ಭಾರತ ಲಾಕ್ ಡೌನ್ ವಿಸ್ತರಣೆಗೆ ಬೆಂಬಲಿಸಿದ ರಾಜ್ಯಗಳು ಯಾವುವು?
ನವದೆಹಲಿ, ಮೇ.15: ನೊವೆಲ್ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ನಾಲ್ಕನೇ ಅವಧಿಯ ಭಾರತ ಲಾಕ್ ಡೌನ್ ಜಾರಿಗೊಳಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಈಗಾಗಲೇ ಮುನ್ಸೂಚನೆ ಕೊಟ್ಟಿದ್ದಾರೆ. ದೇಶದಲ್ಲಿ ನಾಲ್ಕು ರಾಜ್ಯಗಳು ಲಾಕ್ ಡೌನ್ ಗೆ ಸಮ್ಮತಿ ಸೂಚಿಸಿವೆ.
ಭಾರತ ಲಾಕ್ ಡೌನ್ ಮೂರನೇ ಅವಧಿ ಮೇ.17ಕ್ಕೆ ಅಂತ್ಯವಾಗಲಿದೆ. ಮೇ.18ರಿಂದ ಮತ್ತೆ ಎರಡು ವಾರ ಲಾಕ್ ಡೌನ್ ಮುಂದುವರಿಸುವಂತೆ ಕೇಂದ್ರ ಸರ್ಕಾರಕ್ಕೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನಾವಾಲ್ ಪತ್ರ ಬರೆದಿದ್ದಾರೆ.
4ನೇ ಹಂತದ ಲಾಕ್ ಡೌನ್; ಏನಿರುತ್ತೆ, ಏನಿರಲ್ಲ?
ಶುಕ್ರವಾರದೊಳಗೆ ಎಲ್ಲ ರಾಜ್ಯಗಳು ಲಾಕ್ ಡೌನ್ ವಿಸ್ತರಣೆ ಬಗ್ಗೆ ಕೇಂದ್ರಕ್ಕೆ ಸಲಹೆ ನೀಡಬಹುದು. ಅಸ್ಸಾಂ ಸರ್ಕಾರವು ಈಗಾಗಲೇ ತಮ್ಮ ನಿಲುವು ಏನು ಎಂಬುದರ ಬಗ್ಗೆ ಕೇಂದ್ರ ಸರ್ಕಾರದ ಮುಂದೆ ಮಂಡಿಸಿದೆ ಎಂದು ಸಿಎಂ ಸರ್ಬಾನಂದ್ ಸೋನಾವಾಲ್ ತಿಳಿಸಿದ್ದಾರೆ.
ಲಾಕ್ ಡೌನ್ ವಿಸ್ತರಣೆಯ ನಿರ್ಧಾರ ಘೋಷಿಸಿದ ಸಿಎಂ
ಭಾರತದಲ್ಲಿ ನಾಲ್ಕನೇ ಅವಧಿಯ ಲಾಕ್ ಡೌನ್ ಕಟ್ಟುನಿಟ್ಟಿನಿಂದ ಇರಬೇಕು ಎಂದು ಬಿಹಾರ, ಒಡಿಶಾ ಸರ್ಕಾರಗಳು ಸಲಹೆ ನೀಡಿವೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇ.31ರವರೆಗೂ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಇದಕ್ಕೂ ಮೊದಲೇ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮೇ.31ರವರೆಗೂ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿರುತ್ತದೆ ಎಂದು ಘೋಷಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಹತೋಟಿಗೆ ಬಾರದ ಕೊರೊನಾ!
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲೇ 1,576 ಮಂದಿಗೆ ನೊವೆಲ್ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಶುಕ್ರವಾರ 49 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಇದರಿಂದ 29,100ಕ್ಕೆ ಏರಿಕೆಯಾಗಿದೆ. ರಾಜ್ಯದ ಕೆಂಪು ವಲಯಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸುವಂತಾ ಅನಿವಾರ್ಯತೆ ಎದುರಾಗಿದೆ.
ಆರ್ಥಿಕ ಚಟುವಟಿಕೆ ಪುನಾರಂಭಿಸಲು ಗುಜರಾತ್ ಒಲವು
ಕಳೆದ 24 ಗಂಟೆಗಳಲಲ್ಿ 342 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಗುಜರಾತ್ ನಲ್ಲಿ ಪರಿಸ್ಥಿತಿ ಹಾಗಿಲ್ಲ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,932ಕ್ಕೆ ಏರಿಕೆಯಾಗಿದ್ದರೂ ಆರ್ಥಿಕ ಚಟುವಟಿಕೆಗಳನ್ನು ಪುನಾರಂಭಿಸುವ ಬಗ್ಗೆ ರಾಜ್ಯ ಸರ್ಕಾರವು ಒಲವು ತೋರುತ್ತಿದೆ. ತಮಿಳುನಾಡು ಸರ್ಕಾರ ಕೂಡಾ ಕಂಟೇನ್ಮೆಂಟ್ ಝೋನ್ ಗಳನ್ನು ಹೊರತುಪಡಿಸಿ ಬೇರೆ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿಕೊಂಡಿದೆ.
ಕರ್ನಾಟಕ ಸರ್ಕಾರದಿಂದ ರೆಸ್ಟೋರೆಂಟ್ ತೆರೆಯಲು ಅನುಮತಿ
ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಈಗಾಗಲೇ ಸಾವಿರದ ಗಡಿ ದಾಟಿದೆ. 1056 ಮಂದಿ ಸೋಂಕಿತರನ್ನು ಹೊಂದಿರುವ ರಾಜ್ಯದಲ್ಲಿ ರೆಸ್ಟೋರೆಂಟ್ ಮತ್ತು ಹೋಟೆಲ್ ಗಳನ್ನು ತೆರೆಯಲು ಅನುಮತಿ ನೀಡಿ ಎಂದು ಸರ್ಕಾರವು ಮನವಿ ಮಾಡಿದೆ. ಕೇರಳದಲ್ಲಿ ರೆಸ್ಟೋರೆಂಟ್, ಹೋಟೆಲ್ ಪುನಾರಂಭದ ಜೊತೆಗೆ ಮೆಟ್ರೋ ಸಂಚಾರ, ಸ್ಥಳೀಯ ರೈಲು ಹಾಗೂ ವಾಣಿಜ್ಯ ವಿಮಾನಗಳ ಸಂಚಾರಕ್ಕೂ ಅನುಮತಿ ನೀಡುವಂತೆ ಮನವಿ ಸಲ್ಲಿಸಲಾಗಿದೆ.