ಶೀಘ್ರ ವಿಜಯ್ ಮಲ್ಯ ಆಸ್ತಿ ಜಪ್ತಿ? ಬಜೆಟ್ ನಲ್ಲಿ ಜೇಟ್ಲಿ ಸುಳಿವು
ತೆರಿಗೆ, ಬ್ಯಾಂಕ್ ಸಾಲ ಮತ್ತಿತರ ವಿಚಾರಗಳಲ್ಲಿ ಅಪಾರ ಪ್ರಮಾಣದ ವಂಚನೆ ನಡೆಸಿ ತಲೆಮರೆಸಿಕೊಂಡವರ ವಿರುದ್ಧ ಕಾನೂನು ರೂಪಿಸುವ ಇರಾದೆ ವ್ಯಕ್ತಪಡಿಸಿದ ಕೇಂದ್ರ ಹಣಕಾಸು ಸಚಿವರು.
ನವದೆಹಲಿ, ಫೆಬ್ರವರಿ 1: ಭಾರತ ಸರ್ಕಾರಕ್ಕೆ ಮಣ್ಣೆರಚಿ ದೇಶ ಬಿಟ್ಟು ಓಡಿ ಹೋಗುವ ತೆರಿಗೆ ವಂಚಕರು, ಸಾಲಗಾರರ ವಿರುದ್ಧ ಸಮರ ಘೋಷಿಸಿರುವ ಕೇಂದ್ರ ಹಣಕಾಸು ಸಚಿವರಾದ ಅರುಣ್ ಜೇಟ್ಲಿ, ದೇಶ ಬಿಟ್ಟು ಪರಾರಿಯಾದ ವಂಚಕರಿಗೆ ಸಂಬಂಧಪಟ್ಟ ದೇಶದಲ್ಲಿನ ಸಮಸ್ತ ಆಸ್ತಿಯನ್ನೂ ಮುಲಾಜಿಲ್ಲದೇ ಮುಟ್ಟುಗೋಲು ಹಾಕಿಕೊಳ್ಳುವ ವಿಶೇಷ ಕಾನೂನನ್ನು ರೂಪಿಸುವುದಾಗಿ ತಿಳಿಸಿದ್ದಾರೆ.[ಇಡೀ ದೇಶವೇ ಎದುರು ನೋಡುತ್ತಿರುವ ಕೇಂದ್ರ ಬಜೆಟ್ ನಿಮ್ಮ ಮುಂದೆ LIVE]
ಬುಧವಾರ ಲೋಕಸಭೆಯಲ್ಲಿ 2017-18ರ ಬಜೆಟ್ ಮಂಡನೆ ವೇಳೆ ವಿಜಯ್ ಮಲ್ಯ ಅವರ ಹೆಸರನ್ನೇಳದೇ ಈ ವಿಚಾರ ಪ್ರಸ್ತಾಪಿಸಿದ ಅವರು, ಇತ್ತೀಚೆಗೆ, ದೇಶಕ್ಕೆ ಪಂಗನಾಮ ಹಾಕಿ ವಿದೇಶಿಗಳಿಗೆ ತೆರಳಿ ಅಲ್ಲೇ ನೆಲೆಸುವ ಮೂಲಕ ಕಾನೂನಿನ ಬಲೆಗೆ ಸಿಗದೇ ಇರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂಥವರಿಗೆ ಲಗಾಮು ಹಾಕಲು ಸರ್ಕಾರ ನಿರ್ಧರಿಸಿದೆ.[ಬಜೆಟ್ 2017: ಆದಾಯ ತೆರಿಗೆ ಮಿತಿ ಏರಿಕೆ ಇಲ್ಲ]
ಹಾಗಾಗಿ, ಶೀಘ್ರದಲ್ಲೇ ಬ್ಯಾಂಕುಗಳಿಗೆ, ಸರ್ಕಾರಕ್ಕೆ ತೆರಿಗೆ, ಸಾಲ ಮುಂತಾದ ವಿಚಾರಗಳಲ್ಲಿ ವಂಚಿಸಿ ದೇಶ ಬಿಟ್ಟು ಪರಾರಿಯಾಗುವ ಜನರಿಗೆ ಸಂಬಂಧಪಟ್ಟ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕುವಂಥ ಕಟ್ಟುನಿಟ್ಟಿನ ಕಾನೂನನ್ನು ರೂಪಿಸಲಾಗುವುದು ಎಂದು ತಿಳಿಸಿದರು.[ಒಂದಷ್ಟು ಹೊಸ ಘೋಷಣೆ, ಹಳೆ ಯೋಜನೆಗಳ ಮುಂದುವರಿಕೆ; ಓಡದ ಜೇಟ್ಲಿ ರೈಲು]