Breaking: ಗುಜರಾತ್ ಆಪ್ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಪೊಲಿಸ್ ವಶಕ್ಕೆ
ನವದೆಹಲಿ, ಅ. 13: ಆಮ್ ಆದ್ಮಿ ಪಕ್ಷದ (ಎಎಪಿ) ಗುಜರಾತ್ ಘಟಕದ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಅವರನ್ನು ದೆಹಲಿ ಪೊಲೀಸರು ಗುರುವಾರ ರಾಜಧಾನಿಯ ರಾಷ್ಟ್ರೀಯ ಮಹಿಳಾ ಆಯೋಗದ ಕಚೇರಿಯಲ್ಲಿ ಬಂಧಿಸಿದ್ದಾರೆ.
ವಿವಾದಾತ್ಮಕ ವಿಡಿಯೋ ಕುರಿತು ಎನ್ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ ಆಪ್ ನಾಯಕ ಗೋಪಾಲ್ ಇಟಾಲಿಯಾಗೆ ಈ ಹಿಂದೆ ಸಮನ್ಸ್ ನೀಡಿದ್ದರು.
ಸಮನ್ಸ್ಗೆ ಪ್ರತಿಕ್ರಿಯೆಯಾಗಿ ಗೋಪಾಲ್ ಇಟಾಲಿಯಾ ಅವರು ಆಯೋಗದ ಕಚೇರಿಗೆ ವಿಚಾರಣೆಗಾಗಿ ಹಾಜರಾಗಿದ್ದರು. ಎನ್ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ ಅವರನ್ನು ಜೈಲಿಗೆ ಹಾಕುವುದಾಗಿ ಬೆದರಿಕೆ ಹಾಕಿದ ಕೆಲವೇ ನಿಮಿಷಗಳಲ್ಲಿ ಇಟಾಲಿಯಾ ಅವರನ್ನು ವಶಕ್ಕೆ ಪಡೆಯಲಾಗಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ತಮ್ಮ ಕಚೇರಿಯ ಹೊರಗೆ ಗಲಾಟೆ ಮಾಡುತ್ತಿದ್ದಾರೆ ಎಂದು ರೇಖಾ ಶರ್ಮಾ ಆರೋಪಿಸಿದ್ದಾರೆ.
ಎನ್ಸಿಡಬ್ಲ್ಯೂ ಕಚೇರಿಯಲ್ಲಿ ಎಎಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಗುಜರಾತ್ ಆಪ್ ಮುಖ್ಯಸ್ಥರನ್ನು ಬಂಧಿಸಲಾಗಿದೆ ಎಂದು ಆಗ್ನೇಯ ಡಿಸಿಪಿ ಇಶಾ ಪಾಂಡೆ ಹೇಳಿದ್ದಾರೆ.

ಘಟನೆ ಸಂಬಂಧ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಾಲೆಗಳನ್ನು ಹೇಗೆ ನಿರ್ಮಿಸಬೇಕೆಂದು ತಿಳಿದಿರುವ ಆಪ್ ಪಕ್ಷಕ್ಕೆ ಇಟಾಲಿಯಾ ಸೇರಿರುವ ಕಾರಣ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ. "ಜನರಿಗೆ ಶಿಕ್ಷಣ ನೀಡುವುದು ಮತ್ತು ಶಾಲೆಗಳನ್ನು ಸುಧಾರಿಸುವುದು ಹೇಗೆ ಎಂದು ಅವರಿಗೆ ತಿಳಿದಿಲ್ಲ" ಎಂದು ಸಿಸೋಡಿಯಾ ಕಿಡಿ ಕಾರಿದ್ದಾರೆ.
ಇಟಾಲಿಯ ವಿರುದ್ಧದ ಈ ಪ್ರಕರಣವು 2019 ರಲ್ಲಿ ವರದಿಯಾಗಿರುವ ವಿವಾದಾತ್ಮಕ ವಿಡಿಯೋಗೆ ಸಂಬಂಧಿಸಿದ್ದು. ಇದರಲ್ಲಿ ಗೋಪಾಲ್ ಇಟಾಲಿಯಾ ಅವರು ಪಿಎಂ ಮೋದಿಯವರನ್ನು "ನೀಚ್ ಆದ್ಮಿ (ಕಡಿಮೆ ವ್ಯಕ್ತಿ)" ಎಂದು ಹೇಳಿದ್ದರು. ಜೊತೆಗೆ ಅವರ ವಿರುದ್ಧ ಹಲವು ನಿಂದನೀಯ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣದಲ್ಲಿ ಆಯೋಗವು ಇಟಾಲಿಯಾ ಅವರನ್ನು ಗುರುವಾರ ತನ್ನ ಕಚೇರಿಗೆ ಕರೆಸಿತ್ತು. ಅವರ ಭಾಷೆ "ಲಿಂಗ ಆಧಾರಿತ" ಮತ್ತು "ಸ್ತ್ರೀದ್ವೇಷ" ಹೊಂದಿದೆ ಎಂದು ಹೇಳಿಕೆ ನೀಡಿತ್ತು.

