ಮೋದಿ ಸಭೆಗೆ ದೇಣಿಗೆ ನೀಡಿ, ಇಲ್ಲಾಂದ್ರೆ ಜೈಲಿಗೆ ಹೋಗಿ
ಪಾಟ್ನಾ, ಅ 10: ಭ್ರಷ್ಟಾಚಾರದ ವಿರುದ್ದ ದೇಶಾದ್ಯಂತ ಸಮರ ಸಾರುತ್ತಿರುವ ಬಿಜೆಪಿ ಖುದ್ದು ಮುಜುಗರಕ್ಕೀಡಾಗುವ ಪ್ರಸಂಗವೊಂದು ನಡೆದಿದೆ. ಪಾಟ್ನಾದಲ್ಲಿ ನಡೆಯಲಿರುವ ನರೇಂದ್ರ ಮೋದಿ ಸಾರ್ವಜನಿಕ ಸಭೆಗೆ ಪಕ್ಷದ ಸಂಸದರೊಬ್ಬರು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಹಣದ ಬೇಡಿಕೆ ಇಟ್ಟಿದ್ದಾರೆಂದು ವರದಿಯಾಗಿದೆ.
ಅಕ್ಟೋಬರ್ 27ರಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ 'Hoonkar Rally' ಪಾಟ್ನಾದಲ್ಲಿ ಆಯೋಜಿಸಲಾಗಿದೆ. ಈ ಸಭೆಗಾಗಿ ಸಕ್ಕರೆ ಕಾರ್ಖಾನೆಯ ಮಾಲೀಕರಿಂದ ಹಿರಿಯ ಸಂಸದೆ ರಮಾ ದೇವಿ ಐದು ಲಕ್ಷ ರೂಪಾಯಿ ದೇಣಿಗೆ ನೀಡಬೇಕೆಂದು ಒತ್ತಡ ಹೇರುತ್ತಿದ್ದಾರೆ ಎನ್ನುವ ವಿಷಯ ಬಹಿರಂಗಗೊಂಡಿದೆ.
ಒಂದು ವೇಳೆ ಕಾರ್ಖಾನೆ ಮಾಲೀಕರು ದೇಣಿಗೆ ನೀಡಲು ಒಪ್ಪದಿದ್ದರೆ ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ನೀಡುತ್ತಿಲ್ಲ ಎಂದು ಕೇಸ್ ಫೈಲ್ ಮಾಡಿ ಜೈಲಿಗೆ ಕಳುಹಿಸುವುದಾಗಿ ಕೂಡ ಇವರು ಬೆದರಿಕೆ ಒಡ್ಡುತ್ತಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಬಗ್ಗೆ ವಿವರ ಸ್ಲಡಿನಲ್ಲಿ..

ಬಿಜೆಪಿ ಸಂಸದೆ
ಬಿಹಾರದ ಶೋಹರ್ ಕ್ಷೇತ್ರದ ಸಂಸದೆಯಾಗಿರುವ ರಮಾದೇವಿ ಈ ಹಿಂದೆ ಆರ್ಜೆಡಿ ಪಕ್ಷದಲ್ಲಿದ್ದರು. ಕಳೆದ ಅಕ್ಟೋಬರ್ ಎಂಟರಂದು ಸೀತಾಮಾರಿ ಜಿಲ್ಲೆಯಲ್ಲಿರುವ ರಿಗಾ ಸಕ್ಕರೆ ಕಾರ್ಖಾನೆಯ ಮಾಲೀಕರಾದ ಓಂ ಪ್ರಕಾಶ್ ಧನುಕಾ ಅನ್ನುವವರಿಗೆ ದೂರವಾಣಿ ಕರೆ ಮಾಡಿ ಸೀತಾಮಾರಿಯಲ್ಲಿರುವ ಅತಿಥಿ ಗೃಹದಲ್ಲಿ ಖುದ್ದಾಗಿ ಬಂದು ಭೇಟಿ ಮಾಡಲು ಹೇಳಿದ್ದಾರೆ. ಇದಕ್ಕೆ ಒಪ್ಪದ ಮಾಲೀಕರಿಗೆ ನರೇಂದ್ರ ಮೋದಿ ಸಾರ್ವಜನಿಕ ಸಭೆಗೆ ಐದು ಲಕ್ಷ ನೀಡುವಂತೆ ಕೇಳಿದ್ದಾರೆ.

