ಕರ್ನಾಟಕದ ಮೇಲೆ ಗುಜರಾತ್ ಛಾಯೆ: ಹಿರಿಯರಿಗೆ ಕೊಕ್ ನೀಡಲಿದೆಯಾ ಬಿಜೆಪಿ?
ಬೆಂಗಳೂರು, ನ. 11: ಗುಜರಾತ್ ಚುನಾವಣೆಯಲ್ಲಿ ಈ ಬಾರಿಯ ಬಿಜೆಪಿ ನಡೆ ಮುಂದಿನ ಕರ್ನಾಟಕ ಚುನಾವಣೆಯ ಮೇಲೆ ಬೇರೆಯದೇ ಪ್ರಭಾವ ಬೀರುವ ಬಗ್ಗೆ ಭಾರಿ ಚರ್ಚೆ ಹುಟ್ಟು ಹಾಕುತ್ತಿದೆ. ಗುಜರಾತ್ ಚುನಾವಣೆಗೆ ಬಿಜೆಪಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಹಿರಿಯರನ್ನು ಬಿಟ್ಟು ಕಿರಿಯರಿಗೆ ಮನ್ನಣೆ ನೀಡಿ ಹೊಸ ಅಧ್ಯಾಯಕ್ಕೆ ಬಿಜೆಪಿ ಮುನ್ನುಡಿ ಬರೆದಿದೆ.
ಮಾಜಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಮಾಜಿ ಮಂತ್ರಿಗಳು ಮತ್ತು ಹಿರಿಯ ನಾಯಕರನ್ನು ಚುನಾವಣಾ ಪಟ್ಟಿಯಿಂದ ಹೊರಗಿಟ್ಟಿದೆ. ಕೆಲ ನಾಯಕರೇ ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದರು. ಇನ್ನು ಕೆಲವರು ಬಂಡಾಯ ಎದ್ದಿದ್ದಾರೆ.
ಗುಜರಾತ್: ಜನರ ಜೀವ ಉಳಿಸಲು ನದಿಗೆ ಹಾರಿದ್ದ ಮಾಜಿ ಶಾಸಕನಿಗೆ ಬಿಜೆಪಿ ಟಿಕೆಟ್
ಇದು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಭಾರಿ ಪರಿಣಾಮ ಬೀರುವ ಬಗ್ಗೆ ಚರ್ಚೆಯಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ ಟ್ವೀಟ್ ಮಾಡಿದ್ದಾರೆ.
ತಮ್ಮ ಪಕ್ಷದ ಹಿರಿಯ ನಾಯಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸದೆ ಯುವಕರಿಗೆ ದಾರಿ ಮಾಡಿಕೊಡುವಂತೆ ಲೆಹರ್ ಸಿಂಗ್ ಸಿರೋಯಾ ಮನವಿ ಮಾಡಿಕೊಂಡಿದ್ದಾರೆ.
ಹಿರಿಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಕೊಕ್?
ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಟ್ವೀಟ್ ಮಾಡಿರುವ ಲೆಹರ್ ಸಿಂಗ್ ಸಿರೋಯಾ, ಗುಜರಾತ್ ಚುನಾವಣೆಯಲ್ಲಿ ಅಳವಡಿಸಿಕೊಂಡ ಅಭ್ಯಾಸವನ್ನು ಅನುಸರಿಸುವಂತೆ ಪಕ್ಷದ ನಾಯಕರನ್ನು ಕೇಳಿದ್ದಾರೆ.
"ಗುಜರಾತ್ನಲ್ಲಿ ಏನಾಯಿತು ಎಂಬುದು ಕರ್ನಾಟಕದಲ್ಲಿಯೂ ಮಾದರಿಯಾಗಬೇಕು. ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ, ಮಾಜಿ ಉಪ ಮುಖ್ಯಮಂತ್ರಿ ನಿತಿನ್ಭಾಯ್ ಪಟೇಲ್ ಹಾಗೂ ಮಾಜಿ ಸಚಿವರಾದ ಭೂಪೇಂದ್ರ ಸಿನ್ಹಾ ಮತ್ತು ಪ್ರದೀಪ್ ಸಿನ್ಹಾ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.
