ಅಪರಿಚಿತರಿಂದ ಟ್ಯಾಕ್ಸಿ ಹೈಜಾಕ್: ಪಠಾಣ್ ಕೋಟ್ ವಾಯುನೆಲೆಯಲ್ಲಿ ಕಟ್ಟೆಚ್ಚರ
ಪಠಾಣ್ ಕೋಟ್, ನ 15: ನಾಲ್ಕು ಜನ ಬಂದೂಕುದಾರಿಗಳು ಮಂಗಳವಾರ (ನ 13) ತಡರಾತ್ರಿ ಇನೋವಾ ಕಾರನ್ನು ಅಪಹರಿಸಿರುವುದರಿಂದ, ಪಠಾಣ್ ಕೋಟ್ ಮತ್ತು ಜಮ್ಮು ಕಾಶ್ಮೀರದ ಕಥುವಾದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ನಾಲ್ಕು ಜನ ಅಪರಿಚರು ಸಿಲ್ವರ್ ಕಲರಿನ ಇನೋವಾ ಕಾರನ್ನು (JK02-AW 0922) ಮಂಗಳವಾರ ರಾತ್ರಿ ಜಮ್ಮು ರೈಲ್ವೇ ನಿಲ್ದಾಣದಿಂದ ಬಾಡಿಗೆ ಪಡೆದಿದ್ದರು. ಪಂಜಾಬ್, ಪಠಾಣ್ ಕೋಟ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಮಾಧೋಪುರದ ಬಳಿ, ಇನೋವಾ ಚಾಲಕನಿಗೆ ಗನ್ ಪಾಯಿಂಟ್ ತೋರಿಸಿ, ಕಾರನ್ನು ಅಪಹರಿಸಿದ್ದರು.
ಮೇಜರ್ ಸರ್ವಜೀತ್ ಸಿಂಗ್ ಹೆಸರಿನಲ್ಲಿ ಟ್ಯಾಕ್ಸಿ ಬುಕ್ ಮಾಡಿರುವ ಇವರುಗಳು, ಸಿಸಿಟಿವಿ ಫುಟೇಜ್ ಪ್ರಕಾರ ಮಂಕಿ ಕ್ಯಾಪ್ ಧರಿಸಿದ್ದರು. ಲಖನಪುರ ಟೋಲ್ ಗೇಟ್ ನಲ್ಲಿ ನಾವೆಲ್ಲಾ ಮಿಲಿಟರಿಯವರು ಎಂದು ಪರಿಚಯಿಸಿಕೊಂಡು, ಅಲ್ಲಿಂದ ಸ್ವಲ್ಪ ಮುಂದಕ್ಕೆ ಹೋದ ಕೂಡಲೇ, ಟ್ಯಾಕ್ಸಿ ಚಾಲಕನನ್ನು ಕೆಳಗೆ ತಳ್ಳಿ, ಕಾರನ್ನು ಅಪಹರಿಸಿದ್ದಾರೆಂದು ವರದಿಯಾಗಿದೆ.
ಟ್ಯಾಕ್ಸಿಯ ಚಾಲಕ ಸಮೀಪದ ಪೊಲೀಸ್ ಠಾಣೆಗೆ ಕೂಡಲೇ ಮಾಹಿತಿ ನೀಡಿದ್ದಾನೆ. ಕಾರಿನಲ್ಲಿದ್ದ ನಾಲ್ವರೂ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಮಾತನಾಡುವ, ಪಂಜಾಬಿ ಮಿಶ್ರಿತ ಉರ್ದು ಭಾಷೆಯನ್ನು ಮಾತನಾಡುತ್ತಿದ್ದರು ಎಂದು ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಈ ಘಟನೆ ವರದಿಯಾಗುತ್ತಿದ್ದಂತೆಯೇ, ಸಮೀಪದ ಎಲ್ಲಾ ಪೊಲೀಸ್ ಠಾಣೆಗೆ ಮತ್ತು ಜಮ್ಮು ಕಾಶ್ಮೀರದ ಪೊಲೀಸ್ ಮುಖ್ಯಸ್ಥರಿಗೆ ಮಾಹಿತಿಯನ್ನು ರವಾನಿಸಲಾಗಿದೆ. ಜೊತೆಗೆ, ಪಠಾಣ್ ಕೋಟ್ ವಾಯುನೆಲೆಯ ಪ್ರದೇಶದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಪಠಾಣ್ ಕೋಟ್, ಎರಡು ವರ್ಷದ ಹಿಂದಿನ ಕರಾಳ ನೆನಪು, ಮುಂದೆ ಓದಿ

ಪಠಾಣ್ ಕೋಟ್, 2ವರ್ಷದ ಹಿಂದಿನ ಕರಾಳ ನೆನಪು
ಜನವರಿ 02, 2016ರಂದು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಆರು ಜನ ಉಗ್ರರು, ಇದೇ ರೀತಿ ಟ್ಯಾಕ್ಸಿ ಅಪಹರಿಸಿ, ಪಂಜಾಬಿನ ಕಥುವಾ-ಗುರುದಾಸಪುರ ಗಡಿ ಮೂಲಕ ಒಳ ಪ್ರವೇಶಿಸಿದ್ದರು. ಅದಕ್ಕೂ ಮುನ್ನ, ಜನವರಿ ಒಂದರಂದು, ಗುರುದಾಸಪುರದ ಎಸ್ಪಿ ಸಲ್ವಿಂದರ್ ಸಿಂಗ್ ಅವರನ್ನು ಅಪಹರಿಸಿದ್ದರು.