ಸಕ್ಕರೆ ಕಾರ್ಖಾನೆ ಮಾಲೀಕ
ಕಾರ್ಖಾನೆ ನಷ್ಟದಲ್ಲಿದ್ದು ಅಷ್ಟು ದೊಡ್ಡ ಮೊತ್ತವನ್ನು ಹೊಂದಿಸುವುದು ಕಷ್ಟ. ಕಬ್ಬು ನೀಡಿದ ರೈತರಿಗೆ ಇನ್ನೂ ಹಣ ಕೊಡಲಾಗುತ್ತಿಲ್ಲ. ಇನ್ನು ಮೋದಿ ಸಭೆಗೆ ಎಲ್ಲಿಂದ ದುಡ್ಡು ಕೊಡಲಿ ಎಂದು ಕಾರ್ಖಾನೆ ಮಾಲೀಕ ಧನುಕಾ, ಬಿಜೆಪಿ ಸಂಸದೆಯಲ್ಲಿ ಕೇಳಿಕೊಂಡಿದ್ದಾರೆ.

ಮಾಲೀಕನ ಆರೋಪ
ಹಣ ನೀಡದಿದ್ದರೆ ಕಬ್ಬು ಬೆಳೆಗಾರರಿಗೆ ಹಣ ಪಾವತಿ ಮಾಡಿಲ್ಲ ಎಂದು ನಿಮ್ಮನ್ನು ಅರೆಸ್ಟ್ ಮಾಡಿಸುತ್ತೇನೆ ಎಂದು ನನ್ನ ಮೇಲೆ ಬೆದರಿಕೆ ಹಾಕಿದ್ದಾರೆ ಹಾಗಾಗಿ ಸಂಸದೆಯ ಮೇಲೆ ಕೇಸ್ ಫೈಲ್ ಮಾಡಿದ್ದೇನೆ, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ರಾಜ್ಯದ ಹೆಚ್ಚಿನ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಬಿಜೆಪಿ ನಾಯಕರು ದೇಣಿಗೆ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಇದನ್ನು ಬಿಹಾರ ಸರಕಾರದ ಗಮನಕ್ಕೆ ತರುತ್ತಿದ್ದೇನೆ ಎಂದು ಕಾರ್ಖಾನೆ ಮಾಲೀಕ ಧನುಕಾ ಹೇಳಿದ್ದಾರೆ.

ಸಂಸದೆ ಸ್ಪಷ್ಟನೆ
ಸಕ್ಕರೆ ಕಾರ್ಖಾನೆ ಮಾಲೀಕರ ಆರೋಪಕ್ಕೆ ಹುರುಳಿಲ್ಲ. ಅವರಿವರಿಗೆ ಬೆದರಿಕೆಯೊಡ್ಡಿ ಸಾರ್ವಜನಿಕ ಸಭೆ ನಡೆಸುವ ಅಗತ್ಯ ನಮಗಿಲ್ಲ. ನಾವು ಈ ವಿಷಯವನ್ನು ಮುಂದಕ್ಕೆ ತೆಗೆದು ಕೊಂಡು ಹೋಗುತ್ತೇವೆ. ನಾನು ಕಬ್ಬು ಬೆಳೆಗಾರರಿಗೆ ಸೂಕ್ತವಾದ ಮಾರುಕಟ್ಟೆ ದರ ಯಾಕೆ ಕೊಡುತ್ತಿಲ್ಲ ಎಂದು ಕೇಳಲು ದೂರವಾಣಿ ಕರೆ ಮಾಡಿದ್ದೆ. ನನ್ನ ಜೊತೆ ಕಾರ್ಖಾನೆಯ ಮಾಲೀಕ ಅಸಭ್ಯವಾಗಿ ಮಾತನಾಡಿದ. ಅವರ ವಿರುದ್ದ ಕೌಂಟರ್ ಎಫ್ಐಆರ್ ಹಾಕುತ್ತೇನೆ ಎಂದು ಸಂಸದೆ ರಮಾದೇವಿ ಪ್ರತ್ಯುತ್ತರ ನೀಡಿದ್ದಾರೆ.

ಬಿಹಾರದಲ್ಲಿ ಮೋದಿ ’ಮೋಡಿ’
ರಾಜ್ಯದಲ್ಲಿ ನಿತೀಶ್ ಜೊತೆ ಸಂಬಂಧ ಮುರಿದು ಹೋದ ನಂತರ ಬಿಜೆಪಿ ತನ್ನ ಶಕ್ತಿ ಪ್ರದರ್ಶನಕ್ಕೆ ಈ ಸಾರ್ವಜನಿಕ ಸಭೆಯನ್ನು ಬಳಸಿಕೊಳ್ಳಲು ಸರ್ವ ಸನ್ನದ್ದವಾಗಿದೆ. ನರೇಂದ್ರ ಮೋದಿ ಅಕ್ಟೋಬರ್ 27 ಭಾನುವಾರದಂದು ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.












Click it and Unblock the Notifications