ಗಂಡಸರು ಉಳಿದಿಲ್ಲವೇ?: ಗುಜರಾತ್ ಚುನಾವಣೆಗೆ ನಿಂತ ಮಹಿಳೆಯರ ವಿರುದ್ಧ ಮುಸ್ಲಿಂ ಧರ್ಮಗುರು ಕೆಂಡ
ಅಹಮದಾಬಾದ್, ಡಿಸೆಂಬರ್ 5: ಮುಸ್ಲಿಂ ಮಹಿಳೆಯರನ್ನು ಚುನಾವಣೆಗೆ ಸ್ಪರ್ಧಿಸಲು ಆಯ್ಕೆ ಮಾಡುವವರು ಇಸ್ಲಾಂ ಧರ್ಮದ ವಿರುದ್ಧ ಇದ್ದಾರೆ ಎಂದು ಅಹಮದಾಬಾದ್ನ ಜಾಮಾ ಮಸೀದಿಯ ಮುಖ್ಯ ಧರ್ಮಗುರು ಹೇಳಿದ್ದಾರೆ.
ಗುಜರಾತ್ನಲ್ಲಿ ಇಂದು ಎರಡನೇ ಹಾಗೂ ಅಂತಿಮ ಹಂತದ ಮತದಾನ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಧರ್ಮಗುರು ಶಬ್ಬೀರ್ ಅಹ್ಮದ್ ಸಿದ್ದಿಕಿ, ಮುಸ್ಲಿಂ ಮಹಿಳೆಯರನ್ನು ಚುನಾವಣೆಗೆ ಸ್ಪರ್ಧಿಸಲು ಆಯ್ಕೆ ಮಾಡುವವರು ಇಸ್ಲಾಂ ಧರ್ಮದ ವಿರುದ್ಧ ಇದ್ದಾರೆ. ಅವರು ಧರ್ಮವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಸ್ತ್ರೀದ್ವೇಷದ ಈ ಹೇಳಿಕೆ ಎಲ್ಲಡೆ ಆಕ್ರೋಶವನ್ನು ಹುಟ್ಟುಹಾಕಿದೆ.

ಇಸ್ಲಾಂ ಧರ್ಮಗುರುವಿನಿಂದ ಸ್ತ್ರೀದ್ವೇಷದ ಮಾತು
ಸುದ್ದಿಸಂಸ್ಥೆ 'ಎಎನ್ಐ' ಜೊತೆ ಮಾತನಾಡಿರುವ ಶಬ್ಬೀರ್ ಅಹ್ಮದ್ ಸಿದ್ದಿಕಿ, 'ನೀವು ಇಸ್ಲಾಂ ಧರ್ಮದ ಬಗ್ಗೆ ಮಾತನಾಡಿದರೆ, ಈ ಧರ್ಮದಲ್ಲಿ ನಮಾಜ್ಗಿಂತ ಮುಖ್ಯವಾದುದು ಯಾವುದೂ ಇಲ್ಲ' ಎಂದು ಹೇಳಿದ್ದಾರೆ.
'ಇಲ್ಲಿ(ಮಸೀದಿ) ಯಾವುದೇ ಮಹಿಳೆ ನಮಾಜ್ ಓದುವುದನ್ನು ನೀವು ನೋಡಿದ್ದೀರಾ? ಇಸ್ಲಾಂ ಪ್ರಕಾರ, ಮಹಿಳೆಯರು ಎಲ್ಲರ ಮುಂದೆ ಬರುವುದು ಸರಿಯಲ್ಲ. ಒಂದು ವೇಳೆ, ಅವರು ಎಲ್ಲರ ಮುಂದೆ ಬರುವುದು ಸರಿ ಇದ್ದರೆ, ಅವರನ್ನು ಯಾರೂ ತಡೆಯುತ್ತಿರಲಿಲ್ಲ' ಎಂದು ಹೇಳಿದ್ದಾರೆ.
'ಮಹಿಳೆಯರಿಗೆ ಇಸ್ಲಾಂನಲ್ಲಿ ನಿರ್ದಿಷ್ಟ ಸ್ಥಾನವಿದೆ ಎಂಬ ಕಾರಣಕ್ಕಾಗಿ ಅವರು ನಮಾಜ್ ಓದಲು ಮಸೀದಿಗಳಿಗೆ ಬರುವುದನ್ನು ನಿಲ್ಲಿಸಲಾಗಿದೆ. ಅದಕ್ಕಾಗಿಯೇ, ಮುಸ್ಲಿಂ ಮಹಿಳೆಯರಿಗೆ ಚುನಾವಣಾ ಟಿಕೆಟ್ ನೀಡುವವರು ಇಸ್ಲಾಂ ವಿರುದ್ಧ ಬಂಡಾಯ ಎದ್ದವರು' ಎಂದು ಶಾಹಿ ಇಮಾಮ್ ತಿಳಿಸಿದ್ದಾರೆ.