ಹಿರಿಯ ನಾಯಕರು ಕಿರಿಯರಿಗೆ ದಾರಿ ಮಾಡಿಕೊಡಬೇಕು
"ರಾಜಕೀಯದಲ್ಲಿ ತಲೆಮಾರಿನ ಬದಲಾವಣೆಗಾಗಿ ಹಿರಿಯ ನಾಯಕರು ಯುವ ಪೀಳಿಗೆಗೆ ಅವಕಾಶ ನೀಡಬೇಕು. ಇದು ಎಲ್ಲಾ ಪಕ್ಷಗಳಲ್ಲೂ ನಡೆಯಬೇಕು. ಹಿರಿಯರು ಕಿರಿಯರರಿಗೆ ದಾರಿ ಮಾಡಿಕೊಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು" ಎಂದಿದ್ದಾರೆ.
"ಇನ್ನು ಕೆಲವೇ ತಿಂಗಳುಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಹಿರಿಯ ನಾಯಕರು ರಾಜ್ಯ ಮತ್ತು ರಾಷ್ಟ್ರದ ಹಿತಾಸಕ್ತಿಯಿಂದ ಕಿರಿಯರಿಗೆ ದಾರಿ ಮಾಡಿಕೊಡಬೇಕು" ಎಂದು ರಾಜ್ಯದ ಹಿರಿಯ ನಾಯಕರಿಗೆ ಸೂಚನೆ ನೀಡಿದ್ದಾರೆ.
ಟಿಕೆಟ್ ಕಳೆದುಕೊಳ್ಳಲಿದ್ದಾರಾ ಬಿ.ಎಸ್ ಯಡಿಯೂರಪ್ಪ?
ರಾಜ್ಯ ಬಿಜೆಪಿಯಲ್ಲಿ ಈಗ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಸಂತೋಷ್ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಎಸ್. ಈಶ್ವರಪ್ಪ ಅವರನ್ನು ಮತ್ತೆ ಸಚಿವರನ್ನಾಗಿಸುವ ಒತ್ತಡವಿದೆ. ಈ ಬೆನ್ನಲ್ಲೆ ಲೆಹರ್ ಸಿಂಗ್ ಸಿರೋಯಾ ಟ್ವೀಟ್ ಇವರುಗಳಿಗೆ ಸಂಬಂಧಿಸಿದೆಯೇ ಎಂಬ ಚರ್ಚೆಗೂ ಕಾರಣವಾಗಿದೆ.
ಬಿಜೆಪಿಯ ಹಿರಿಯ ನಾಯಕರು ಸ್ವತಃ ತಾವೇ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ನೀಡುತ್ತಾರೋ ಅಥವಾ ಹೈಕಮಾಂಡ್ ಟಿಕೆಟ್ ನೀಡದೇ ಬಿಟ್ಟು ಬಿಡುತ್ತದೆಯೋ ಕಾದು ನೋಡಬೇಕಿದೆ.
ಸಿರೋಯಾ ಟ್ವೀಟ್ ಬಿಜೆಪಿ ನಾಯಕರಿಗೆ ಮುನ್ಸೂಚನೆಯೇ?
ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ ಮಾಡಿರುವ ಈ ಟ್ವೀಟ್ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಯನ್ನಂತು ಹುಟ್ಟುಹಾಕಿದೆ. ಆದರೆ, ಅವರ ಟ್ವೀಟ್ಗೆ ಯಾಕಿಷ್ಟು ಮಹತ್ವ ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ.
ಲೆಹರ್ ಸಿಂಗ್ ಸಿರೋಯಾ ಅವರು ರಾಜಕೀಯದಲ್ಲಿ ಹೋರಾಟದ ದಿನಗಳಿಂದ ಮಾಜಿ ಮುಖ್ಯಮಂತ್ರಿ ಮತ್ತು ಲಿಂಗಾಯತ ಪ್ರಬಲ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದರು. ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಪ್ತರಾಗಿರುವ ಅವರ ಮಾತುಗಳು ಬಹಳ ಪರಿಣಾಮ ಬೀರಲಿವೆ ಎಂದು ಅಂದಾಜಿಸಲಾಗಿದೆ.
ಇನ್ನು, ಲೆಹರ್ ಸಿಂಗ್ ಯಾವುದೇ ನಾಯಕರನ್ನು ಹೆಸರಿಸದಿದ್ದರೂ, ಮಾಜಿ ಮುಖ್ಯಮಂತ್ರಿಗಳು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿರುವ ಅನೇಕ ಹಿರಿಯ ನಾಯಕರಿಗೆ ಇದು ದೊಡ್ಡ ಸುಳಿವು ನೀಡಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.