ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರಿದ ಅರ್ವಿಂದರ್ ಸಿಂಗ್
ನವದೆಹಲಿ, ಫೆಬ್ರವರಿ 17: ಕಳೆದ ವರ್ಷ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದ ಮಾಜಿ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅರ್ವಿಂದರ್ ಸಿಂಗ್ ಲವ್ಲೀ ಇಂದು ಕೈ ಪಕ್ಷಕ್ಕೆ ವಾಪಾಸಾಗಿದ್ದಾರೆ.
ಕಳೆದ ವರ್ಷ ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೂ ಮುನ್ನ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದೀಗ ಅವರು ಮತ್ತೆ ಪಕ್ಷಕ್ಕೆ ವಾಪಾಸಾಗಿದ್ದು ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಪಕ್ಷಕ್ಕೆ ಅರ್ವಿಂದರ್ ಸೇರ್ಪಡೆಯಾಗಿರುವುದನ್ನು ದೆಹಲಿ ಉಸ್ತುವಾರಿ ಪಿವಿ ಚಾಕೋ, ಶೀಲಾ ದೀಕ್ಷಿತ್ ಮತ್ತು ಅಜಯ್ ಮಾಕೇನ್ ಸ್ವಾಗತಿಸಿದ್ದಾರೆ.
ಅರ್ವಿಂದರ್ ಈ ಹಿಂದೆ ಶೀಲಾ ದೀಕ್ಷಿತ್ ಸರಕಾರದಲ್ಲಿ ಸಚಿವರೂ ಆಗಿದ್ದರು. ಪಕ್ಷಕ್ಕೆ ಸೇರ್ಪಡೆಯಾಗುವ ಮೊದಲು ಅರ್ವಿಂದರ್ ರಾಹುಲ್ ಗಾಂಧಿ, ಚಾಕೋ ಮತ್ತು ಮಾಕೇನ್ ಜತೆ ವಿಸ್ತೃತ ಮಾತುಕತೆ ನಡೆಸಿದ್ದರು.
ಕಾಂಗ್ರೆಸ್ ಗೆ ಸೇರ್ಪಡೆಯಾದ ನಂತರ ಮಾತನಾಡಿದ ಅರ್ವಿಂದರ್, "ಇದು (ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದು) ನನಗೆ ಖುಷಿಯ ನಿರ್ಧಾರವಾಗಿರಲಿಲ್ಲ. ನಾನು ದ್ವಂದ್ವದಲ್ಲಿದ್ದಾಗ ಈ ನಿರ್ಧಾರ ತೆಗೆದುಕೊಂಡಿದ್ದೆ. ಸೈದ್ಧಾಂತಿಕವಾಗಿ ನನಗೆ ಬಿಜೆಪಿಗೂ ಹೊಂದಾಣಿಕೆಯಾಗುವುದಿಲ್ಲ," ಎಂದು ಅವರು ಹೇಳಿದ್ದಾರೆ.