ಪತ್ರಕರ್ತ ಜೇ ಡೇ ಹತ್ಯೆ ಪ್ರಕರಣ, ಛೋಟಾ ರಾಜನ್ ಗೆ ಜೀವಾವಧಿ ಶಿಕ್ಷೆ
ಮುಂಬೈ, ಮೇ 2: ಅಪರೂಪದ ತನಿಖಾ ಪತ್ರಕರ್ತ ಜ್ಯೋತಿರ್ಮಯ್ ಡೇ ಅಲಿಯಾಸ್ ಜೇ ಡೇ ಹತ್ಯೆ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್ ದೋಷಿ ಎಂದು ಮುಂಬೈನ ಎಂಕೋಕಾ ನ್ಯಾಯಾಲಯ ತೀರ್ಪು ನೀಡಿದೆ.
ದೇಶದ ಮಾಧ್ಯಮ ರಂಗವನ್ನೇ ಬೆಚ್ಚಿ ಬೀಳಿಸಿದ್ದ ಪ್ರಕರಣದಲ್ಲಿ ಪತ್ರಕರ್ತರಾದ ಜಿಗ್ನಾ ವೋರಾ ಮತ್ತು ಜೋಸೆಫ್ ಪೌಲ್ಸೆನ್ ರನ್ನು ಮಾತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.
ಮುಂಬೈನಲ್ಲಿ ಮಿಡ್ ಡೇ ಕ್ರೈಂ ಪತ್ರಕರ್ತನ ಹತ್ಯೆ
ಮುಂಬೈನ ಭೂಗತ ಲೋಕದ ಆಳ ಅಗಲಗಳನ್ನು ಅರಿತಿದ್ದ ಜೇ ಡೇ ಹತ್ಯೆ ಪ್ರಕರಣ ಕಳೆದ 7 ವರ್ಷಗಳಿಂದ ತನಿಖಾ ಸಂಸ್ಥೆಗಳಿಗೆ ಕಗ್ಗಂಟಾಗಿಯೇ ಉಳಿದಿತ್ತು. ಇದೀಗ ಮುಂಬೈ ನ್ಯಾಯಾಲಯದ ತೀರ್ಪಿನೊಂದಿಗೆ ಡೇ ಕೊಂದವರು ಯಾರು ಎಂಬುದಕ್ಕೆ ಉತ್ತರ ಸಿಕ್ಕಿದೆ.
ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ನೀಡಿರುವ ನ್ಯಾಯಾಲಯ, ಛೋಟಾ ರಾಜನ್ ಸೇರಿ 7 ಅಪರಾಧಿಗಳಿಗೆ ಜೀವಾವಧಿ ಸಜೆ ವಿಧಿಸಿದೆ.
ಯಾರು ಈ ಜೇ ಡೇ?
11 ಜೂನ್ 2011ರಲ್ಲಿ ಮುಂಬೈನಲ್ಲಿ ಕೊಲೆಯಾಗುವ ಮೊದಲು ಮುಂಬೈನ ಖ್ಯಾತ 'ಮಿಡ್ ಡೇ' ಪತ್ರಿಕೆಯಲ್ಲಿ ಜ್ಯೋತಿರ್ಮಯ್ ಡೇ ತನಿಖಾ ವರದಿಗಳ ಸಂಪಾದಕರಾಗಿದ್ದರು. ತಮ್ಮ ಓದುಗರ ಪಾಲಿಗೆ ಅವರು ಜೇ ಡೇ ಎಂದೇ ಖ್ಯಾತರಾಗಿದ್ದರು.
56 ವರ್ಷದ ಜೇ ಡೇ 'ಹಿಂದೂಸ್ತಾನ್ ಟೈಮ್ಸ್' ಮೂಲಕ ತಮ್ಮ ವೃತಿ ಜೀವನ ಆರಂಭಿಸಿದ್ದರು. ಹವ್ಯಾಸಿ ಛಾಯಾಗ್ರಾಹಕರಾಗಿದ್ದ ಅವರು, ರಾಷ್ಟ್ರೀಯ ಉದ್ಯಾನದ ಜಾಗವನ್ನು ಮಹಾರಾಷ್ಟ್ರ ಸರ್ಕಾರ ವಾಣಿಜ್ಯ ಕಾರಣಗಳಿಗಾಗಿ ಬಳಸಿಕೊಳ್ಳಲೆತ್ನಿಸಿದಾಗ ಆ ಕುರಿತು ವಿವರವಾದ ವರದಿ ಬರೆದರು.
