ಗುಜರಾತ್ ಚುನಾವಣೆ: ಆರ್ಚ್ ಬಿಷಪ್ ಗೆ ಚುನಾವಣಾ ಆಯೋಗದಿಂದ ನೋಟಿಸ್
ಅಹಮದಾಬಾದ್, ನವೆಂಬರ್ 27: ರಾಷ್ಟ್ರೀಯವಾದಿ ಶಕ್ತಿಗಳ ವಿರುದ್ಧ ಪ್ರಾರ್ಥಿಸಿ ಎಂದು ಕರೆ ನೀಡಿದ್ದ ಗುಜರಾತ್ ನ ಆರ್ಚ್ ಬಿಷಪ್ ಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಗಾಂಧಿನಗರದ ಆರ್ಚ್ಡಯಸೀಸ್ ನ ಆರ್ಚ್ ಬಿಷಪ್ ಥೋಮಸ್ ಮೆಕ್ವಾನ್ ಕಳೆದ ವಾರ ರಾಷ್ಟ್ರೀಯವಾದಿ ಶಕ್ತಿಗಳನ್ನು ಚುನಾವಣೆಯಲ್ಲಿ ತಿರಸ್ಕರಿಸಿ ಎಂದು ಕ್ರೈಸ್ತ ಸಮುದಾಯಕ್ಕೆ ಕರೆ ನೀಡಿದ್ದರು.
ರಾಷ್ಟ್ರೀಯವಾದಿ ಶಕ್ತಿಗಳಿಂದ ಅಲ್ಪ ಸಂಖ್ಯಾತ ಸಮುದಾಯದಲ್ಲಿ ಅಭದ್ರತೆ ಹೆಚ್ಚಾಗುತ್ತಿದೆ. ದೇಶದ ಗಣತಂತ್ರ ಗಂಡಾಂತರದಲ್ಲಿದೆ. ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ. ಇವುಗಳಿಂದ ದೇಶವನ್ನು ರಕ್ಷಿಸಿ. ಮಾನವರನ್ನು, ಸಂವಿಧಾನವನ್ನು ಗೌರವಿಸುವವರನ್ನು ಚುನಾವಣೆಯಲ್ಲಿ ಆರಿಸಿ ಎಂದು ಆರ್ಚ್ ಬಿಷಪ್ ಹೇಳಿದ್ದರು.
ಈ ಮೂಲಕ ಅವರು ಪರೋಕ್ಷವಾಗಿ ಆಡಳಿತರೂಢ ಬಿಜೆಪಿಗೆ ಮತದಾನ ಮಾಡಬೇಡಿ ಎಂದು ಕರೆ ನೀಡಿದ್ದಾರೆ ಎಂಬುದಾಗಿ ಇದನ್ನು ವಿಶ್ಲೇಷಿಸಲಾಗಿತ್ತು. ಇದೀಗ ಗಾಂಧಿನಗರ ಜಿಲ್ಲಾಧಿಕಾರಿ ಆರ್ಚ್ ಬಿಷಪ್ ಗೆ ನೋಟಿಸ್ ಜಾರಿ ಮಾಡಿದದ್ದಾರೆ.
ಈ ರೀತಿ ಕರೆ ನೀಡಿದ್ದರ ಹಿಂದಿನ ಉದ್ದೇಶದ ಬಗ್ಗೆ ವಿವರಣೆ ಕೋರಿ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾಗಿ ಹೇಳಿದ್ದಾರೆ. ಅವರಿಗೆ ನೋಟಿಸ್ ಗೆ ಉತ್ತರಿಸಲು ಕೆಲವು ದಿನಗಳ ಕಾಲಾವಕಾಶ ನೀಡಲಾಗಿದೆ. ನಂತರ ನಾವು ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.