ಗುಜರಾತ್ ಚುನಾವಣೆ: ಮಲ್ಲಿಕಾರ್ಜುನ ಖರ್ಗೆಯ 'ರಾವಣ' ಹೇಳಿಕೆಗೆ ಮೋದಿ ತಿರುಗೇಟು
ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಬಿರುಸಿನ ಪ್ರಚಾರ ಶುರುವಾಗಿದೆ. ಒಟ್ಟು 182 ವಿಧಾನಸಭಾ ಚುನಾವಣಾ ಕ್ಷೇತ್ರಗಳ ಪೈಕಿ 89 ಸ್ಥಾನಗಳಿಗೆ ಇಂದು (ಡಿ.1) ಮೊದಲನೇ ಹಂತದ ಮತದಾನ ನಡೆಯುತ್ತಿದೆ. 93 ಸ್ಥಾನಗಳಿಗೆ ಡಿಸೆಂಬರ್ 5ಕ್ಕೆ ಎರಡನೇ ಹಂತದ ಮತದಾನ ನಡೆಯಲಿದೆ.
ಪ್ರತಿಷ್ಠೆಯ ಪ್ರಶ್ನೆಯಾಗಿರುವ ಗುಜರಾತ್ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದ್ದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದೆ. ಇಂದು ಗುಜರಾತ್ನಲ್ಲಿ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು "ರಾವಣ" ಹೇಳಿಕೆಗೆ ತಿರುಗೇಟು ನೀಡಿದರು. "ರಾಮಭಕ್ತರ (ರಾಮ ಭಕ್ತರ) ನಾಡಿನಲ್ಲಿ ಯಾರನ್ನಾದರೂ 'ರಾವಣ' ಎಂದು ಕರೆಯುವುದು ಸರಿಯಲ್ಲ'' ಎಂದು ಅವರು ದೊಡ್ಡ ಸಭೆಯನ್ನುದ್ದೇಶಿಸಿ ಪ್ರತಿಕ್ರಿಯಿಸಿದರು.
ಗುಜರಾತ್ ಕಲೋಲ್ನ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗಿಯಾಗಿರುವ ಮೋದಿ, 'ಮೋದಿಯನ್ನು ಯಾರು ಹೆಚ್ಚು ಅವಮಾನಿಸುತ್ತಾರೆ, ಯಾರು ದೊಡ್ಡ ಪದಗಳನ್ನು ಬಳಸುತ್ತಾರೆ'' ಎಂದು ಕಾಂಗ್ರೆಸ್ನಲ್ಲಿ ಪೈಪೋಟಿ ಇದೆ ಎಂದು ಮೋದಿ ಕಾಂಗ್ರೆಸ್ಗೆ ಕುಟುಕಿದರು.
"ಗುಜರಾತ್ ನನಗೆ ನೀಡಿದ ಶಕ್ತಿ ಕಾಂಗ್ರೆಸ್ಗೆ ತೊಂದರೆಯಾಗಿದೆ. ಕೆಲವು ದಿನಗಳ ಹಿಂದೆ, ಕಾಂಗ್ರೆಸ್ ನಾಯಕರೊಬ್ಬರು ಮೋದಿ ಸಾಯುತ್ತಾರೆ ಎಂದು ಹೇಳಿದರು. ಇನ್ನೊಬ್ಬರು ಮೋದಿ ಹಿಟ್ಲರ್ ಸಾಯುತ್ತಾರೆ ಎಂದು ಹೇಳಿದರು. ಇನ್ನೊಬ್ಬರು ನನಗೆ ಅವಕಾಶ ಸಿಕ್ಕರೆ ಮೋದಿಯನ್ನು ನಾನೇ ಕೊಲ್ಲುತ್ತೇನೆ ಎಂದು ಹೇಳಿದರು. ಮತ್ತಿನ್ಯಾರೋ ರಾವಣ ಎಂದು ಹೇಳಿದರು. ಯಾರೋ ರಾಕ್ಷಸ ಎಂದು ಹೇಳಿದರು. ಜಿರಳೆ ಎಂದು ಕರೆದರು. ಇಂತಹ ಪದಗಳನ್ನು ಬಳಸಿದರೂ ಕಾಂಗ್ರೆಸ್ ಎಂದಿಗೂ ಪಶ್ಚಾತ್ತಾಪ ಪಡುವುದಿಲ್ಲ. ಈ ದೇಶದ ಪ್ರಧಾನಿ ಮೋದಿಯನ್ನು ಅವಮಾನಿಸುವುದು ಅವರ ಹಕ್ಕು ಎಂದು ಕಾಂಗ್ರೆಸ್ ಭಾವಿಸುತ್ತದೆ" ಎಂದು ಹೇಳಿದ್ದಾರೆ.
ಪ್ರತಿ ಚುನಾವಣೆಗೂ ಮೋದಿ ಮೇಲೆ ಬಿಜೆಪಿ ಹೆಚ್ಚು ಅವಲಂಬಿತವಾಗಿರುವುದಕ್ಕೆ ಕಾಂಗ್ರೆಸ್ ನೂತನ ಅದ್ಯಕ್ಷರು ಟೀಕೆ ಮಾಡಿದ್ದಾರೆ. ಈ ವಾರದ ಆರಂಭದಲ್ಲಿ ಗುಜರಾತ್ನ ಅಹಮದಾಬಾದ್ನ ಬೆಹ್ರಾಮ್ಪುರದಲ್ಲಿ ಸೋಮವಾರ ರಾತ್ರಿ ಸಾರ್ವಜನಿಕ ರ್ಯಾಲಿ ವೇಳೆ ಮಾತನಾಡಿದ ಖರ್ಗೆ, ನಾವು ನಿಮ್ಮ (ಮೋದಿ) ಮುಖವನ್ನು ಕಾರ್ಪೊರೇಷನ್ ಚುನಾವಣೆಗಳಲ್ಲಿ, ಎಂಎಲ್ಎ ಚುನಾವಣೆಗಳಲ್ಲಿ ಹಾಗೂ ಎಂಪಿ ಚುನಾವಣೆಗಳಲ್ಲಿ - ಹೀಗೆ ಎಲ್ಲ ಕಡೆಯೂ ನೋಡುತ್ತೇವೆ. ನಿಮಗೆ ರಾವಣನ ರೀತಿ 100 ತಲೆಗಳಿವೆಯೇ ಎಂದೂ ಟೀಕೆ ಮಾಡಿದ್ದರು.
ಗುಜರಾತ್ನಲ್ಲಿ ಎರಡು ಹಂತದ ಚುನಾವಣೆಯ ಮೊದಲ ಸುತ್ತಿನಲ್ಲಿ ಇಂದು ಮತದಾನ ನಡೆದಿದೆ. ಎರಡನೇ ಹಂತ ಸೋಮವಾರ ನಡೆಯಲಿದೆ. ಗುಜರಾತ್ನಲ್ಲಿ ಈ ಬಾರಿ ತ್ರಿಕೋನ ಪೈಪೋಟಿ ನಡೆಯುತ್ತಿದೆ. ಬಿಜೆಪಿ ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುತ್ತಾ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಹವಣಿಸುತ್ತಿದೆ. ಇದರ ಮಧ್ಯೆ ಗುಜರಾತ್ ಚುನಾವಣಾ ಅಖಾಡದಲ್ಲಿ ಎಎಪಿ ಕೂಡ ತನ್ನ ರಾಜಕೀಯದ ಅದೃಷ್ಟ ಪರೀಕ್ಷೆಗೆ ಇಳಿದಿದೆ.