ಇದು ಡೇ ಬರೆದ ಮೊತ್ತ ಮೊದಲ ತನಿಖಾ ವರದಿ. ಈ ವರದಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಲ್ಲೋಲ ಕಲ್ಲೋಲವೆಬ್ಬಿಸಿ ಸರ್ಕಾರ ಮುಜುಗರಕ್ಕೀಡಾಯಿತು.
ಚಿತ್ರ ಕೃಪೆ: ಸತ್ಯಪಾಲ್ ಜೈನ್, ಫೇಸ್ಬುಕ್
ಮುಂದುವರಿದ ವೃತ್ತಿ
ನಂತರ 'ಅಫ್ಟರ್ನೂನ್ ಡಿಸ್ಪ್ಯಾಚ್' ಹಾಗೂ 'ಕೊರಿಯರ್' ಎಂಬ ಪತ್ರಿಕೆಗಳಿಗೆ ಫೋಟೋಜರ್ನಲಿಸ್ಟ್ ಆಗಿ ಸೇವೆ ಸಲ್ಲಿಸಿದರು. ಮುಂದಿನದು 'ಮಿಡ್ ಡೇ' ಪತ್ರಿಕೆಯ ಫ್ರೀಲ್ಯಾನ್ಸ್ ಪಯಣ. 1996ರಲ್ಲಿ, 'ಇಂಡಿಯನ್ ಎಕ್ಸ್ಪ್ರೆಸ್' ಪತ್ರಿಕೆಯಲ್ಲಿ ಪೂರ್ಣ ಕಾಲಿಕ ವೃತ್ತಿ ಆರಂಭಿಸಿದರು. ಅಲ್ಲಿ ಅವರು ಅಪರಾಧ ವರದಿಗಾರಿಗೆ ಮಾಡುತ್ತಿದ್ದರು.
ಹೀಗೆ ವರದಿ ಮಾಡುತ್ತಾ ತನಿಖಾ ವರದಿಯಲ್ಲಿ ಡೇ ವೃತಿಪರರಾಗಿ ಬೆಳೆದು ಬಿಟ್ಟರು. ಮುಂದೆ 2005ರಲ್ಲಿ 'ಇಂಡಿಯನ್ ಎಕ್ಸ್ಪ್ರೆಸ್'ನಿಂದ 'ಹಿಂದೂಸ್ತಾನ್ ಟೈಮ್ಸ್'; ಅಲ್ಲಿದ ಮತ್ತೆ 'ಮಿಡ್ ಡೇ'ಗೆ ತನಿಖೆ ಮತ್ತು ಅಪರಾಧ ಸುದ್ದಿಗಳ ಸಂಪಾದಕರಾಗಿ ಬಂದರು.
ಚಿತ್ರ ಕೃಪೆ: ಗಿರೀಶ್ ಜೋಷಿ, ಫೇಸ್ಬುಕ್
ಮುಂಬೈ ಭೂಗತ ಲೋಕದ ನಂಟು
ಹಾಗೆ ಬಂದವರೇ ಮುಂಬೈ ಭೂಗತ ಜಗತ್ತನ್ನು ಅರೆದು ಕುಡಿದರು. ನೋಡ ನೋಡುತ್ತಲ್ಲೇ ಹುಬ್ಬೇರಿಸುವತ್ತ ಸರಣಿ ತನಿಖಾ ವರದಿಗಳನ್ನು ಬರೆಯುತ್ತಾ ಹೋದರು. 'ಖಲಾಸ್' ಮತ್ತು 'ಝೀರೋ ಡಯಲ್: ದ ಡೇಂಜರಸ್ ವರ್ಲ್ಡ್ ಆಫ್ ಇನ್ಫಾರ್ಮರ್ಸ್' ಎಂಬೆರಡು ಕೃತಿಗಳನ್ನೂ ಅವರು ಇದೇ ವೇಳೆಯಲ್ಲಿ ಬರೆದಿದ್ದರು.
ಕೊಲೆಯಾಗುವ ಮುಂಚೆ ಡೇ ಮುಂಬೈಯಲ್ಲಿ ಎಲ್ಲೆ ಮೀರಿದ್ದ ಆಯಿಲ್ ಮಾಫಿಯಾದ ಬಗ್ಗೆ, ಡೀಸೆಲ್ ಕಲಬೆರಕೆಯಲ್ಲಿ ಭೂಗತ ಲೋಕದ ದೊರೆಗಳು ಸೇರಿಕೊಂಡಿರುವುದರ ಬಗ್ಗೆ ತನಿಖಾ ವರದಿ ಬರೆಯತೊಡಗಿದ್ದರು.