ಗಂಡಸರು ಉಳಿದಿಲ್ಲವೇ? ಎಂದು ಪ್ರಶ್ನಿಸಿದ ಧರ್ಮಗುರು
'ಗುಜರಾತ್ ಚುನಾವಣೆಯಲ್ಲಿ ಮಹಿಳೆಯರಿಗೆ ಟಿಕೆಟ್ ಕೊಡಲಾಗಿದೆ. ಇಲ್ಲಿ ಪುರುಷರು ಉಳಿದಿಲ್ಲವೇ? ಈ ಬೆಳವಣಿಗೆ ನಮ್ಮ ಧರ್ಮವನ್ನು ದುರ್ಬಲಗೊಳಿಸುತ್ತದೆ' ಎಂದು ತಿಳಿಸಿದ್ದಾರೆ.
ಮಹಿಳೆಯರನ್ನು ಶಾಸಕರು ಮತ್ತು ಕೌನ್ಸಿಲರ್ಗಳನ್ನು ಮಾಡಿದರೆ, ನಾವು ಹಿಜಾಬ್ ಅನ್ನು ರಕ್ಷಿಸಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ. ಶಾಹಿ ಇಮಾಮ್ ಅವರು, ಕರ್ನಾಟಕದ ಹಿಜಾಬ್ ವಿವಾದವನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.
'ಚುನಾವಣೆ ನಿಂತವರು ಜನರ ಮನೆ-ಮನೆಗೆ ಭೇಟಿ ಮಾಡಬೇಕು. ಆದ್ದರಿಂದ, ಮಹಿಳೆಯರಿಗೆ ಟಿಕೆಟ್ ನೀಡಿರುವುದನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ. ಪುರುಷರಿಗೆ ಚುನಾವಣಾ ಟಿಕೆಟ್ ನೀಡಬೇಕೆಂಬುದು ನನ್ನ ಒತ್ತಾಯವಾಗಿದೆ' ಎಂದು ಇಮಾಮ್ ಹೇಳಿದ್ದಾರೆ.
ಶಾಹಿ ಇಮಾಮ್ ಹೇಳಿಕೆಗಳಲ್ಲಿ ಲಿಂಗಭೇದ ಹಾಗೂ ಪುರುಷ ಪ್ರಧಾನ ಸಮಾಜದ ಮೌಡ್ಯಗಳಿವೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಗುಜರಾತ್ನಲ್ಲಿ ಇಂದು ಎರಡನೇ ಹಂತದ ಮತದಾನ
ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್ ಚುನಾವಣೆಗೆ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. ಬಿಜೆಪಿ ಮತ್ತು ಎಎಪಿ ಉತ್ತರ ಹಾಗೂ ಮಧ್ಯ ಗುಜರಾತ್ನ ಎಲ್ಲಾ 93 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ 90 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇತರ ಮೂರು ಕ್ಷೇತ್ರಗಳಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಎರಡನೇ ಹಾಗೂ ಅಂತಿಮ ಹಂತದ ಚುನಾವಣೆಯಲ್ಲಿ ಒಟ್ಟು 285 ಸ್ವತಂತ್ರ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ.

ಎರಡನೇ ಹಂತದ ಚುನಾವಣೆಯಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಗುಜರಾತ್ನ ಎರಡನೇ ಹಾಗೂ ಅಂತಿಮ ಹಂತದ ಚುನಾವಣೆಯಲ್ಲಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳ ಪೈಕಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಬಿಜೆಪಿ ಪ್ರಮುಖ ನಾಯಕ ಹೃಷಿಕೇಶ್ ಪಟೇಲ್, ಬಿಜೆಪಿಯ ಯುವ ನಾಯಕರಾದ ಹಾರ್ದಿಕ್ ಪಟೇಲ್ ಮತ್ತು ಅಲ್ಪೇಶ್ ಠಾಕೋರ್ ಕಣದಲ್ಲಿದ್ದಾರೆ.
ಕಾಂಗ್ರೆಸ್ ಪ್ರಮುಖ ನಾಯಕರಾದ ಸುಖರಾಮ್ ರಥಾವ್ ಹಾಗೂ ಯುವ ಮುಖಂಡ ಜಿಗ್ನೇಶ್ ಮೇವಾನಿ ಸ್ಪರ್ಧಿಸುತ್ತಿದ್ದಾರೆ. ಆದ್ಮ ಆದ್ಮಿ ಪಕ್ಷದ ಪ್ರಮುಖ ನಾಯಕರಾದ ಭರತ್ ಸಿಂಗ್ ವಖಾಲಾ ಮತ್ತು ಭೇಮಾ ಭಾಯಿ ಚೌಧರಿ ಅವರು ಕಣದಲ್ಲಿದ್ದಾರೆ.
ಡಿಸೆಂಬರ್ 8ರಂದು ಗುಜರಾತ್ ಚುನಾವಣಾ ಫಲಿತಾಂಶ ಹೊರಬೀಳಲಿದೆ.












Click it and Unblock the Notifications