿ ಅವರ ಚುನಾವಣಾ ಭಾಷಣದ ತುಣುಕು ಈಗ ವೈರಲ್ ಆಗಿದೆ. ಗುಜರಾತ್ ಚುನಾವಣೆಯು ಹತ್ತಿರದಲ್ಲಿ ಇರುವಾಗಿ ಮೊರ್ಬಿ ಘಟನೆ ನಡೆದಿರುವುದು ಬಿಜೆಪಿ ಸರ್ಕಾರವನ್ನು ಮುಜುಗರಕ್ಕೆ ಈಡು ಮಾಡಿದೆ.

ಮೊರ್ಬಿ ಪ್ರಕರಣದ ಕುರಿತು ಸಿಬಿಐ, ಇಡಿ ತನಿಖೆ ಏಕಿಲ್ಲ
ಗುಜರಾತ್ ಸೇತುವೆ ದುರಂತದ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ. ಮೊರ್ಬಿ ಪ್ರಕರಣದ ವಿಚಾರವಾಗಿ ಸಿಬಿಐ ಮತ್ತು ಇಡಿಯಂತಹ ಕೇಂದ್ರದ ತನಿಖಾ ಸಂಸ್ಥೆಗಳ ನಿಷ್ಕ್ರಿಯತೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಕೇಂದ್ರದ ತನಿಖಾ ಸಂಸ್ಥೆಗಳು ಸಾಮಾನ್ಯ ಜನರ ವಿರುದ್ಧ ಮಾತ್ರ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
'ಮೊರ್ಬಿ ಘಟನೆಯಲ್ಲಿ ಭಾಗಿಯಾಗಿರುವ ಅಪರಾಧಿಗಳ ವಿರುದ್ಧ ಸಿಬಿಐ ಮತ್ತು ಇಡಿ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ?ಕೇಂದ್ರ ಸಂಸ್ಥೆಗಳು ಸಾಮಾನ್ಯ ಜನರ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳುತ್ತಿವೆ. ಇದನ್ನು ಸರಿಪಡಿಸಬೇಕಿದೆ. ಗುಜರಾತ್ ಮೋದಿಯವರ ತವರು ರಾಜ್ಯ. ಹೀಗಾಗಿ, ಘಟನೆಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ' ಎಂದು ಟೀಕಿಸಿದ್ದಾರೆ. ಘಟನೆಯ ಕುರಿತು ನ್ಯಾಯಾಂಗ ಆಯೋಗ ತನಿಖೆ ನಡೆಸಬೇಕೆಂದು ಮಮತಾ ಕರೆ ನೀಡಿದ್ದಾರೆ.

ದುರಂತವನ್ನು ರಾಜಕೀಯಗೊಳಿಸಲು ಇಷ್ಟಪಡುವುದಿಲ್ಲ: ರಾಹುಲ್
ಪ್ರಸ್ತುತ ಭಾರತ್ ಜೋಡೊ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊರ್ಬಿ ದುರಂತದ ಕುರಿತು ಪ್ರತಿಕ್ರಿಯಿಸಿದ್ದರು. 'ಗುಜರಾತ್ನಲ್ಲಿ ನಡೆದ ಸೇತುವೆ ದುರಂತವು ಗಂಭೀರವಾದದ್ದು. ಈ ವಿಚಾರವನ್ನು ರಾಜಕೀಯಗೊಳಿಸಲು ನಾನು ಇಷ್ಟ ಪಡುವುದಿಲ್ಲ. ಒಂದು ವೇಳೆ ನಾನು ಹಾಗೆ ಮಾಡಿದರೆ, ಸತ್ತವರಿಗೆ ಅಪಮಾನ ಮಾಡಿದಂತೆ ಆಗುತ್ತದೆ' ಎಂದು ಹೇಳಿದ್ದರು.

ಗುತ್ತಿಗೆದಾರರು ಅರ್ಹತಾ ಪ್ರಮಾಣ ಪತ್ರವನ್ನೇ ಪಡಿದಿಲ್ಲ
ಗುಜರಾತ್ನ ಸೇತುವೆ ದುರಂತವು ಹಲವು ವಿಚಾರಗಳಿಗೆ ಸುದ್ದಿ ಮಾಡುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಸ್ಥಳೀಯ ಆಡಳಿತದ ನಿರ್ಲಕ್ಷ್ಯದ ಬಗ್ಗೆ ಮಾತನಾಡಿದ್ದಾರೆ. ಶತಮಾನಕ್ಕೂ ಹಳೆಯದಾದದ ತೂಗು ಸೇತುವೆಯನ್ನು ಮಾರ್ಚ್ನಿಂದ ದುರಸ್ತಿ ಮಾಡಲಾಗುತ್ತಿತ್ತು. ಅಕ್ಟೋಬರ್ 26ರಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತ ಮಾಡಲಾಗಿತ್ತು. ಆದರೆ, ಈ ಸೇತುವೆಯ ದುರಸ್ತಿ ಹಾಗೂ ನಿರ್ವಹಣೆಯ ಗುತ್ತಿಗೆ ಪಡೆದುಕೊಂಡಿದ್ದ ಒರೆವಾ ಕಂಪನಿಯು ಅರ್ಹತಾ ಪ್ರಮಾಣ ಪತ್ರವನ್ನೇ ತೆಗೆದುಕೊಂಡಿರಲಿಲ್ಲವೆಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications