ಟಿಕೆಟ್ ನಿರಾಕರಣೆ:ಮಾಜಿ ಸಚಿವರ ಮೇಲೆ ಮಸಿ ಎರಚಿದ ಕಾಂಗ್ರೆಸ್ ಕಾರ್ಯಕರ್ತ
ಅಹಮದಾಬಾದ್, ನ.07: ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ತನ್ನ ತಂದೆಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಅಸಮಾಧಾನಗೊಂಡ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಪಕ್ಷದ ಹಿರಿಯ ನಾಯಕರ ಮೇಲೆ ಮಸಿ ಎರಚಿರುವ ಘಟನೆ ನಡೆದಿದೆ.
ಇದರಿಂದ ಟಿಕೆಟ್ ಹಂಚಿಕೆಯಾದ ಬೆನ್ನಲ್ಲೆ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿರುವುದು ಕಂಡು ಬಂದಿದೆ. ಹಿಮಾಚಲ ಪ್ರದೇಶದಲ್ಲಿಯೂ ಕಾಂಗ್ರೆಸ್ ಟಿಕೆಟ್ ಹಂಚಿಕೆಯಾದ ನಂತರ ಅಸಮಾಧಾನದ ಮಾತುಗಳು ಕೇಳಿ ಬಂದಿದ್ದವು.
ಗುಜರಾತ್ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬುಡಕಟ್ಟು ಪಕ್ಷ
ಪಕ್ಷದ ಕೇಂದ್ರ ಕಚೇರಿಯ ಹೊರಗೆ ಹಿರಿಯ ನಾಯಕ ಮತ್ತು ಕೇಂದ್ರ ಸರ್ಕಾರದ ಮಾಜಿ ಸಚಿವ ಭರತ್ ಸಿಂಗ್ ಸೋಲಂಕಿ ಅವರ ಮೇಲೆ ಕಾರ್ಯಕರ್ತ ಕಪ್ಪು ಮಸಿ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಜಿ ಸಚಿವ ಭರತ್ ಸಿಂಗ್ ಸೋಲಂಕಿ ಅವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ನಂತರ ಕಾಂಗ್ರೆಸ್ ಪ್ರಧಾನ ಕಚೇರಿಯಾದ 'ರಾಜೀವ್ ಭವನ'ದಿಂದ ಹೊರಡುತ್ತಿದ್ದರು. ಈ ವೇಳೆ ಘಟನೆ ಸಂಭವಿಸಿದೆ. ಮಸಿ ಎಸೆದಿರುವುದಿರಂದ ಅವರ ಬಟ್ಟೆಗಳು ಕಲೆಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕರ ಮೇಲೆ ಮಸಿ ಎಸೆತ
ಮಾಜಿ ಸಚಿವ ಭರತ್ ಸಿಂಗ್ ಸೋಲಂಕಿ ಮೇಲೆ ಕಪ್ಪು ಮಸಿ ಎಸೆದ ವ್ಯಕ್ತಿ ಕೂಡ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ಅವರ ತಂದೆಗೆ ಎಲ್ಲಿಸ್ಬ್ರಿಡ್ಜ್ ವಿಧಾನಸಭಾ ಸ್ಥಾನದಿಂದ (ಅಹಮದಾಬಾದ್ನಲ್ಲಿ) ಟಿಕೆಟ್ ನಿರಾಕರಿಸಿದ್ದರಿಂದ ಅಸಮಾಧಾನ ಹೊಂದಿದ್ದರು ಎಂದು ಎಲ್ಲಿಸ್ಬ್ರಿಡ್ಜ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಿ ಜಿ ಚೆಟಾರಿಯಾ ಹೇಳಿದ್ದಾರೆ.
"ಸ್ಥಳದಲ್ಲಿದ್ದ ಪೊಲೀಸರು ಮಸಿ ಎರಚಿದ ಕಾಂಗ್ರೆಸ್ ಕಾರ್ಯಕರ್ತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಸೋಲಂಕಿ ಅವರ ಮೇಲೆ ಮಸಿ ಎಸೆದ ವ್ಯಕ್ತಿ ತನ್ನ ಪಕ್ಷಕ್ಕೆ ಸೇರಿದವರು ಎಂದು ದೂರು ದಾಖಲಿಸಿಲ್ಲ" ಎಂದು ಇನ್ಸ್ಪೆಕ್ಟರ್ ಚೆಟಾರಿಯಾ ತಿಳಿಸಿದ್ದಾರೆ.