ಕೊಲೆಯಾಗಿ ಹೋದ ಅಪರೂಪದ ಪತ್ರಕರ್ತ
ಇದೇ ವೇಳೆಗೆ 2011ರ ಜೂನ್ 11ರಂದು ಮಧ್ಯಾಹ್ನ 2.45ರ ಸುಮಾರಿಗೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಮುಂಬೈನ ಘಾಟ್ಕೋಪರ್ನ ಅಮೃತನಗರದಲ್ಲಿರುವ ತನ್ನ ತಾಯಿಯ ಮನೆಯಿಂದ ತಾನು ಪೊವಾಯಿಯಲ್ಲಿ ಪತ್ನಿ ಹಾಗೂ ಪತ್ರಕರ್ತೆ ಶುಭಾಶರ್ಮರೊಂದಿಗೆ ವಾಸಿಸುತ್ತಿದ್ದ ಮನೆಗೆ ಬೈಕ್ನಲ್ಲಿ ಬರುತ್ತಿದ್ದಾಗ ಬೈಕಿನಲ್ಲಿ ಬಂದ ಪಾತಕಿಗಳು ಡೇ ಯನ್ನು ಕೊಂದು ಮುಗಿಸಿದ್ದರು.
ಮಹಾರಾಷ್ಟ್ರದಲ್ಲಿ ಅದರಲ್ಲೂ ಮುಖ್ಯವಾಗಿ ಮುಂಬೈನಲ್ಲಿ ಈ ಪ್ರಕರಣ ಆಕ್ರೋಶದ ಕಿಚ್ಚನ್ನು ಹುಟ್ಟುಹಾಕಿತು. ಪ್ರಕರಣದ ತನಿಖೆ ಆರಂಭಿಸಿದ ಮುಂಬೈ ಪೊಲೀಸರು ಆರಂಭದಲ್ಲಿ ಡೇ ಸಹೋದ್ಯೋಗಿಯಾಗಿದ್ದ'ಏಷಿಯನ್ ಏಜ್'ನ ಕ್ರೈಂ ರಿಪೋರ್ಟರ್ ಜಿಗನಾ ವೋರಾಳನ್ನು ಬಂಧಿಸಿದ್ದರು.
ಛೋಟಾ ರಾಜನ್ ಕೈವಾಡ
ಅವತ್ತೇ ಡೇ ಹತ್ಯೆ ಹಿಂದೆ ಛೋಟಾ ರಾಜನ್ ಇದ್ದಾನೆ ಎಂದು ಪೊಲೀಸರು ತೀರ್ಮಾನಿಸಿದ್ದರು. ಆದರೂ ಡೇ ಹತ್ಯೆ ಪ್ರಕರಣದ ತನಿಖೆ ಮುಂದುವರಿಯಲಿಲ್ಲ. ಕೊನೆಗೆ ಪ್ರಕರಣ ಸಿಬಿಐ ಮೆಟ್ಟಿಲೇರಿತು. ಈ ಕುರಿತು ಸಿಬಿಐ ವಿವರವಾದ ತನಿಖೆಯನ್ನು ನಡೆಸುತ್ತಿತ್ತು. ಬೆಂಗಳೂರಿನ ರವಿ ಬೆಳಗೆರೆ ಕಚೇರಿಗೂ ಈ ಸಂಬಂಧ ಸಾಕ್ಷ್ಯ ಕಲೆ ಹಾಕಲು ಸಿಬಿಐ ಅಧಿಕಾರಿಗಳು ಬಂದಿದ್ದರು.
ಇದೀಗ ಬರೋಬ್ಬರಿ 7 ವರ್ಷಗಳ ನಂತರ ಜೇ ಡೇ ಹತ್ಯೆಯನ್ನು ಛೋಟಾ ರಾಜನ್ ಮಾಡಿಸಿದ್ದಾನೆ ಎಂದು ಎಂಕೋಕಾ ಕೋರ್ಟ್ ಆದೇಶ ನೀಡಿದೆ. ಆದರೆ ಮೊದಲ ದಿನ ಬಂಧಿತರಾಗಿದ್ದ 'ಏಷಿಯನ್ ಏಜ್'ನ ಕ್ರೈಂ ರಿಪೋರ್ಟರ್ ಜಿಗನಾ ವೋರಾ ಪ್ರಕರಣದಲ್ಲಿ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.