ಎಸ್ಪಿಯನ್ನು ಅಪಹರಿಸಿ, ಟ್ಯಾಕ್ಸಿಯನ್ನು ಅಲ್ಲೇ ಬಿಟ್ಟ ಉಗ್ರರು
ಎಸ್ಪಿಯನ್ನು ಅಪಹರಿಸಿದ ನಂತರ ಟ್ಯಾಕ್ಸಿಯನ್ನು ಅಲ್ಲೇ ಬಿಟ್ಟು, ಎಸ್ಪಿ ಅವರ ಅಧಿಕೃತ ವಾಹನದಲ್ಲಿ ಅವರನ್ನೂ ಜೊತೆಗೆ ಕರೆದುಕೊಂಡು, ಸುಮಾರು 20 ಕಿ.ಮೀ ವರೆಗೆ ಹೋಗಿ, ನಂತರ ಅವರನ್ನು ಕೆಳಕ್ಕೆ ತಳ್ಳಿದ್ದರು. ಎಸ್ಪಿ ಸಲ್ವಿಂದರ್ ಸಿಂಗ್ ಅವರ ಮೊಬೈಲ್ ಫೋನ್ ಬಳಸಿಕೊಂಡು ಪಾಕಿಸ್ತಾನದ ಭವಲ್ಪುರ್ ನಲ್ಲಿರುವ ತಮ್ಮ ಏಜೆಂಟ್ ಗಳಿಗೆ ಉಗ್ರರು ಕರೆ ಮಾಡಿದ್ದರು.

ಒಬ್ಬನನ್ನು ಕೂಡಲೇ ಹೊಡೆದುರುಳಿಸಿದ ಮಿಲಿಟರಿ
ಆರು ಜನ ಉಗ್ರರಲ್ಲಿ ಒಬ್ಬರನ್ನು ವಾಯುನೆಲೆ ಕೇಂದ್ರದೊಳಗೆ ನುಗ್ಗಲು ಯತ್ನಿಸುವಾಗಲೇ ಮಿಲಿಟರಿಯವರು ಹೊಡೆದು ಉರುಳಿಸಿದ್ದರು. ಮುಂಜಾನೆ 3.30ರ ಸುಮಾರಿಗೆ ವಾಯುನೆಲೆಯಲ್ಲಿನ ಕೇಂದ್ರ ದೇಶಿ ವಿಮಾನ ಪ್ರದೇಶಕ್ಕೆ ಐವರು ಉಗ್ರರು ಪ್ರವೇಶಿಸಿ, ಮನಬಂದಂತೇ, ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು.

ಲೆ. ಕರ್ನಲ್ ನಿರಂಜನ್ ಸೇರಿದಂತೆ ಏಳು ಜನ ಯೋಧರು ವೀರ ಮರಣ
ಮಿಲಿಟರಿ ಕಮಾಂಡೋಗಳು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ತಡರಾತ್ರಿ ತನಕ ನಡೆದಿತ್ತು. ಮೂವರು ಉಗ್ರರು ಹತರಾದರೆ, ಲೆ. ಕರ್ನಲ್ ನಿರಂಜನ್ ಸೇರಿದಂತೆ ಏಳು ಜನ ಯೋಧರು ವೀರ ಮರಣ ಹೊಂದಿದ್ದರು. ಜನವರಿ 3,2016 ರಂದು ಮತ್ತಿಬ್ಬರು ಉಗ್ರರು ಸಾವನ್ನಪ್ಪಿದ್ದರು.

ಭಾರತೀಯ ವಾಯುಸೇನೆ
ಕಾರ್ಯಾಚರಣೆ ಬಗ್ಗೆ ಭಾರತೀಯ ವಾಯುಸೇನೆ, ಗೃಹ ಕಾರ್ಯದರ್ಶಿಗಳು ಸುದ್ದಿಗೋಷ್ಠಿ ನಡೆಸಿ ದೇಶಕ್ಕೆ ಮಾಹಿತಿ ನೀಡಿದ್ದರು. ಪ್ರತಿಯೊಬ್ಬ ಉಗ್ರನ ಬಳಿ 6 ಕೆಜಿ ಆರ್ ಡಿಎಕ್ಸ್, ಗ್ರೇನೇಡ್ಸ್ ಗಳಿದ್ದವು ಎಂದು ವಾಯುಸೇನೆಯ ಅಧಿಕಾರಿಗಳು ಹೇಳಿದ್ದರು. ಪಠಾಣ್ ಕೋಟ್ ದಾಳಿ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದರು.












Click it and Unblock the Notifications