ತಂದೆಗೆ ಸಿಗದ ಟಿಕೆಟ್, ಮಸಿ ಎರಚಿದ ಮಗ
ಮಾಜಿ ಸಚಿವರ ಮೇಲೆ ಮಸಿ ಎರಚಿದ ಪಕ್ಷದ ಕಾರ್ಯಕರ್ತ ರೋಮಿನ್ ಸುತಾರ್ ಅವರ ಹೇಳಿಕೆಯಂತೆ, "ತಮ್ಮ ತಂದೆ ರಶ್ಮಿಕಾಂತ್ ಸುತಾರ್ ಅವರಿಗೆ ಎಲ್ಲಿಸ್ಬ್ರಿಡ್ಜ್ ವಿಧಾನಸಭಾ ಕ್ಷೇತ್ರದ ಟಿಕೆಟ್ ನಿರಾಕರಿಸಲಾಗಿದೆ. ಇದರಿಂದ ತಾನು ಅಸಮಾಧಾನಗೊಂಡಿದ್ದೇನೆ" ಎಂದು ಹೇಳಿದ್ದಾರೆ. ಘಟನೆ ನಂತರ ರೋಮಿನ್ ಸುತಾರ್ಗೆ ಸ್ಥಳದಿಂದ ಹೋಗಲು ಅವಕಾಶ ನೀಡಲಾಯಿತು.
ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಹಿರಿಯ ನಾಯಕ ಸೋಲಂಕಿ ಅವರು ಕಾಂಗ್ರೆಸ್ ಕಚೇರಿಯಿಂದ ಹೊರಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪಕ್ಷದ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.
ಎಲ್ಲಿಸ್ಬ್ರಿಡ್ಜ್ ಕ್ಷೇತ್ರದಿಂದ ಭಿಖು ದವೆಗೆ ಕಾಂಗ್ರೆಸ್ ಟಿಕೆಟ್
ಭರತ್ ಸಿಂಗ್ ಸೋಲಂಕಿ ಅವರು ಆನಂದ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸತ್ತಿನ ಸದಸ್ಯರಾಗಿದ್ದರು. 2015 ಮತ್ತು 2018 ರ ನಡುವೆ ಗುಜರಾತ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರದಲ್ಲಿ ಅವರು ವಿದ್ಯುತ್, ರೈಲ್ವೆ, ಕುಡಿಯುವ ನೀರು ಮತ್ತು ನೈರ್ಮಲ್ಯದ ರಾಜ್ಯ ಸಚಿವರಾಗಿದ್ದರು.
ಪಕ್ಷವು ಅಹಮದಾಬಾದ್ ನಗರದ ಎಲ್ಲಿಸ್ಬ್ರಿಡ್ಜ್ ಕ್ಷೇತ್ರದಿಂದ ಭಿಖು ದವೆ ಅವರನ್ನು ಕಣಕ್ಕಿಳಿಸಿದೆ. 2017ರ ಚುನಾವಣೆಯಲ್ಲಿ ಬಿಜೆಪಿಯ ರಾಜೇಶ್ ಶಾ ಈ ಕ್ಷೇತ್ರವನ್ನು ಗೆದ್ದಿದ್ದರು.
43 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್
ನವೆಂಬರ್ 4 ರಂದು, ಪ್ರತಿಪಕ್ಷ ಕಾಂಗ್ರೆಸ್ ಗುಜರಾತ್ ವಿಧಾನಸಭಾ ಚುನಾವಣೆಗೆ 43 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿತು. ಪೋರಬಂದರ್ನಿಂದ ಗುಜರಾತ್ ಕಾಂಗ್ರೆಸ್ನ ಮಾಜಿ ಮುಖ್ಯಸ್ಥ ಅರ್ಜುನ್ ಮೊದ್ವಾಡಿಯಾ, ಗಾಂಧಿನಗರ ದಕ್ಷಿಣದಿಂದ ಹಿಮಾಂಶು ಪಟೇಲ್, ರಾಜ್ಕೋಟ್ ದಕ್ಷಿಣದಿಂದ ಹಿತೇಶ್ಭಾಯ್ ವೋರಾ ಅನ್ನು ಆಯ್ಕೆ ಮಾಡಲಾಗಿದೆ.
ಗುಜರಾತ್ ವಿಧಾನಸಭೆಯ 182 ಸ್ಥಾನಗಳಿಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.