ಉತ್ತರಖಾಂಡ: ಚಾರಣಕ್ಕೆ ತೆರಳಿದ್ದ ಕರ್ನಾಟಕ ಮೂಲದ ನಾಲ್ವರು ಸಾವು, ಮುಂದುವರಿದ ಶೋಧಕಾರ್ಯ
ಉತ್ತರಖಾಂಡದಲ್ಲಿ ಹವಾಮಾನ ವೈರೀತ್ಯದಿಂದ ಈಗಾಗಲೇ ಹಲವರು ಅಪಾಯಕ್ಕೆ ಸಿಲುಕಿರುವ ಘಟನೆ ನಡೆದ ಉದಾಹರಣೆಗಳಿವೆ. ಹಾಗೆಯೇ ಇದೀಗ ಕರ್ನಾಟಕದಿಂದ ಚಾರಣಕ್ಕೆ ತೆರಳಿದ್ದ 19 ಜನರ ಪೈಕಿ 4 ಮಂದಿ ಸಾವನ್ನಪ್ಪಿದ್ದು, ಇನ್ನುಳಿದವರಿಗಾಗಿ ಶೋಧಕಾರ್ಯ ಮುಂದುವರೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಿಮಾಲಯದ ಗರ್ವಾಲ್ ಪರ್ವತ ಶ್ರೇಣಿಗಳಲ್ಲಿರುವ ಸಹಸ್ತ್ರ ತಾಳ್-ಮಯಾಲಿ ಮಾರ್ಗಕ್ಕೆ ಚಾರಣಕ್ಕೆ ತೆರಳಿದ್ದ ವೇಳೆ ಬೆಂಗಳೂರಿನ 19 ಮಂದಿ ಸಿಲುಕಿದ್ದು, ಈ ಪೈಕಿ ನಾಲ್ವರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.

ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಬೆಂಬಲದೊಂದಿಗೆ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಈಗಾಗಲೇ ಇಬ್ಬರು ಚಾರಣಿಗರನ್ನು ರಕ್ಷಿಸಲಾಗಿದೆ.
ಅಲ್ಲದೆ, ಈಗಾಗಲೇ ವಾಯುಪಡೆಯ ಹೆಲಿಕಾಪ್ಟರ್ ಅನ್ನು ಕೇಳಲಾಗಿದೆ ಮತ್ತು ಸ್ಥಳೀಯ ಗ್ರಾಮಸ್ಥರು ಮತ್ತು ಅರಣ್ಯ ಅಧಿಕಾರಿಗಳು ಕೂಡ ಇವರ ಜೊತೆಗೂಡು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.
ಭಾರೀ ಹಿಮಪಾತ ಮತ್ತು ಮಳೆ ಹಿನ್ನೆಲೆ ಇಲ್ಲಿನ ವಾತಾವರಣ ತುಂಬಾ ಹದಗೆಟ್ಟಿರುವ ಹಿನ್ನೆಲೆ ಇಲ್ಲಿ ರಕ್ಷಣಾ ಹೆಲಿಕಾಪ್ಟರ್ ಟೇಕ್ ಆಫ್ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ ಅಲ್ಲಿ ಸಿಲುಕಿರುವ ಚಾರಣಿಗರನ್ನು ತಲುಪಲು ಎರಡು ರಕ್ಷಣಾ ತಂಡಗಳು ಕಾಲ್ನಡಿಗೆಯಲ್ಲಿ ಸಾಗಿವೆ.
ಪ್ರಸ್ತುತ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯನ್ನು ರಾಜ್ಯ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ರಕ್ಷಣಾ ಕಾರ್ಯಾಚರಣೆಯ ಮಾಹಿತಿ ತಿಳಿದುಕೊಳ್ಳುವ ಮೂಲಕ ಕರ್ನಾಟಕ ಸರ್ಕಾರವು ಉತ್ತರಾಖಂಡಕ್ಕೆ ಅಧಿಕಾರಿಯನ್ನು ಕಳುಹಿಸುವ ಸಾಧ್ಯತೆಯಿದೆ.












Click it and Unblock the Notifications