"ಅವರು ಸಮನ್ಸ್ ಪಡೆಯುವುದನ್ನು ನಿರಾಕರಿಸಿದರು. ಆದರೆ ಸಮನ್ಸ್ಗೆ ಉತ್ತರ ಸಿದ್ಧವಾಗಿತ್ತು. ವಿಡಿಯೋದಲ್ಲಿ ಇರುವುದನ್ನು ನಿರಾಕರಿಸಿ, ಟ್ವೀಟ್ ಮಾಡುವುದನ್ನು ಒಪ್ಪಿಕೊಂಡಿದ್ದಾರೆ" ಎಂದು ಮಹಿಳಾ ಸಮಿತಿಯ ಮುಖ್ಯಸ್ಥೆ ಹೇಳಿದ್ದಾರೆ.
ಹಿಂದಿನ ದಿನ, ಎಎಪಿ ಕಾರ್ಯಕರ್ತರು ತನ್ನ ಕಚೇರಿಯ ಹೊರಗೆ ಗದ್ದಲವನ್ನು ಸೃಷ್ಟಿಸುತ್ತಿದ್ದಾರೆ ಎಂದು ರೇಖಾ ಶರ್ಮಾ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಕಚೇರಿ ಮತ್ತು ಇತರ ಪೊಲೀಸ್ ಟ್ವಿಟರ್ ಹ್ಯಾಂಡಲ್ಗಳನ್ನು ಟ್ಯಾಗ್ ಮಾಡುವ ಮೂಲಕ, ಬ್ಯಾನರ್ಗಳನ್ನು ಹಿಡಿದಿರುವ ಗುಂಪಿನ ಫೋಟೋವನ್ನೂ ಹಂಚಿಕೊಂಡಿದ್ದರು.
ಬಂಧನಕ್ಕು ಮುನ್ನ ಗೋಪಾಲ್ ಇಟಾಲಿಯಾ, ಟ್ವಿಟರ್ನಲ್ಲಿ ಮಹಿಳಾ ಆಯೋಗದ ಮುಖ್ಯಸ್ಥರು ತಮ್ಮನ್ನು ಜೈಲಿಗೆ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಪೊಲೀಸರಿಗೆ ಕರೆ ಮಾಡಿದ್ದಾರೆ ಎಂದು ಹೇಳಿದ್ದರು.
"ಎನ್ಸಿಡಬ್ಲ್ಯೂ ಮುಖ್ಯಸ್ಥರು ನನ್ನನ್ನು ಜೈಲಿಗೆ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಮೋದಿ ಸರಕಾರ ಪಟೇಲ್ ಸಮುದಾಯಕ್ಕೆ ಇನ್ನೇನು ಕೊಡಲು ಸಾಧ್ಯ. ಬಿಜೆಪಿ ಪಾಟಿದಾರ್ ಸಮುದಾಯವನ್ನು ದ್ವೇಷಿಸುತ್ತಿದೆ. ನಾನು ಸರ್ದಾರ್ (ವಲ್ಲಭಭಾಯಿ) ಪಟೇಲ್ ವಂಶಸ್ಥ. ನನ್ನನ್ನು ಜೈಲಿಗೆ ಹಾಕಿ, ನಾನು ನಿಮ್ಮ ಜೈಲಿಗೆ ಹೆದರುವುದಿಲ್ಲ" ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ್ದಾರೆ.












Click it and Unblock the Notifications